2024ರ ಚುನಾವಣೆಗೆ ತಯಾರಿ: ರಾಷ್ಟ್ರೀಯ ಕಚೇರಿ ಉದ್ಘಾಟಿಸಿದ ತೆಲಂಗಾಣ ಸಿಎಂ ಕೆಸಿಆರ್
ನವದೆಹಲಿ, ಡಿ.14: ದೆಹಲಿಯ ಸರ್ದಾರ್ ಪಟೇಲ್ ಮಾರ್ಗದಲ್ಲಿ ಭಾರತ್ ರಾಷ್ಟ್ರ ಸಮಿತಿ ಪಕ್ಷದ ರಾಷ್ಟ್ರೀಯ ಕಚೇರಿಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಬುಧವಾರ ಉದ್ಘಾಟಿಸಿದ್ದಾರೆ.
ಮಧ್ಯಾಹ್ನ 12.37 ಕ್ಕೆ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಧ್ವಜಾರೋಹಣ ಮಾಡಿದ ಅವರು ಪಕ್ಷದ ಕಚೇರಿಯಲ್ಲಿ ತಮ್ಮ ಕುರ್ಚಿಯಲ್ಲಿ ಆಸೀನರಾಗಿ, ಪಕ್ಷದ ದಾಖಲೆಗಳಿಗೆ ಸಹಿ ಹಾಕಿದ್ದಾರೆ.
2024ರ ಚುನಾವಣೆ; ತೆಲಂಗಾಣ ರಾಷ್ಟ್ರ ಸಮಿತಿ ಇನ್ಮುಂದೆ ಭಾರತ್ ರಾಷ್ಟ್ರ ಸಮಿತಿ!
ಇಷ್ಟು ದಿನ ತೆಲಂಗಾಣ ರಾಷ್ಟ್ರ ಸಮಿತಿ ಎಂದಿದ್ದ ಪಕ್ಷವನ್ನು "ಭಾರತ್ ರಾಷ್ಟ್ರ ಸಮಿತಿ" ಎಂದು ಮರುನಾಮಕರಣ ಮಾಡಿದ್ದರು. ಈಗ ನೂತನ ರಾಷ್ಟ್ರೀಯ ಕಚೇರಿಯನ್ನು ಸ್ಥಾಪಿಸುವ ಮೂಲಕ 2024ರ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ.
ಕಚೇರಿ ಉದ್ಘಾಟನೆಗೆ ಹಲವು ರಾಜಕೀಯ ಪಕ್ಷಗಳ ನಾಯಕರು ಮತ್ತು ರೈತ ಮುಖಂಡರು ಸಾಥ್ ನೀಡಿದ್ದಾರೆ.
ತೆಲಂಗಾಣ ಸಿಎಂಗೆ ಅಖಿಲೇಶ್ ಯಾದವ್, ಕುಮಾರಸ್ವಾಮಿ ಸಾಥ್
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಪ್ರಾದೇಶಿಕ ಪಕ್ಷಗಳ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇವರ ಜೊತೆಗೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಒಡಿಶಾ ಮತ್ತು ತಮಿಳುನಾಡಿನ ರೈತ ಮುಖಂಡರು ಉಪಸ್ಥಿತರಿದ್ದು, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ಗೆ ಬೆಂಬಲ ಘೋಷಿಸಿದ್ದಾರೆ.
ಶೃಂಗೇರಿ ಪೀಠದ ಗೋಪಿಕೃಷ್ಣ ಶರ್ಮಾ ನೇತೃತ್ವದಲ್ಲಿ ರಾಜಶ್ಯಾಮಲ ಯಾಗ
ನೂತನ ಕಚೇರಿ ಉದ್ಘಾಟನ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಕೆಸಿಆರ್, ಬಿಆರ್ಎಸ್ ಪಕ್ಷದ ಕಚೇರಿಯಲ್ಲಿ ಎರಡು ದಿನಗಳ ರಾಜಶ್ಯಾಮಲ ಯಾಗದ ಸಮಾರೋಪವನ್ನು ಸೂಚಿಸಿ ಪೂರ್ಣಾಹುತಿ ನೆರವೇರಿಸಿದರು.
ಶೃಂಗೇರಿ ಪೀಠದ ಗೋಪಿಕೃಷ್ಣ ಶರ್ಮಾ ಮತ್ತು ಫಣಿ ಶಶಾಂಕ ಶರ್ಮಾ ನೇತೃತ್ವದಲ್ಲಿ ಒಟ್ಟು 12 ಅರ್ಚಕರು ಯಾಗವನ್ನು ನಡೆಸಿಕೊಟ್ಟರು. ನವ ಚಂಡಿ ಹೋಮ ಮತ್ತು ರಾಜಶ್ಯಾಮಲ ಹೋಮವನ್ನೂ ನಡೆಸಿದ್ದಾರೆ.
ಪಕ್ಷದ ಶಾಸಕರು, ಸಂಸದರಿಂದ ತುಂಬಿದ್ದ ನೂತನ ಕಚೇರಿ
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಪಕ್ಷದ ಸಚಿವರು, ಸಂಸದರು, ಶಾಸಕರು, ಎಂಎಲ್ಸಿಗಳು ಮತ್ತು ಇತರ ಹಿರಿಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಗೆ ಆಗಮಿಸಿದ್ದರಿಂದ ಬಿಆರ್ಎಸ್ ರಾಷ್ಟ್ರೀಯ ಕಚೇರಿಯಲ್ಲಿ ಹಬ್ಬದ ವಾತಾವರಣ ಕಂಡುಬಂದಿತ್ತು.
ಮುಖ್ಯಮಂತ್ರಿ ಕೆಸಿಆರ್ ಪಕ್ಷದ ಧ್ವಜಾರೋಹಣ ಮಾಡಿದ ಕೂಡಲೇ ಬಿಆರ್ಎಸ್ ಮುಖಂಡರು 'ಜೈ ಭಾರತ್' ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಇದೇ ವೇಳೆ ಬಿಆರ್ಎಸ್ ಕಾರ್ಯಾಧ್ಯಕ್ಷ ಹಾಗೂ ಸಚಿವ ಕೆ.ಟಿ.ರಾಮರಾವ್ ಬಿಆರ್ಎಸ್ ರಾಷ್ಟ್ರೀಯ ಪಕ್ಷದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿಲಿಲ್ಲ. ಗೈರು ಹಾಜರಿಗಾಗಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರಿಂದ ಅನುಮತಿ ಪಡೆದಿದ್ದರು.
ಇನ್ನು, ತೆಲಂಗಾಣ ರಾಜ್ಯವನ್ನು ಪ್ರಗತಿಪರ ಪಥದಲ್ಲಿ ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಅವರು ದೇಶದಲ್ಲಿ ಗುಣಾತ್ಮಕ ಬದಲಾವಣೆಗಾಗಿ ರಾಷ್ಟ್ರ ರಾಜಕಾರಣಕ್ಕೆ ಕಾಲಿಡುತ್ತಿದ್ದಾರೆ. ಬಿಆರ್ಎಸ್ ಜನರ ಕಲ್ಯಾಣ ಮತ್ತು ಅಭಿವೃದ್ಧಿ ನೀತಿಗಳನ್ನು ರಾಷ್ಟ್ರದ ಉಳಿದ ಭಾಗಗಳಿಗೆ ಪರಿಚಯಿಸುತ್ತದೆ ಎಂದು ಸಚಿವ ಕೆ.ಟಿ.ರಾಮರಾವ್ ಹೇಳಿದ್ದಾರೆ.
ಕರ್ನಾಟಕದಲ್ಲೂ ಕಣ್ಣಕ್ಕಿಳಿಯಲಿದೆಯೇ ಬಿಆರ್ಎಸ್?
ಮುಂಬರುವ 2024ರ ರಾಷ್ಟೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 'ಮಿಷನ್ 2024' ಕ್ಕೆ ಸಿದ್ಧರಾಗಿರುವ ಸಿಎಂ ಕೆ ಚಂದ್ರಶೇಖರ್ ರಾವ್ ತಮ್ಮ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿಯನ್ನು "ಭಾರತ್ ರಾಷ್ಟ್ರ ಸಮಿತಿ" ಎಂದು ಮರುನಾಮಕರಣ ಮಾಡಿದ್ದಾರೆ.
ಇನ್ನು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.