ಜಗನ್ ರೆಡ್ಡಿಗೆ ಭಾರಿ ಆಘಾತ, ರಾಯಲ ಸೀಮೆಯಲ್ಲಿ ನಾಯ್ಡು ಸವಾರಿ!
ಆಂಧ್ರಪ್ರದೇಶದ ಎಂಎಲ್ಸಿ ಚುನಾವಣೆಯಲ್ಲಿ ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ಕ್ಲೀನ್ ಸ್ವೀಪ್ ಮಾಡಿದೆ. ಎಲ್ಲಾ 9 ಸ್ಥಾನಗಳನ್ನು ಬಾಚಿಕೊಂಡಿರುವ ಚಂದ್ರಬಾಬು ನಾಯ್ಡು ಅವರ ಪಕ್ಷ ಭರ್ಜರಿ ಪ್ರದರ್ಶನ ನೀಡಿದೆ
ಅನಂತಪುರಂ, ಮಾರ್ಚ್ 21: ಆಂಧ್ರಪ್ರದೇಶದ ಎಂಎಲ್ಸಿ ಚುನಾವಣೆಯಲ್ಲಿ ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ಕ್ಲೀನ್ ಸ್ವೀಪ್ ಮಾಡಿದೆ. ಎಲ್ಲಾ 9 ಸ್ಥಾನಗಳನ್ನು ಬಾಚಿಕೊಂಡಿರುವ ಚಂದ್ರಬಾಬು ನಾಯ್ಡು ಅವರ ಪಕ್ಷ ಭರ್ಜರಿ ಪ್ರದರ್ಶನ ನೀಡಿದೆ. ಗಾಯದ ಮೇಲೆ ಬರೆ ಎಳೆದಂತೆ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಪ್ರಬಲವಿರುವ ಕ್ಷೇತ್ರಗಳನ್ನು ನಾಯ್ಡು ಕಿತ್ತುಕೊಂಡಿದ್ದಾರೆ.
ಶ್ರೀಕಾಕುಳಂ, ಪೂರ್ವ ಗೋದಾವರಿ, ಅನಂತಪುರ ಹಾಗೂ ಪಶ್ಚಿಮ ಗೋದಾವರಿ ಗೆದ್ದ ಬಳಿಕ, ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಸಾರ್ ಕಾಂಗ್ರೆಸ್ ಅಧಿಪತ್ಯ ಹೊಂದಿರುವ ರಾಯಲ ಸೀಮೆಯ ಕಡಪ, ಕರ್ನೂಲ್, ನೆಲ್ಲೂರು ಜಿಲ್ಲೆಗಳ ಮೇಲೆ ಟಿಡಿಪಿ ತನ್ನ ಬಾವುಟ ಹಾರಿಸಿದೆ.

ಈ ಗೆಲುವಿನಿಂದ ಅಸೆಂಬ್ಲಿಯಲ್ಲಿ ಟಿಡಿಪಿ ತನ್ನ ಕೋಟಾವನ್ನು 15ಕ್ಕೇರಿಸಿಕೊಂಡಿದೆ. ಕಡಪದಲ್ಲಿ ವೈಎಸ್ಸಾರ್ ಕಾಂಗ್ರೆಸ್ಸಿನ ಅಭ್ಯರ್ಥಿ ವೈಎಸ್ ವಿವೇಕಾನಂದ ರೆಡ್ಡಿ ಸೋಲು, ಜಗನ್ ಗೆ ಭಾರಿ ಆಘಾತ ನೀಡಿದೆ.
ಅಖಂಡ ಆಂಧ್ರಪ್ರದೇಶದ ಸಿಎಂ ಆಗಿದ್ದ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಸೋದರ ವೈಎಸ್ ವಿವೇಕಾನಂದ ರೆಡ್ಡಿ ಅವರು ಮಾಜಿ ಸಚಿವರಾಗಿದ್ದು, ಟಿಡಿಪಿಯ ಮರೆಡ್ಡಿ ರವೀಂದ್ರನಾಥ್ ರೆಡ್ಡಿ ವಿರುದ್ಧ 33 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ನೆಲ್ಲೂರಿನಲ್ಲಿ ಟಿಡಿಪಿಯ ವಕಟಿ ನಾರಾಯಣ ರೆಡ್ಡಿ ಅವರು ವೈಎಸ್ಸಾರ್ ಕಾಂಗ್ರೆಸ್ಸಿನ ಅನಂ ವಿಜಯ್ ಕುಮಾರ್ ರೆಡ್ಡಿ ಅವರ ವಿರುದ್ಧ 85 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಕರ್ನೂಲ್ ನಲ್ಲಿ ಜಗನ್ ಅವರ ಅಭ್ಯರ್ಥಿ ಗೌರು ವೆಂಕಟ ರೆಡ್ಡಿ ವರು ಟಿಡಿಪಿಯ ಶಿಲ್ಪ ಚಕ್ರಪಾಣಿ ವಿರುದ್ಧ 43 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.












Click it and Unblock the Notifications