Telangana elections: ತೆಲಂಗಾಣದಲ್ಲಿ ರಾಜ್ಯಾದ್ಯಂತ ಬಸ್ ಯಾತ್ರೆ ಆರಂಭಿಸಲಿದೆ ಯುವ ಕಾಂಗ್ರೆಸ್
ಹೈದರಾಬಾದ್, ಜೂನ್. 08: ಕರ್ನಾಟಕದಲ್ಲಿ ಭರ್ಜರಿ ಗೆಲುವಿನ ಉತ್ಸಾಹದಲ್ಲಿರುವ ಕಾಂಗ್ರೆಸ್ ತೆಲಂಗಾಣದಲ್ಲಿ ಚುನಾವಣಾ ತಯಾರಿ ನಡೆಸುತ್ತಿದೆ. ರಾಜ್ಯಾದ್ಯಂತ ಯುವ ಕಾಂಗ್ರೆಸ್ ಬಸ್ ಯಾತ್ರೆ ಆರಂಭಿಸಲಿದೆ. ಇದಕ್ಕೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರತಿನಿಧಿಸುವ ಗಜ್ವೇಲ್ ವಿಧಾನಸಭಾ ಕ್ಷೇತ್ರದಿಂದ ಚಾಲನೆ ದೊರೆಯಲಿದೆ.
ರಾಜ್ಯಾದ್ಯಂತ 'ಬಸ್ ಯಾತ್ರೆ' ನಡೆಸಲು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಬುಧವಾರ ನಡೆದ ಮೂರು ದಿನಗಳ ಐವೈಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದೆ. ಸಭೆಯಲ್ಲಿ, ವಿವಿಧ ರಾಜ್ಯ ಘಟಕಗಳ ಐವೈಸಿ ನಾಯಕರು ಕರ್ನಾಟಕದಲ್ಲಿ ನಡೆಸಿದ ಯಶಸ್ವಿ ಪ್ರಚಾರಗಳು ಮತ್ತು ಈ ವರ್ಷ ಚುನಾವಣೆಗೆ ಹೋಗುವ ಐದು ರಾಜ್ಯಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.
ಚುನಾವಣೆಯಲ್ಲಿ ಶೇಕಡಾ 50 ರಷ್ಟು ಸ್ಥಾನಗಳನ್ನು ಯುವಕರಿಗೆ ನೀಡುವ ಪಕ್ಷದ ನಿರ್ಧಾರವನ್ನು ಯುವ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದ್ದಾರೆ. ಸಭೆಯಲ್ಲಿ ಸಂಸದ ಎನ್.ಉತ್ತಮ್ ಕುಮಾರ್ ರೆಡ್ಡಿ, ಎಐಸಿಸಿ ಕಾರ್ಯದರ್ಶಿ ವಂಶಿ ಚಂದ್ ರೆಡ್ಡಿ, ಐವೈಸಿ ಅಧ್ಯಕ್ಷ ಶ್ರೀನಿವಾಸ್ ಬಿವಿ, ಎಐಸಿಸಿ ಉಸ್ತುವಾರಿ ಕೃಷ್ಣ ಅಲ್ಲವಾರು, ತೆಲಂಗಾಣ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಸೇನಾ ರೆಡ್ಡಿ, ಟಿಪಿಸಿಸಿ ಕಾರ್ಯಾಧ್ಯಕ್ಷ ಮಹೇಶ್ ಕುಮಾರ್ ಗೌಡ್ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
2 ರಾಜ್ಯಗಳನ್ನು ಗೆದ್ದು ಬೀಗಿದ ಕಾಂಗ್ರೆಸ್: ಮುಂದಿನ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಗೆ ಪ್ರಾಮುಖ್ಯತೆ
ಈ ಸಂದರ್ಭದಲ್ಲಿ ಮಾತನಾಡಿದ ಉತ್ತಮ್ ಕುಮಾರ್ ರೆಡ್ಡಿ, ಬಿಆರ್ಎಸ್ ನೇತೃತ್ವದ ರಾಜ್ಯ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಗಳು ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ದ್ರೋಹ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಕೆ ಚಂದ್ರಶೇಖರ್ ರಾವ್ ಸರ್ಕಾರದ ನಿರ್ಲಕ್ಷ್ಯ ಯುವಕರ ಉದ್ಯೋಗವನ್ನು ಹಾಳು ಮಾಡಿದೆ ಎಂದು ಆರೋಪಿಸಿದ್ದಾರೆ.
ಇನ್ನು, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ, ಪ್ರಿಯಾಂಕಾ ಗಾಂಧಿ ವಾದ್ರಾಗೆ ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಬೇಡಿಕೆ ಬಂದಿದ್ದು, ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ಈಗಾಗಲೇ ತೆಲಂಗಾಣದಲ್ಲಿ ರ್ಯಾಲಿಯನ್ನು ನಡೆಸಿದ್ದಾರೆ. ಅವರು ಜೂನ್ 12 ರಂದು ಮಧ್ಯಪ್ರದೇಶದಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ.
ತೆಲಂಗಾಣದಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ಮಹಿಳೆಯರಿಗೆ 1,500 ರೂಪಾಯಿ ಆದಾಯ ಖಾತರಿ ನೀಡುವ ಪಕ್ಷದ ಭರವಸೆಯನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಎನ್ಡಿಟಿವಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಮಾಡಿದೆ.