Telangana Election: ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು ಬದಲಾವಣೆ!
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಸೋಮವಾರ ಹೇಳಿದ್ದಾರೆ.
"ನಾವು ಅಧಿಕಾರಕ್ಕೆ ಬಂದ ನಂತರ ನಾವು ಹೈದರಾಬಾದ್ ಅನ್ನು ಮರುನಾಮಕರಣ ಮಾಡುತ್ತೇವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಈಗಾಗಲೇ ಹೇಳಿದ್ದಾರೆ. ಮದ್ರಾಸ್ ಅನ್ನು ಚೆನ್ನೈ ಎಂದು ಮರುನಾಮಕರಣ ಮಾಡಲಾಯಿತು, ಕಲ್ಕತ್ತಾವನ್ನು ಕೋಲ್ಕತ್ತಾ ಎಂದು ಮರುನಾಮಕರಣ ಮಾಡಲಾಯಿತು, ಬಾಂಬೆಯನ್ನು ಮುಂಬೈ ಎಂದು ಮರುನಾಮಕರಣ ಮಾಡಲಾಯಿತು ಮತ್ತು ನಾವು ರಾಜಪಥವನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಿದ್ದೇವೆ" ಎಂದು ಕಿಶನ್ ರೆಡ್ಡಿ ಎಎನ್ಐಗೆ ತಿಳಿಸಿದ್ದಾರೆ.

"ಹೈದರಾಬಾದ್ ಅನ್ನು ಏಕೆ ಮರುನಾಮಕರಣ ಮಾಡಬಾರದು? ಹೈದರ್ ಯಾರು? ಭಾಗ್ಯನಗರ ಎಂಬುದು ಇದರ ಹಳೆಯ ಹೆಸರು, ನಿಜಾಮರ ಆಳ್ವಿಕೆಯಲ್ಲಿ ಇದನ್ನು ಮರುನಾಮಕರಣ ಮಾಡಲಾಯಿತು. ನಾವು ಅಧಿಕಾರಕ್ಕೆ ಬಂದ ನಂತರ ಅದನ್ನು ಭಾಗ್ಯನಗರ ಎಂದು ನಾಮಕರಣ ಮಾಡುತ್ತೇವೆ" ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ರ್ಯಾಲಿಯಲ್ಲಿ ಹೇಳಿದ ಕೆಲವು ದಿನಗಳ ನಂತರ ರೆಡ್ಡಿ ಈ ಹೇಳಿಕೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಪ್ರಸ್ತಾಪ
"ಕಾಂಗ್ರೆಸ್ ಹೈದರಾಬಾದ್ ಅನ್ನು ರಚಿಸಿತು. ಬಿಜೆಪಿ ಅಧಿಕಾರಕ್ಕೆ ಬಂದಾಗ ಹೆಸರು ಬದಲಾವಣೆ ಆಗಲಿದೆ, ನಾವು ಭಾಗ್ಯನಗರವನ್ನು ರಚಿಸಲು ಬಂದಿದ್ದೇವೆ" ಎಂದು ತೆಲಂಗಾಣ ರಾಜಧಾನಿಯ ಘೋಷ್ಮಹಲ್ ಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ ಆದಿತ್ಯನಾಥ್ ಹೇಳಿದರು. 2020 ರ ಹೈದರಾಬಾದ್ನಲ್ಲಿ ಸಮೀಕ್ಷೆ ನಡೆದ ಸಂದರ್ಭದಲ್ಲಿ 'ಭಾಗ್ಯನಗರ' ಹೆಸರಿಡಲು ಜನ ಒಲವು ಹೊಂದಿದ್ದರು.
ಉತ್ತರ ಪ್ರದೇಶದಲ್ಲಿ, ಯೋಗಿ ಸರ್ಕಾರವು ಅಲಹಾಬಾದ್ ನಗರವನ್ನು ಪ್ರಯಾಗ್ರಾಜ್, ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದೆ. ಅಲ್ಲದೆ, ಅಲಿಗಢವನ್ನು ಹರಿಘರ್, ಮೈನ್ಪುರಿಯನ್ನು ಮಾಯನ್ ನಗರ, ಫಿರೋಜಾಬಾದ್ ಅನ್ನು ಚಂದ್ರ ನಗರ ಮತ್ತು ಮಿರ್ಜಾಪುರವನ್ನು ವಿದ್ಯಾಧಾಮ್ ಎಂದು ಮರುನಾಮಕರಣ ಮಾಡುವ ಪ್ರಸ್ತಾಪಗಳಿವೆ.
ನವೆಂಬರ್ 30ರಂದು ಚುನಾವಣೆ
ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಜೋರಾಗಿದೆ. ಬಿಜೆಪಿ ದಕ್ಷಿಣದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆಡಳಿತಾರೂಢ ಭಾರತ್ ರಾಷ್ಟ್ರಸಮಿತಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಬ್ಬರದ ಪ್ರಚಾರ ಮಾಡುತ್ತಿದೆ. ಹಲವು ಸಮೀಕ್ಷೆಗಳು ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂದು ಹೇಳಿವೆ. ನವೆಂಬರ್ 30ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಮತಎಣಿಕೆ ನಡೆಯಲಿದೆ.












Click it and Unblock the Notifications