ಬಿಜೆಪಿ ಭರ್ಜರಿ ಜಯದ ಹಿಂದೆ ಅಮಿತ್ ಶಾ ತಂತ್ರಗಾರಿಕೆ ಹೀಗಿತ್ತು!

ಜಾತಿ ರಾಜಕೀಯ, ಹಿಂದುಳಿದ ವರ್ಗಗಳ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೆಳೆದಿದ್ದು, ಅಖಿಲೇಶ್ ಸರ್ಕಾರ ಬಗ್ಗೆ ಎದ್ದಿದ್ದ ವಿರೋಧಿ ಅಲೆಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದು ಶಾ ಅವರ ಪ್ರಮುಖ ಕಾರ್ಯತಂತ್ರಗಳು.

ಭಾರತದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಅಮಿತ್ ಶಾ ಅವರಂಥಹ ಕುಶಲ ರಾಜಕೀಯ ತಜ್ಞ ಮತ್ತೊಬ್ಬರಿರಲಾರರು. ಅವರ ಕಾರ್ಯತಂತ್ರದ ಬಗ್ಗೆ ಟೀಕೆ ಟಿಪ್ಪಣಿಗಳೇನೇ ಇರಲಿ, ಪ್ರತಿ ಚುನಾವಣೆಯಲ್ಲಿ ಅವರು ಸಾಧಿಸಿ ತೋರುತ್ತಿರುವ ಫಲಿತಾಂಶ ಮಾತ್ರ ಎಲ್ಲರನ್ನೂ ಬೆರಗು ಮಾಡುತ್ತಿರುವುದಂತೂ ನಿಜ.

ಅವರ ಈ ಚಾಣಾಕ್ಷತೆಗೆ ಶನಿವಾರ ಹೊರಬಿದ್ದ ಉತ್ತರ ಪ್ರದೇಶ ಚುನಾವಣೆಯೇ ಸಾಕ್ಷಿ. ಇದು ಅವರ ತಂತ್ರಗಾರಿಕೆಗೆ ಸಿಕ್ಕ ಮತ್ತೊಂದು ಉದಾಹರಣೆಯಷ್ಟೇ. ಇದರ ಜತೆಗೇ ಆಡಳಿತಾರೂಢ ಯಾದವ್ ಸರ್ಕಾರದ ವಿರೋಧಿ ಅಲೆಯನ್ನು ಚೆನ್ನಾಗಿ ಬಳಸಿಕೊಂಡರು ಅವರು.[ಪ್ರಶಾಂತ್ ಕಿಶೋರ್ ವಿರುದ್ಧ ಸೇಡು ತೀರಿಸಿಕೊಂಡ ಅಮಿತ್ ಶಾ]

ಈ ಬಾರಿಯಂತೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂದು ಬಹುತೇಕರು ಅಂದಾಜು ಮಾಡಿದ್ದರಷ್ಟೇ. ಆದರೆ, ಒಟ್ಟು ಇರುವ 403 ಕ್ಷೇತ್ರಗಳಲ್ಲಿ 322ರಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ, ಈ ರಾಜ್ಯದ ಪ್ರಬಲ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಹಾಗೂ ಬಹುಜನ ಸಮಾಜ ಪಾರ್ಟಿಗಳನ್ನು ಧೂಳಿಪಟ ಮಾಡಿ ಅಧಿಕಾರ ಪಡೆದುಕೊಳ್ಳುತ್ತದೆ ಎಂದು ಯಾರೂ ಲೆಕ್ಕ ಹಾಕಿರಲಿಲ್ಲ.

ಇದನ್ನು ಸಾಧಿಸಿ ತೋರಿಸಿದ್ದೇ ಅಮಿತ್ ಶಾ. ತಮ್ಮದೇ ಆದ ವಿಶೇಷ ಕಾರ್ಯತಂತ್ರಗಳಿಂದ, ತಂತ್ರಗಾರಿಕೆಯಿಂದ ತಮ್ಮ ರಾಜಕೀಯ ಲೆಕ್ಕಾಚಾರ ಕರಾರುವಾಕ್ ಆಗಿ ನಡೆಯುವಂತೆ ಮಾಡಿಕೊಂಡಿದ್ದಾರೆ ಅವರು. ಅವರ ಉತ್ತರ ಪ್ರದೇಶ ಚುನಾವಣೆಯಲ್ಲಿ ಕೈಗೊಂಡ ಕಾರ್ಯ ತಂತ್ರಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಮಿತ್ ಅವರಿಗೂ ಇದು ಗೊತ್ತು

ಅಮಿತ್ ಅವರಿಗೂ ಇದು ಗೊತ್ತು

ಭಾರತದಲ್ಲಿ ಜಾತಿ ಭೂತದಿಂದ ದೂರವಿದ್ದು ರಾಜಕೀಯ ಮಾಡುವುದು ಅಸಾಧ್ಯ ಎಂದು ಅಮಿತ್ ಶಾ ಅವರಿಗೆ ಚೆನ್ನಾಗಿ ಗೊತ್ತಿದೆ. ಗುಜರಾತ್ ನಲ್ಲಿಯೂ ಮೋದಿಯವರ ಒಬಿಸಿ ಸರ್ಟಿಫಿಕೇಟ್ ಇಟ್ಟುಕೊಂಡೇ ಚುನಾವಣೆ ಎದುರಿಸಿ ಅವರನ್ನು ಒಂದಲ್ಲ, ಎರಡಲ್ಲ ಸತತ ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು. ಅದೇ ಒಬಿಸಿ ತಂತ್ರಗಾರಿಕೆಯನ್ನೇ ಶಾ, ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲೂ ಅನುಸರಿಸಿದರು.

ಯುಪಿ ಮೇಲೆಯೇ ಅವರ ಕಣ್ಣು

ಯುಪಿ ಮೇಲೆಯೇ ಅವರ ಕಣ್ಣು

ಉತ್ತರ ಪ್ರದೇಶ ರಾಜಕೀಯ ಅಮಿತ್ ಶಾ ಅವರಿಗೆ ಹೊಸತೇನಲ್ಲ. ಈ ಹಿಂದೆ, 2014ರ ಲೋಕಸಭಾ ಚುನಾವಣೆ ವೇಳೆ ಅವರು, ಮಿಕ್ಕೆಲ್ಲಾ ರಾಜ್ಯಗಳಿಗಿಂತ ಹೆಚ್ಚಾಗಿ ಅವರು ಉತ್ತರ ಪ್ರದೇಶದ ಮೇಲೆಯೇ ಕಣ್ಣಿಟ್ಟಿದ್ದರು. ಏಕೆಂದರೆ, ಅದು ಭಾರತದಲ್ಲೇ ಅತಿ ದೊಡ್ಡ ರಾಜ್ಯವಾಗಿದ್ದು ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಕಳಿಸುವ ರಾಜ್ಯವೂ ಹೌದು. ಹಾಗಾಗಿಯೇ, ಅಲ್ಲೇ ಹೆಚ್ಚು ಎಂಪಿ ಸೀಟುಗಳನ್ನು ಬಿಜೆಪಿ ಪಾಲು ಮಾಡಬೇಕು ಎಂತಲೇ ಅವರು ಪಣ ತೊಟ್ಟಿದ್ದರು. ಹಾಗಾಗಿ, ಅವರಿಗೆ ಉತ್ತರ ಪ್ರದೇಶದ ರಾಜಕೀಯ ಹಾಗೂ ಅಲ್ಲಿನ ಜಾತಿವಾರು ಲೆಕ್ಕಾಚಾರಗಳು ಅವರಿಗೆ ಕರಗತವಾಗಿದ್ದು.

ಅದೇ ಅವರನ್ನು ಕಾಪಾಡಿದ್ದು

ಅದೇ ಅವರನ್ನು ಕಾಪಾಡಿದ್ದು

2014ರಲ್ಲಿ ತಾವು ಕಲಿತ ಉತ್ತರ ಪ್ರದೇಶದ ಜಾತಿವಾರು ಲೆಕ್ಕಾಚಾರಗಳನ್ನೇ ಒಂದಿಷ್ಟು ಸಂಸ್ಕರಿಸಿ, ಶೋಧಿಸಿ, ಕಾಯಿಸಿ, ಸೋಸಿ ಹೊಸತೊಂದು ಲೆಕ್ಕಾಚಾರಕ್ಕೆ ಬಂದು ನಿಂತಿದ್ದರು ಅವರು. ಅದೇ - ಯಾದವರ ಹೊರತಾದ ಹಾಗೂ ಜಾಟವರ ಹೊರತಾದ ಜಾತಿಗಳನ್ನು ಬೆಸೆದುಕೊಳ್ಳುವುದು!

ಒಬಿಸಿ ಮೇಲೆಯೇ ಕಣ್ಣು

ಒಬಿಸಿ ಮೇಲೆಯೇ ಕಣ್ಣು

ಹೌದು. ನಿಮ್ಮ ಊಹೆ ಸರಿ. ಈ ಬಾರಿಯ ಚುನಾವಣೆ ವೇಳೆ ಆಡಳಿತದಲ್ಲಿದ್ದ ಸಮಾಜವಾದಿ ಪಕ್ಷದ ವೋಟ್ ಬ್ಯಾಂಕ್ ಆಗಿರುವ ಯಾದವರು ಹಾಗೂ ಬಹುಜನ ಸಮಾಜ ಪಕ್ಷದ ವೋಟ್ ಬ್ಯಾಂಕ್ ಆಗಿರುವ ಜಾಟವರನ್ನು ಹೊರತುಪಡಿಸಿದಂತೆ ಇತರ ಹಿಂದುಳಿದ ಜಾತಿಗಳಿದ್ದಾರಲ್ಲಾ (ಒಬಿಸಿ) ಅವರೇ ಶಾ ಕಣ್ಣಿಗೆ ದೇವರಂತೆ ಕಂಡಿದ್ದು. ಆ ಮಿಕ್ಕ ಜಾತಿಗಳನ್ನು ಸೆಳೆಯುವಂಥ ರಣ ತಂತ್ರಗಳನ್ನು ರೂಪಿಸಿದ್ದರಿಂದಲೇ ಅವರು ಜಯದ ಸೌಧ ಕಟ್ಟಲಾರಂಭಿಸಿದರು.

ಹೊಸ ಸಂದೇಶ ರವಾನೆ

ಹೊಸ ಸಂದೇಶ ರವಾನೆ

ಈ ಹೊಸ ಜಾತಿವಾರು ಲೆಕ್ಕಾಚಾರಕ್ಕೆ ಪೂರಕವಾಗಿ ಅವರು, ಬಿಎಸ್ ಪಿಯಲ್ಲಿ ಅತೃಪ್ತಿ ಹೊಂದಿದ್ದ ಹಿಂದುಳಿದ ವರ್ಗಗಳ ನಾಯಕರಾದ ಬಾಬು ಸಿಂಗ್ ಕುಶ್ವಾರಾ, ಬಾದ್ ಷಾ ಸಿಂಗ್, ದಬ್ಬನ್ ಮಿಶ್ರಾ ಹಾಗೂ ಅವಧೇಶ್ ಕುಮಾರ್ ವರ್ಮಾ ಅಂಥವರನ್ನು ಬಿಜೆಪಿಗೆ ಸೆಳೆದರು. ಅವರು ಬಿಜೆಪಿಗೆ ಬರುವಾಗ ಕೇವಲ ತಾವು ಮಾತ್ರ ಬರಲಿಲ್ಲ, ತಮ್ಮೊಂದಿಗೆ ತಮ್ಮ ಹಿಂಬಾಲಕರನ್ನೂ ಕರೆತರುವ ಮೂಲಕ ಬಿಜೆಪಿ ದಲಿತ ಪರ ಎಂಬ ಸಂದೇಶವನ್ನು ತಮ್ಮ ತಮ್ಮ ಪ್ರಾಂತ್ಯಗಳಿಗೆ, ಕ್ಷೇತ್ರಗಳಿಗೆ ರವಾನಿಸಿದರು. ಅಲ್ಲಿಗೆ, ಶಾ ತಮ್ಮ ಹಾದಿಯಲ್ಲಿ ಅರ್ಧ ಯಶಸ್ಸು ಕಂಡಿದ್ದರು.

ಪ್ರಚಾರದಲ್ಲಿ ನಾಜೂಕುತನ

ಪ್ರಚಾರದಲ್ಲಿ ನಾಜೂಕುತನ

ಶಾ ಅವರ ಮತ್ತೊಂದು ತಂತ್ರಗಾರಿಕೆಯೆಂದರೆ, ಮೋದಿಯವರಿಂದ ಸುಮಾರು 10ಕ್ಕೂ ಹೆಚ್ಚು ಪ್ರಚಾರ ಸಭೆಗಳನ್ನು ನಡೆಸಿದ್ದು. ಮೋದಿ ಪ್ರಬುದ್ಧ ಮಾತುಗಾರ. ಅಷ್ಟೇ ಅಲ್ಲ, ತಮ್ಮ ಮಾತುಗಳಿಂದ ಎಂಥವರನ್ನೂ ಮಂತ್ರಮುಗ್ಧಗೊಳಿಸುವಂಥ ಮೋಡಿಗಾರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನು ಖುದ್ದು ತಾವೂ ಬಲ್ಲವರಾಗಿದ್ದರಿಂದಲೇ ಮೋದಿಯವರು ಪದೇ ಪದೇ ಉತ್ತರ ಪ್ರದೇಶದಲ್ಲಿ ದೊಡ್ಡ ದೊಡ್ಡ ಬಹಿರಂಗ ಸಭೆ ನಡೆಸುವಂತೆ ಮಾಡಿದರು.

ಎಲ್ಲದರಲ್ಲೂ ಲೆಕ್ಕಾಚಾರ

ಎಲ್ಲದರಲ್ಲೂ ಲೆಕ್ಕಾಚಾರ

ಬೇಕಾದರೆ ಗಮನಿಸಿ, ವಾರಣಾಸಿಯಲ್ಲಿ ಅಖಿಲೇಶ್ ಯಾದವ್-ರಾಹುಲ್ ಗಾಂಧಿ ರೋಡ್ ಶೋ ನಡೆಸುವುದು ನಿಶ್ಚಯವಾಗಿದ್ದಾಗಲೇ ಅದೇ ದಿನ ಆ ರೋಡ್ ಶೋಗೂ ಮುನ್ನ ಒಂದೆರಡು ಗಂಟೆ ಮೊದಲೇ ಮೋದಿಯವರ ರೋಡ್ ಶೋ ನಡೆಯುವಂತೆ ನೋಡಿಕೊಂಡರು ಅಮಿತ್ ಶಾ.

ವಿರೋಧಿಗಳನ್ನೂ ಮೀರಿಸಿದ ಸೆಳೆತ

ವಿರೋಧಿಗಳನ್ನೂ ಮೀರಿಸಿದ ಸೆಳೆತ

ಒಂದೇ ದಿನ ವಾರಣಾಸಿಯ ಬೇರೆ ಬೇರೆ ಪ್ರಾಂತ್ಯಗಳಲ್ಲಿ ರಾಹುಲ್ ಹಾಗೂ ಬಿಎಸ್ ಪಿಯ ಮಾಯಾವತಿ ಪ್ರಚಾರ ನಡೆಸಿದರೂ ಅದೇ ದಿನ ಮೋದಿಯವರ ಭಾಷಣವನ್ನೂ ಏರ್ಪಡಿಸಿ ಆ ಕ್ಷೇತ್ರದ ಮತದಾರರ ಚಿತ್ತ ಚಂಚಲವಾಗದಂತೆ ನೋಡಿಕೊಂಡರು.

ವಿಶೇಷ ಕಾರ್ಯತಂತ್ರ

ವಿಶೇಷ ಕಾರ್ಯತಂತ್ರ

ಅಷ್ಟೇ ಅಲ್ಲ, ಮೋದಿಯವರ ಪ್ರತಿಯೊಂದು ಭಾಷಣದಲ್ಲೂ ಯಾದವ್ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವಲ್ಲಿ ಹೇಳಿಸಿದರು. ಕಟುವಾದ ಮಾತುಗಳಲ್ಲಿ (ಮೋದಿಯವರ ಸ್ಮಶಾನ ಹೇಳಿಕೆ ವಿವಾದವೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.) ಹೀಗೆ, ಸಮಾಜವಾದಿ ಪಕ್ಷದ ವಿರೋಧಿ ಅಲೆಯನ್ನು ಸಮರ್ಪಕವಾಗಿ ತಮ್ಮತ್ತ ಸೆಳೆಯುವತ್ತ ಅವರು ಯಶಸ್ವಿಯಾದರು. ಅತ್ತ, ಮಾಧ್ಯಮಗಳನ್ನೂ ಚೆನ್ನಾಗಿ ಬಳಸಿಕೊಂಡರು ಅವರು.
ಹೀಗೆ, ತಮ್ಮ ಹತ್ತಾರು ಕಾರ್ಯತಂತ್ರಗಳಿಂದಲೇ ಅಮಿತ್ ಶಾ ಇಂದು ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ದೊಡ್ಡದೊಂದು ಗೆಲವನ್ನು ತಂದುಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+