ಮಹಾರಾಷ್ಟ್ರದ ರೈತನಿಂದ 400 ಕೆಜಿ ಟೊಮೇಟೊ ಕದ್ದ ಖದೀಮರು
ಪುಣೆ, ಜುಲೈ 21: ಅಧಿಕ ಬೆಲೆಯಿಂದ ದೇಶಾದ್ಯಂತ ಸುದ್ದಿಯಲ್ಲಿರುವ ಪ್ರಮುಖ ಆಹಾರ ಬೆಳೆಯಾದ ಟೊಮೇಟೊ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಈಗ ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ತಮ್ಮ 400 ಕೆಜಿ ಟೊಮೇಟೊ ಕಳ್ಳತನವಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
400 ಕೆಜಿ ಟೊಮೇಟೊ ಕಳ್ಳತನದಿಂದ ಸುಮಾರು 20 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ರೈತ ಪೊಲೀಸರಿಗೆ ತಿಳಿಸಿದ್ದಾರೆ. ಹಲವಾರು ರಾಜ್ಯಗಳಲ್ಲಿ ಪ್ರಮುಖ ಅಡುಗೆ ಪದಾರ್ಥ ಟೊಮೇಟೊ ಕಿಲೋಗೆ 100 ರಿಂದ 200 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ.

ಭಾನುವಾರ ತಮ್ಮ ಜಮೀನಿನಲ್ಲಿ ಟೊಮೇಟೊ ಕಟಾವು ಮಾಡಿ ತರಕಾರಿಯನ್ನು ಕೂಲಿಕಾರರ ಸಹಾಯದಿಂದ ವಾಹನದಲ್ಲಿ ಶಿರೂರು ತಹಶೀಲ್ನಲ್ಲಿರುವ ಮನೆಗೆ ತಂದಿದ್ದೇ. ಧೋಮ್ ಟೊಮೇಟೊವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯೋಜಿಸಿದ್ದೇನು ಎಂದು ದೂರುದಾರ ಅರುಣ್ ಧೋಮ್ ಪೊಲೀಸರಿಗೆ ತಿಳಿಸಿದ್ದಾರೆ.
ಆದರೆ, ಸೋಮವಾರ ಬೆಳಗ್ಗೆ ಧೋಮ್ ಎಚ್ಚರಗೊಂಡು ನೋಡಿದಾಗ 400 ಕೆಜಿ ತೂಕದ ಬೆಲೆಬಾಳುವ ತರಕಾರಿಯ 20 ಕ್ರೇಟ್ಗಳು ನಾಪತ್ತೆಯಾಗಿದ್ದವು. ಆಗ ತನ್ನ ಟೊಮೇಟೊ ಕಳ್ಳತನವಾಗಿದೆ ಎಂದು ತಿಳಿದ ನಂತರ ಧೋಮ್ ಶಿರೂರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಪುಣೆ ಜಿಲ್ಲೆಯ ಮತ್ತೊಬ್ಬ ರೈತ 18,000 ಕ್ರೇಟ್ ಟೊಮೆಟೊಗಳನ್ನು 3 ಕೋಟಿ ರೂಪಾಯಿಗೆ ಮಾರಾಟ ಮಾಡಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಭಾರತದಲ್ಲಿ ದಿನೇ ದಿನೇ ಟೊಮೇಟೊ ಬೆಲೆ ಏರುತ್ತಲೇ ಇದ್ದ ಹಿನ್ನೆಲೆಯಲ್ಲಿ ದುಬೈನಿಂದ ಬರುತ್ತಿದ್ದ ಮಗಳಿಂದ ತಾಯಿಯೊಬ್ಬರು 10 ಕೆಜಿ ಟೊಮೇಟೊವನ್ನು ದೇಶಕ್ಕೆ ತರಿಸಿರುವ ಸಂಗತಿಯೂ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಟೊಮೇಟೊ ಬೆಲೆ ಗಗನಮುಖಿಯಾಗಿರುತ್ತಿರುವುದರಿಂದ ಹಲವೆಡೆ ಟೊಮೇಟೊ ತುಂಬಿದ್ದ ವಾಹನ, ಟೊಮೇಟೊ ಬೆಳೆದ ಹೊಲ ಎಲ್ಲೆಡೆ ಟೊಮೇಟೊ ಕಳ್ಳತನವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಕುಪ್ಪೆ ಗ್ರಾಮದ ಇಬ್ಬರು ರೈತರು ತಮ್ಮ ಜಮೀನಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಟೊಮೇಟೊ ಬೆಳೆಗೆ ರಕ್ಷಣೆ ನೀಡಿದ್ದಾರೆ.
ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಕಾವಲು ಕಾಯುತ್ತಿದ್ದ ವೇಳೆ ನಿದ್ದೆಗೆ ಜಾರಿದ ರೈತನ ಕತ್ತು ಹಿಸುಕಿ ಅಪರಿಚಿತರು ಕೊಲೆ ಮಾಡಿರುವ ಘಟನೆಯೂ ಇತ್ತಿಚೆಗೆ ನಡೆದಿದೆ. ಕಳೆದ ಏಳು ದಿನಗಳಲ್ಲಿ ಈ ಪ್ರದೇಶದಲ್ಲಿ ವರದಿಯಾದ ಎರಡನೇ ಸಾವು ಇದು. ದೇಶಾದ್ಯಂತ ಟೊಮೆಟೋ ಬೆಳೆಗೆ ಬೆಲೆ ಏರಿಕೆಯಾಗಿರುವ ಸಂದರ್ಭದಲ್ಲಿಯೇ ಈ ದಾರುಣ ಘಟನೆಗಳು ವರದಿಯಾಗುತ್ತಿವೆ.












Click it and Unblock the Notifications