ಇಮ್ರಾನ್ ಖಾನ್, ನಿಮ್ಮ ದೇಶ ನೀವು ನೋಡ್ಕಳಿ: ನಾಸಿರುದ್ದೀನ್ ತಿರುಗೇಟು
ನಿಮಗೆ ಸಂಬಂಧಪಡದ ವಿಚಾರದ ಬಗ್ಗೆ ಏಕೆ ಮಾತನಾಡ್ತೀರಿ? ಎಂದು ನಟ ನಾಸಿರುದ್ದೀನ್ ಶಾ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಮಾತಿನ ಚಾಟಿ ಬೀಸಿದ್ದಾರೆ. "ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು" ಎಂಬುದನ್ನು ಮೋದಿ ಸರಕಾರಕ್ಕೆ ನಾನು ತೋರಿಸಿಕೊಡುತ್ತೇನೆ ಎಂದು ಇಮ್ರಾನ್ ಖಾನ್ ಗೆ ನೀಡಿದ ಹೇಳಿಕೆಗೆ ನಾಸಿರುದ್ದೀನ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.
ಇಮ್ರಾನ್ ಖಾನ್ ಅವರು ಬೇರೆ ದೇಶಗಳ ವಿಷಯ ಮಾತನಾಡುವ ಬದಲು ತಮ್ಮದೇ ದೇಶದ ಬಗ್ಗೆ ಆಲೋಚಿಸಲಿ. ನಮ್ಮಲ್ಲಿ ಎಪ್ಪತ್ತು ವರ್ಷದಿಂದ ಪ್ರಜಾಪ್ರಭುತ್ವ ಇದೆ. ನಮ್ಮನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಬಾಲಿವುಡ್ ನಟ ಗುಂಪು ಹಲ್ಲೆ ಬಗ್ಗೆ ಮಾತನಾಡಿದ್ದರು. ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಕಳೆದ ತಿಂಗಳು ನಡೆದ ಪೊಲೀಸ್ ಅಧಿಕಾರಿ ಹತ್ಯೆಗೆ ಸಂಬಂಧಿಸಿದಂತೆ ನಾಸಿರುದ್ದೀನ್ ಶಾ ತಮ್ಮ ಆತಂಕ ವ್ಯಕ್ತಪಡಿಸಿದ್ದರು.

ಆ ನಂತರ ಇಮ್ರಾನ್ ಖಾನ್ ಮಾತನಾಡಿ, ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ನಾವು ಮೋದಿ ಸರಕಾರಕ್ಕೆ ತೋರಿಸಿಕೊಡುತ್ತೇವೆ. ಅಲ್ಪ ಸಂಖ್ಯಾತರನ್ನು ಸಮಾನವಾಗಿ ಕಾಣುತ್ತಿಲ್ಲ ಭಾರತದಲ್ಲಿ ಕೂಡ ಜನರು ಹೇಳುತ್ತಿದ್ದಾರೆ ಎಂದು ನಾಸೀರುದ್ದೀನ್ ಶಾರ ಹೇಳಿಕೆ ಉದಾಹರಿಸಿ ಹೇಳಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಸಿರುದ್ದೀನ್ ಶಾ, ಭಾರತದಲ್ಲಿ ಪೊಲೀಸ್ ಅಧಿಕಾರಿಯ ಸಾವಿಗಿಂತ ಹಸುವಿನ ಸಾವಿಗೆ ಹೆಚ್ಚು ಪ್ರಾಸಸ್ತ್ಯ ಸಿಗುತ್ತಿದೆ. ಈಗಾಗಲೇ ವಿಷ ಪಸರಿಸಿದೆ ಮತ್ತು ಈಗ ಅದನ್ನು ನಿಯಂತ್ರಿಸುವುದು ಕಷ್ಟ ಎಂದಿದ್ದರು.
ನನ್ನ ಮಕ್ಕಳ ನಾಳಿನ ಬಗ್ಗೆ ಆತಂಕ ಎದುರಾಗಿದೆ. ಗುಂಪೊಂದು ಅವರನ್ನು ಸುತ್ತುವರಿದು, ನೀವು ಹಿಂದೂನಾ ಅಥವಾ ಮುಸ್ಲಿಮ್ಮಾ ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರ ಇರುವುದಿಲ್ಲ. ಇದರಿಂದ ಚಿಂತೆ ಆಗಿದೆ. ಸದ್ಯದಲ್ಲಿ ಈ ಸನ್ನಿವೇಶ ಸುಧಾರಿಸುವಂತೆ ಕಾಣುತ್ತಿಲ್ಲ ಎಂದು ಅವರು ಹೇಳಿದ್ದರು.












Click it and Unblock the Notifications