ಉತ್ತರ ಪ್ರದೇಶ: ತಿಂಗಳುಗಳಿಂದ ಹಿಂಬಾಲಿಸುತ್ತಿದ್ದವರಿಂದ ಯುವತಿ ಕೊಲೆ
ತಿಂಗಳುಗಳಿಂದ ತನ್ನನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಗಳಿಂದ ಬಾಲಕಿಯ ಹತ್ಯೆ. ಉತ್ತರ ಪ್ರದೇಶದ ಪೂರ್ವ ಭಾಗದ ಬಲ್ಲಿಯಾ ಎಂಬ ಹಳ್ಳಿಯಲ್ಲಿ ಆಗಸ್ಟ್ 9ರಂದು ನಡೆದ ಘಟನೆ.
ಬಲ್ಲಿಯಾ (ಉತ್ತರ ಪ್ರದೇಶ), ಆಗಸ್ಟ್ 9: ದೇಶಾದ್ಯಂತ ಯುವತಿಯರನ್ನು ಪ್ರಮುಖ ವ್ಯಕ್ತಿಗಳ ಮಕ್ಕಳು, ಸಂಬಂಧಿಕರು ಹಿಂಬಾಲಿಸುವುದು, ಚುಡಾಯಿಸುವಂಥ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ, ಉತ್ತರ ಪ್ರದೇಶದಲ್ಲಿ ಇಂಥದ್ದೇ ಒಂದು ಪ್ರಕರಣ ರಕ್ತದ ಅಂತ್ಯ ಕಂಡಿದ್ದು, ಈ ಪ್ರಕರಣದಲ್ಲಿ ಹುಡುಗರ ಹಂಬತನಕ್ಕೆ ಮುಗ್ಧ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ.
ಉತ್ತರ ಪ್ರದೇಶದ ಪೂರ್ವ ವಿಭಾಗದ ಬಲ್ಲಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ತನ್ನನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಗಳಿಂದ ಹದಿಹರೆಯದ ಬಾಲಕಿಯೊಬ್ಬಳು ಕೊಲೆಯಾಗಿದ್ದಾಳೆ.
ಕಳೆದ ಆರು ತಿಂಗಳುಗಳಿಂದ ಹಳ್ಳಿಯ ಮುಖಂಡನ ಪುತ್ರ ಹಾಗೂ ಆತನ ಸ್ನೇಹಿತರು ತಮ್ಮ ಮಗಳನ್ನು ಹಿಂಬಾಲಿಸುತ್ತಿದ್ದರು, ಚುಡಾಯಿಸುತ್ತಿದ್ದರು. ಅವರೇ ಈಗ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆಂದು ಯುವತಿಯ ತಂದೆ-ತಾಯಿ ಆರೋಪಿಸಿದ್ದಾರೆ.
ಅಲ್ಲದೆ, ಬಾಲಕಿಯ ಹತ್ಯೆಯನ್ನು ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿದ ಯುವತಿಯ ಮನೆಯವರು, ತಮಗೆ ನ್ಯಾಯ ಸಿಗುವವರೆಗೂ ಮೃತದೇಹದ ಅಂತ್ಯ ಸಂಸ್ಕಾರ ನಡೆಸುವುದಿಲ್ಲವೆಂದು ಪಟ್ಟುಹಿಡಿದಿದ್ದರು.
ಬಾಲಕಿಯು ಎಂದಿನಂತೆ ತನ್ನ ಬೈಸಿಕಲ್ ನಲ್ಲಿ ಶಾಲೆಗೆ ತೆರಳುತ್ತಿದ್ದಾಗ, ಎಂದಿನಂತೆ ಮೋಟಾರ್ ಬೈಕ್ ಗಳಲ್ಲಿ ಹಳ್ಳಿಯ ಮುಖಂಡರ ಪುತ್ರ ತನ್ನ ಸ್ನೇಹಿತರೊಂದಿಗೆ ಮೋಟಾರ್ ಬೈಕ್ ಗಳಲ್ಲಿ ಬಂದು ಚುಡಾಯಿಸಲು ಆರಂಭಿಸಿ, ತನ್ನೊಂದಿಗೆ ಬರುವಂತೆ ಬಲವಂತಪಡಿಸಿದ್ದಾನೆ. ಇದಕ್ಕೆ ಆಕೆ ಒಪ್ಪದಿದ್ದಾಗ, ಆಕೆಯನ್ನು ಕೆಳಕ್ಕೆ ಕೆಡವಿ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆಂದು ಬಾಲಕಿಯ ಕುಟುಂಬದವರು ತಿಳಿಸಿದ್ದಾರೆ.
ಇದರಿಂದ ಒತ್ತಡಕ್ಕೊಳಗಾದ ಪೊಲೀಸರು, ಹಳ್ಳಿಯ ಮುಖ್ಯಸ್ಥನ ಪುತ್ರನಾದ ಪ್ರಿನ್ಸ್ ತಿವಾರಿ ಎಂಬಾತನನ್ನು ಬಂಧಿಸಿದ್ದಾರೆ.