ಭಾರತದಲ್ಲಿ ಏಕಕಾಲಕ್ಕೆ ಚುನಾವಣೆ: ಇಲ್ಲಿದೆ ಬ್ರೇಕಿಂಗ್ ನ್ಯೂಸ್!
ಭಾರತದಲ್ಲಿ ಚುನಾವಣೆಗಳನ್ನು ಒಂದೇ ಸಮಯಕ್ಕೆ ನಡೆಸುವ ಪ್ರಕ್ರಿಯೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ದೇಶಾದ್ಯಂತ ಲೋಕಸಭೆ, ರಾಜ್ಯ ವಿಧಾನಸಭೆ ಹಾಗೂ ಪುರಸಭೆ ಸೇರಿದಂತೆ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ವಿಷಯ ಪ್ರಸ್ತಾಪವಾಗಿದೆ. ಹೀಗಾಗಿ 'ಒಂದು ದೇಶ, ಒಂದು ಚುನಾವಣೆ' ಕುರಿತಾಗಿ ಪರಿಶೀಲನೆ ನಡೆಸಲು, ಕೇಂದ್ರ ಕಾನೂನು ಸಚಿವಾಲಯ ಐತಿಹಾಸಿಕ ಆದೇಶ ಹೊರಡಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
'ಒಂದು ದೇಶ, ಒಂದು ಚುನಾವಣೆ' ಕುರಿತಾಗಿ ಪರಿಶೀಲನೆ ನಡೆಸಿ, ಶಿಫಾರಸು ಮಾಡಲು 8 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ಕೇಂದ್ರ ಕಾನೂನು ಸಚಿವಾಲಯ ಇದೀಗ ಆದೇಶ ಹೊರಡಿಸಿದೆ. ಹೀಗಾಗಿ ಮತ್ತೆ ಇಡೀ ದೇಶದ ಗಮನ ಕೇಂದ್ರ ಸರ್ಕಾರದ ನಿರ್ಧಾರದ ಕಡೆಗೆ ನೆಟ್ಟಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಒಂದು ದೇಶ, ಒಂದು ಚುನಾವಣೆ ವಿಧೇಯಕ ಮಂಡನೆ ಆಗಲಿರುವ ಕುರಿತು ನಿನ್ನೆ ವಿಚಾರ ಹೊರಬಿದ್ದಿದ್ದು, ಈ ಕುರಿತು ಇಂದು ಮಹತ್ವದ ಹೆಜ್ಜೆ ಇರಿಸಲಾಗಿದೆ. ಸೆಪ್ಟೆಂಬರ್ 18ರಿಂದ 22ರ ವರೆಗೂ ಸಂಸತ್ತಿನ ವಿಶೇಷ ಅಧಿವೇಶನವನ್ನ ನಡೆಸಲು ನಿರ್ಧರಿಸಲಾಗಿದೆ.

ಇಲ್ಲಿದೆ ನೋಡಿ ಮಹತ್ವದ ಸಮಿತಿ!
ಮತ್ತೊಂದ್ಕಡೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯನ್ನೂ ರಚನೆ ಮಾಡಲಾಗಿದೆ. ಇಂದು ಆ ಸಮಿತಿಗೆ 7 ಸದಸ್ಯರನ್ನು ನೇಮಿಸಲಾಗಿದೆ. ಈ ಮೂಲಕ ಒಂದು ದೇಶ, ಒಂದು ಚುನಾವಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ಅಧಿರ್ ರಂಜನ್ ಚೌಧರಿ, ಮಾಜಿ ಸಂಸದ ಗುಲಾಂ ನಬಿ ಆಜಾದ್, 15ನೇ ಹಣಕಾಸು ಆಯೋಗದ ಮಾಜಿ ಚೇರ್ಮನ್ ಎನ್.ಕೆ. ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಸೇರಿ ಮಾಜಿ ಚೀಫ್ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಇದ್ದಾರೆ.
ಸಮಿತಿಯ ಕಾರ್ಯ ಏನು?
ಇದೀಗ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಸಮಿತಿಯು ಭಾರತದ ಸಂವಿಧಾನ ಮತ್ತು ಇತರ ಶಾಸನಬದ್ಧ ಚೌಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಪರಿಶೀಲನೆ ನಡೆಸಲಿದೆ. ಪರಿಶೀಲನೆ ಬಳಿಕ ಸಂಸತ್ನ ಕೆಳಮನೆ ಅಂದರೆ ಲೋಕಸಭೆಗೆ ಶಿಫಾರಸು ನೀಡಲಿದೆ. ದೇಶಾದ್ಯಂತ ಲೋಕಸಭೆ, ರಾಜ್ಯ ವಿಧಾನಸಭೆ ಹಾಗೂ ಪುರಸಭೆ ಸೇರಿ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಇರುವ ಸಾಧ್ಯತೆಗಳ ಬಗ್ಗೆ ಈ ಮಹತ್ವದ ಸಮಿತಿಯು ಮಾಹಿತಿಯನ್ನ ನೀಡಲಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದ್ದವು. ರಾಜ್ಯ ವಿಧಾನಸಭೆಗಳು ಸೇರಿದಂತೆ ಲೋಕಸಭೆಗೆ ಒಂದೇ ಸಮಯಕ್ಕೆ ಚುನಾವಣೆ ನಡೆದಿವೆ. ಆದರೆ 1967 ರವರೆಗೆ ಇದ್ದ ಈ ವ್ಯವಸ್ಥೆ ನಂತರ ಬದಲಾಗುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬದಲಾದ ಸನ್ನಿವೇಶ ಏಕಕಾಲಕ್ಕೆ ಚುನಾವಣೆ ನಡೆಯಲು ಅಡ್ಡಿಯಾಗಿತ್ತು. 1968 ಮತ್ತು 1969 ರಲ್ಲಿ ಕೆಲ ರಾಜ್ಯಗಳ ವಿಧಾನಸಭೆ ಅವಧಿಗೆ ಮುನ್ನವೇ ವಿಸರ್ಜನೆಗೊಂಡವು. ಅಲ್ಲದೆ 1970 ರಲ್ಲಿ ಲೋಕಸಭೆಯನ್ನು ವಿಸರ್ಜನೆ ಮಾಡಲಾಯಿತು. ಇದಾದ ನಂತರ ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ ನಡೆಸಲು ಸಲಹೆ ಕೇಳಿಬಂದಿತ್ತು. ಆದರೆ ಈಗ ಅದಕ್ಕೆ ಒಂದು ರೂಪ ಸಿಗುವ ಮುನ್ಸೂಚನೆ ಸಿಕ್ಕಿದೆ. ಈ ಬಗ್ಗೆ ಪರ & ವಿರೋಧದ ಚರ್ಚೆ ಜೋರಾಗಿದೆ.
ಒಟ್ನಲ್ಲಿ ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ, ರಾಜ್ಯ ವಿಧಾನಸಭೆ & ಪುರಸಭೆ ಸೇರಿದಂತೆ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ವ್ಯವಸ್ಥೆ ಜಾರಿಗೆ ಬಂದರೆ ನಮಗೆ ಸಮಸ್ಯೆ ಅಂತಾ ಕೆಲವು ಪ್ರಾದೇಶಿಕ ಪಕ್ಷಗಳು ವಾದವನ್ನ ಮುಂದಿಟ್ಟಿವೆ. ಹೀಗಾಗಿ ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.












Click it and Unblock the Notifications