ಆಂಬುಲೆನ್ಸ್ ಇಲ್ಲದೇ ಬೈಕ್ನಲ್ಲಿ 3 ವರ್ಷದ ಮಗುವಿನ ಮೃತದೇಹ ಹೊತ್ತೊಯ್ದ ದಂಪತಿ!
ಖಮ್ಮಮ್, ನವೆಂಬರ್ 7: ಜನರಲ್ಲಿ ಮಾನವೀಯತೆ ಮರೆಯಾಗುತ್ತಿದೆಯಾ ಎಂಬ ಅನುಮಾನವನ್ನು ಹುಟ್ಟುಹಾಕುವ ಘಟನೆಗಳು ಪದೇಪದೆ ಜರಗುತ್ತಿವೆ. ಮೂಲಭೂತ ಸೌಕರ್ಯಗಳ ಕೊರತೆ ಒಂದು ಕಡೆಯಾದರೆ, ಮನುಷ್ಯತ್ವವನ್ನೇ ಕದುಕುವ ಸನ್ನಿವೇಶಗಳು ವರದಿಯಾಗುತ್ತಿವೆ.
ತೆಲಂಗಾಣದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ಬುಡಕಟ್ಟು ಜನಾಂಗದ ದಂಪತಿಯು ತಮ್ಮ 3 ವರ್ಷದ ಕಂದಮ್ಮನ ಮೃತದೇಹವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಿರುವ ಘಟನೆಯು ನಡೆದಿದೆ.
ರೈಲಿನಲ್ಲಿ ಪ್ಲಾಸ್ಟಿಕ್ ಚೀಲ ಹಾಕಿಕೊಂಡು ಬಾಳೆಹಣ್ಣು ತಿಂದ ಮಹಿಳೆ
ಆದಿವಾಸಿ ಜನಾಂಗಕ್ಕೆ ಸೇರಿದ ದಂಪತಿಯ 3 ವರ್ಷದ ಮಗು ಮೂರ್ಖೆ ರೋಗ ಮತ್ತು ಜ್ವರದಿಂದ ತೆಲಂಗಾಣದ ಖಮ್ಮಂ ಆಸ್ಪತ್ರೆಯಲ್ಲಿ ಮೃತಪಟ್ಟಿತು. ಆ ಮಗುವಿನ ಮೃತದೇಹ ಸಾಗಿಸುವುದಕ್ಕೆ ಆಂಬುಲೆನ್ಸ್ ವ್ಯವಸ್ಥೆಯನ್ನು ಒದಗಿಸಲು ಆಸ್ಪತ್ರೆಯ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ನೊಂದ ದಂಪತಿಯು ಬೇರೆ ದಾರಿ ಕಾಣದೇ ತಮ್ಮ ಪುಟ್ಟ ಮಗುವಿನ ಮೃತದೇಹವನ್ನು ದ್ವಿಚಕ್ರ ವಾಹನದಲ್ಲೇ ಸಾಗಿಸಿರುವ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯ ಕುರಿತು ಮುಂದೆ ಓದಿ ತಿಳಿಯಿರಿ.
ಆಂಬುಲೆನ್ಸ್ ಇಲ್ಲದೇ ಬೈಕ್ನಲ್ಲಿ ಮೃತದೇಹ
ಆದಿವಾಸಿ ಕುಟುಂಬಕ್ಕೆ ಸೇರಿದ ದಂಪತಿಯು ಕಡುಬಡವರಾಗಿದ್ದು, ತಮ್ಮ 3 ವರ್ಷದ ಮಗುವಿನ ಮೃತದೇಹವನ್ನು ಸಾಗಿಸುವುದಕ್ಕೆ ಆಂಬುಲೆನ್ಸ್ ಪಡೆದುಕೊಳ್ಳುವುದಕ್ಕೆ ಹಣವಿರಲಿಲ್ಲ. ಹೀಗಾಗಿ ಖಮ್ಮಂ ಆಸ್ಪತ್ರೆಯಿಂದ 68 ಕಿಲೋ ಮೀಟರ್ ದೂರದಲ್ಲಿ ಇರುವ ಎಂಕೂರ್ ಮಂಡಲದ ಕೊಥಮೆಡಪಲ್ಲಿಗೆ ಬೈಕ್ನಲ್ಲಿಯೇ ಕರೆದುಕೊಂಡು ಹೋಗಿದ್ದಾರೆ.
ಮೊದಲು ಎಂಕೂರ್ ಆಸ್ರತ್ರೆಗೆ ಮಗು ದಾಖಲು
ಪ್ರಾಥಮಿಕ ಮಾಹಿತಿಯ ಪ್ರಕಾರ, ವೆಟ್ಟಿ ಮಲ್ಲ ಮತ್ತು ಆದಿ ಎಂಬ ದಂಪತಿಯ ಮೂರು ವರ್ಷದ ಪುತ್ರಿ ಸುಕ್ಕಿ ಜ್ವರ ಮತ್ತು ಫಿಟ್ಸ್ನಿಂದ ಬಳಲುತ್ತಿದ್ದರು. ಈ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದಕ್ಕಾಗಿಯೇ ಎಂಕೂರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಯಿತು. ವೈದ್ಯರ ಸಲಹೆಯ ಮೇರೆಗೆ, ಸೋಮವಾರ ಬೆಳಿಗ್ಗೆ ಮಗುವನ್ನು ಖಮ್ಮಂ ಪ್ರಧಾನ ಕಚೇರಿಗೆ ಸ್ಥಳಾಂತರಿಸಲಾಯಿತು.
ಆಂಬುಲೆನ್ಸ್ ಒದಗಿಸುವಲ್ಲಿ ಆಸ್ಪತ್ರೆ ಸಿಬ್ಬಂದಿ ವೈಫಲ್ಯ
ಜ್ವರ ಮತ್ತು ಫಿಟ್ಸ್ ರೋಗದಿಂದ ಬಳಲುತ್ತಿದ್ದ ಮಗು ಸುಕ್ಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿತು. ನಂತರದಲ್ಲಿ ಮಗುವಿನ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಯು ಯಾವುದೇ ರೀತಿ ಕರುಣೆಯನ್ನು ತೋರಿಸಲಿಲ್ಲ. ಮಗುವಿನ ಮೃತದೇಹವನ್ನು ಸಾಗಿಸುವುದಕ್ಕೆ ಯಾವುದೇ ನೆರವು ನೀಡಲಿಲ್ಲ. ಆಂಬುಲೆನ್ಸ್ ಸೌಲಭ್ಯ ಒದಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರು ಎಂದು ಮಗುವಿನ ತಂದೆ ವೆಟ್ಟಿಮಲ್ಲ ಆರೋಪಿಸಿದ್ದಾರೆ.
100 ರೂಪಾಯಿಯಲ್ಲಿ ಗ್ರಾಮಕ್ಕೆ ತೆರಳಿದ ದಂಪತಿ
ಆಂಬುಲೆನ್ಸ್ ಸೌಲಭ್ಯವನ್ನು ನೀಡಲು ಆಸ್ಪತ್ರೆಯ ಸಿಬ್ಬಂದಿಯು ನಿರಾಕರಿಸುತ್ತಿದ್ದಂತೆ, ಮನನೊಂದ ದಂಪತಿಯು 100 ರೂಪಾಯಿ ತೆಗೆದುಕೊಂಡು ಸ್ವಗ್ರಾಮಕ್ಕೆ ತೆರಳಿದರು. ತನ್ನ ಮಗಳು ಮೃತಪಟ್ಟಿದ್ದು, ಮೃತದೇಹವನ್ನು ಕರೆ ತರುವುದಕ್ಕೆ ನೆರವು ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು. ಈ ವೇಳೆ ಗ್ರಾಮದ ಯುವಕನೊಬ್ಬ ತನ್ನ ಬೈಕಿನಲ್ಲಿ ಬಾಲಕಿ ಮೃತದೇಹವನ್ನು ತರುವುದಕ್ಕಾಗಿ ಸಹಾಯ ಮಾಡಲು ಮುಂದಾದರು. ಬಾಲಕಿ ಮೃತದೇಹವನ್ನು ಸಾಗಿಸಲು ಆಂಬುಲೆನ್ಸ್ ಒದಗಿಸದ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ಕೃತ್ಯಕ್ಕೆ ಗ್ರಾಮಸ್ಥರು ಆಕ್ರಾಶೋ ವ್ಯಕ್ತಪಡಿಸಿದ್ದಾರೆ.