ಚುನಾವಣಾ ಸಮೀಕ್ಷೆ; ತೆಲಂಗಾಣದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷ!
ಹೈದರಾಬಾದ್, ಸೆಪ್ಟೆಂಬರ್ 21; ತೆಲಂಗಾಣ ವಿಧಾನಸಭೆ ಚುನಾವಣೆಗೆ ಭಾರೀ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಉತ್ಸಾಹ ಮತ್ತಷ್ಟು ಹೆಚ್ಚಿಸುವಂತೆ ಸಮೀಕ್ಷೆಯೊಂದು ಬಂದಿದೆ. 119 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 60.
ಈ ವರ್ಷದ ಅಂತ್ಯದಲ್ಲಿ ನಡೆಯುವ ತೆಲಂಗಾಣ ವಿಧಾನಸಭೆ ಚುನಾವಣೆ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆಯೊಂದು ಪ್ರಕಟವಾಗಿದೆ. Janmat Polls ನಡೆಸಿರುವ ಸಮೀಕ್ಷೆ ವರದಿ ಪ್ರಕಾರ ಕಾಂಗ್ರೆಸ್ ಪಕ್ಷ 59-61 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಲಿದೆ.

ತೆಲಂಗಾಣದಲ್ಲಿ ಸದ್ಯ ಅಧಿಕಾರದಲ್ಲಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ 39 ರಿಂದ 41 ಸೀಟುಗಳಲ್ಲಿ ಗೆಲ್ಲಲಿದ್ದು, ಅಧಿಕಾರವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಕಾಂಗ್ರೆಸ್ ಪಕ್ಷ ತೆಲಂಗಾಣದ ಪಕ್ಷದ ರಾಜ್ಯಧ್ಯಕ್ಷ ರೇವಂತ್ ರೆಡ್ಡಿ ನೇತೃತ್ವದಲ್ಲಿ ಚುನಾವಣೆ ಸಿದ್ದತೆಯನ್ನು ಆರಂಭಿಸಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಳೆದ ವಾರ ಬೃಹತ್ ಸಮಾವೇಶ ನಡೆಸಿ 6 ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ.
Telangana assembly Elections 2023
— Janmat polls (@Janmatpolls) September 20, 2023
Congress-59-61
BRS= 39-41
BJP=10-11
AIMIM =05-06
Others 04-05
ಯಾವ ಪಕ್ಷಕ್ಕೆ ಎಷ್ಟು ಸೀಟು?; Janmat Polls ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 59-61, ಬಿಆರ್ಎಸ್ 39-41, ಬಿಜೆಪಿ 10-11, ಎಐಎಂಐಎಂ 5-6 ಮತ್ತು ಇತರರು 4-6 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ ಬಗ್ಗೆ ಇದುವರೆಗೂ ಬಂದಿರುವ ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಲಿದೆ ಎಂದು ಅಂದಾಜಿಸಿವೆ. PollTracker ಜುಲೈ 1 ರಿಂದ ಸೆಪ್ಟೆಂಬರ್ 1ರ ತನಕ ನಡೆಸಿದ ಸಮೀಕ್ಷೆಯ ವರದಿ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು.
ಸಮೀಕ್ಷೆ ವರದಿಯಂತೆ ಬಿಆರ್ಎಸ್ 35-40, ಬಿಜೆಪಿ 3-5, ಕಾಂಗ್ರೆಸ್ 63-69, ಎಐಎಂಐಎಂ 2-5 ಮತ್ತು ಇತರರು 2-6 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿತ್ತು. ಬಿಆರ್ಎಸ್ ಪಕ್ಷ ಶೇ 34, ಬಿಜೆಪಿ ಶೇ 9, ಕಾಂಗ್ರೆಸ್ ಶೇ 42, ಎಐಎಂಐಎಂ ಶೇ 10 ಮತ್ತು ಇತರರು ಶೇ 5ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ವರದಿ ತಿಳಿಸಿತ್ತು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿ ಪರಿಪೂರ್ಣ ಬಹುಮತ ಪಡೆದು ಗೆದ್ದಿರುವ ಕಾಂಗ್ರೆಸ್, ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ 6 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
ಮಹಾಲಕ್ಷ್ಮೀ, ರೈತ ಭರೋಸಾ, ಗೃಹಜ್ಯೋತಿ, ಇಂದಿರಮ್ಮ ಮನೆ, ಯವ ವಿಕಾಸಂ ಮತ್ತು ಕೈಮಗ್ಗ ಎಂಬ 6 ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷ ನೀಡಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ. ಆಡಳಿತ ವಿರೋಧಿ ಅಲೆ ಇದೆ ಎಂಬುದು ಪ್ರತಿಪಕ್ಷಗಳ ವಾದ. ಆದರೆ ಆ ವಿರೋಧಿ ಅಲೆ ಯಾವ ಪಕ್ಷಕ್ಕೆ ಸಹಾಯಕವಾಗಲಿದೆ ಎಂಬುದು ಕಾದು ನೋಡಬೇಕಿದೆ.
2024ರ ಮೇ ನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು 5 ರಾಜ್ಯಗಳ ವಿಧಾಸನಭೆ ಚುನಾವಣೆ ನಡೆಯಬೇಕು. ಅವುಗಳಲ್ಲಿ ತೆಲಂಗಾಣ ಸಹ ಒಂದು. ಡಿಸೆಂಬರ್ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.












Click it and Unblock the Notifications