ತೆಲಂಗಾಣದಲ್ಲಿ ಆಪರೇಷನ್ ಕಮಲ: ಕೊರೊನಾಗಿಂತಲೂ ಅಪಾಯಕಾರಿ ಎಂದ ಕಾಂಗ್ರೆಸ್
ಬೆಂಗಳೂರು, ಅಕ್ಟೋಬರ್ 27: ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಬಿಜೆಪಿ ಹಣದ ಆಮಿಷ ಒಡ್ಡಿರುವ ಆರೋಪಗಳು ಕೇಳಿಬಂದಿವೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಆಪರೇಷನ್ ಕಮಲದ ವಿರುದ್ಧ ಹರಿಹಾಯ್ದಿದೆ.
'ತೆಲಂಗಾಣದಲ್ಲಿ ಬಿಜೆಪಿಯ ಕುದುರೆ ವ್ಯಾಪಾರದ ಬಣ್ಣ ಬಯಲಾಗಿದೆ. ಬಿಜೆಪಿಗೆ ಈಗ ಭ್ರಷ್ಟ ಹಣದ ಮದವೇರಿದೆ, ಪ್ರಜಾಪ್ರಭುತ್ವವನ್ನೇ ಖರೀದಿಸಲು ಹೊರಟಿದೆ. ತೆಲಂಗಾಣದ ಆಪರೇಷನ್ ಕಮಲದ ವ್ಯವಹಾರದಲ್ಲಿ ಶಾಸಕರ ಮುಖಂಡತ್ವ ವಹಿಸುವವರಿಗೆ ₹100 ಕೋಟಿ. ಬರುವ ಪ್ರತಿ ಶಾಸಕರಿಗೆ ₹50 ಕೋಟಿ. ಈ ಮೊತ್ತದ ಹಣ ಬಂದಿದ್ದು ಹೇಗೆ' ಎಂದು ಕೆಪಿಸಿಸಿ ಕೇಳಿದೆ.
'ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಸಿಕ್ಕವರ ತುಳಿಯುತಲಿತ್ತು ಎಂಬ ಬೇಂದ್ರೆಯವರ ಸಾಲಿನಂತೆ ಭ್ರಷ್ಟ ಕಾಂಚಾಣದಿಂದ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ಹಾಕಿಕೊಂಡು ತುಳಿಯುತ್ತಿದೆ. ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಆಪರೇಷನ್ ಕಮಲ ಎಂಬ ಸೋಂಕು ಕೊರೊನಾಗಿಂತಲೂ ಅಪಾಯಕಾರಿ' ಎಂದು ವಾಗ್ದಾಳಿ ನಡೆಸಿದೆ.
'ಕರ್ನಾಟಕದಲ್ಲಿ ಶುರುವಾದ ಆಪರೇಷನ್ ಕಮಲ ಎಂಬ ಸೋಂಕು ದೇಶದಾದ್ಯಂತ ಹರಡಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ದೇಶದಾದ್ಯಂತ ಶಾಸಕರನ್ನು ಖರೀದಿಸಲು ಏಳರಿಂದ ಎಂಟು ಸಾವಿರ ಕೋಟಿ ಖರ್ಚು ಮಾಡಿರುವ ಆರೋಪ ಬಿಜೆಪಿ ಮೇಲಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದ ನಂತರ ಈಗ ತೆಲಂಗಾಣಕ್ಕೆ ಭ್ರಷ್ಟ ಹಣ ತಲುಪಿದೆ' ಎಂದು ಆರೋಪಿಸಿದೆ.
'ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಬಂದವರಲ್ಲಿ 15 ಕೋಟಿ ಹಣ ದೊರಕಿದೆ, ಅದಲ್ಲದೆ ನೂರಿನ್ನೂರು ಕೋಟಿಗೂ ಅಧಿಕ ಮೊತ್ತದ ವ್ಯವಹಾರ ಅದಾಗಿದೆ. ಐಟಿ, ಇಡಿಗಳು ಇದುವರೆಗೂ ಆ ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲವೇಕೆ? ಆ ಅಕ್ರಮ ಹಣದ ಮೂಲ ಹುಡುಕುವ ಮನಸಿಲ್ಲವೇ? ಐಟಿ, ಇಡಿಗಳಿಗೆ ಬಿಜೆಪಿಯವರ ಮನೆಗೆ ನುಗ್ಗಲು ಭಯವೇ?' ಎಂದು ಕೇಳಿದೆ.
ತೆಲಂಗಾಣದಲ್ಲಿ ಆಪರೇಷನ್ ಕಮಲ ಆರೋಪ
ತೆಲಂಗಾಣದಲ್ಲಿ ಆಪರೇಷನ್ ಕಮಲದ ಆರೋಪ ಕೇಳಿ ಬಂದಿದೆ. ಟಿಆರ್ಎಸ್ನ ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಹಣದ ಆಮಿಷ ಒಡ್ಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬುಧವಾರ ರಾತ್ರಿ ಫಾರ್ಮ್ ಹೌಸ್ ಒಂದರಲ್ಲಿ ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿಗಳಿಂದ ರಹಸ್ಯ ಮಾತುಕತೆ ನಡೆದಿದೆ. ಟಿಆರ್ಎಸ್ ಶಾಸಕರೊಬ್ಬರಿಗೆ ₹ 100 ಕೋಟಿ ನೀಡಲಾಗಿದೆ. ಇನ್ನುಳಿದವರಿಗೆ ತಲಾ ₹ 50 ಕೋಟಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಹಸ್ಯ ಮಾತುಕತೆ ನಡೆದ ಫಾರ್ಮ್ ಹೌಸ್ ಟಿಆರ್ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿಗೆ ಸೇರಿದೆ. ಈ ರೆಡ್ಡಿ ಅವರೇ ಪೊಲೀಸರಿಗೆ ಕರೆ ಮಾಡಿ ಆಪರೇಷನ್ ಕಮಲದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾದ ಮೂವರು ಆರೋಪಿಗಳು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಮೂವರು ಆರೋಪಿಗಳು ಬಿಜೆಪಿ ನಾಯಕರೊಂದಿಗೆ ಇರುವ ಫೋಟೊಗಳನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಆಪರೇಷನ್ ಕಮಲದ ಆರೋಪ ಸುಳ್ಳು ಎಂದ ಬಿಜೆಪಿ
ಆಪರೇಷನ್ ಕಮಲದ ಆರೋಪವೇ ಸುಳ್ಳೆಂದು ಬಿಜೆಪಿ ಹೇಳಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಬರೆದು, ನಿರ್ದೇಶಿಸಿ, ನಿರ್ಮಾಣ ಮಾಡಿರುವ ನಾಟಕವನ್ನು ಕೆಆರ್ಎಸ್ ಪ್ರದರ್ಶನ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ.
ನಿನ್ನೆ ರಾತ್ರಿ ಫಾರ್ಮ್ಹೌಸ್ ಒಂದರಲ್ಲಿ ರಹಸ್ಯ ಮಾತುಕತೆ ನಡೆಸಲಾಗಿದೆ. ಈ ವೇಳೆ, ಟಿಆರ್ಎಸ್ನ ಪ್ರಮುಖ ನಾಯಕರೊಬ್ಬರಿಗೆ ₹ 100 ಕೋಟಿ ನೀಡಲಾಯಿದೆ ಎಂದು ಪೊಲೀಸರು ಹೇಳಿದ್ದಾರೆ.