ಶಬರಿಮಲೆ ತೀರ್ಪನ್ನು ಮಹಿಳಾ ನ್ಯಾಯಮೂರ್ತಿ ಇಂದು ಅವರೇ ವಿರೋಧಿಸಿದ್ದೇಕೆ?
ನವದೆಹಲಿ, ಸೆಪ್ಟೆಂಬರ್ 28: "ಕೆಲವು ಧಾರ್ಮಿಕ ಸೂಕ್ಷ್ಮ ವಿಷಯಗಳು ಬಂದಾಗ ತರ್ಕ ಸೋಲಬೇಕು... ಧಾರ್ಮಿಕ ಆಚರಣೆಯನ್ನು ಸಮಾನತೆಯ ಹಕ್ಕಿನ ಆಧಾರದ ಮೇಲೆ ನಿರ್ಧರಿಸುವುದು ಸರಿಯಲ್ಲ. ಇದರಲ್ಲಿ ಕೋರ್ಟಿನ ಹಸ್ತಕ್ಷೇಪದ ಅಗತ್ಯವಿರಲಿಲ್ಲ..." ಎಂಬರ್ಥದಲ್ಲಿ ಬೆಂಗಳೂರಿನ ನ್ಯಾ.ಇಂದು ಮಲ್ಹೋತ್ರಾ ಮಾತನಾಡಿದ್ದಾರೆ.
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು(ಸೆ.28) ಐತಿಹಾಸಿಕ ತೀರ್ಪು ನೀಡಿದೆ.
ಈ ದೇವಾಲಯಕ್ಕೆ ಯಾವುದೇ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪು, 800 ವರ್ಷಗಳ ಕಾಲದಿಂದ ಕಾಯ್ದುಕೊಂಡು ಬಂದಿದ್ದ ದೇವಾಲಯದ ಆಡಳಿತ ಮಂಡಳಿಯ ನಿಯಮಕ್ಕೆ ತಡೆ ಒಡ್ಡಿದಂತಾಗಿದೆ.
ಶಬರಿಮಲೆ ತೀರ್ಪು LIVE: ಸುಪ್ರೀಂನಿಂದ ಮತ್ತೊಂದು ಐತಿಹಾಸಿಕ ತೀರ್ಪು
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ 4:1 ಅನುಪಾತದಲ್ಲಿ ಈ ತೀರ್ಪನ್ನು ನೀಡಿದ್ದು, ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರೇ ಪೀಠದ ಬಹುಮತದ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ಮಂಡಿಸಿದ್ದು ಗಮನಾರ್ಹ ಸಂಗತಿ.
ಅಷ್ಟಕ್ಕೂ ಓರ್ವ ಮಹಿಳಾ ನ್ಯಾಯಮೂರ್ತಿಯೇ ಈ ಧಾರ್ಮಿಕ ಸೂಕ್ಷ್ಮ ವಿಷಯದಲ್ಲಿ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಏಕೆ?
ನ್ಯಾ.ಇಂದು ಮಲ್ಹೋತ್ರಾ ವಾದವೇನು?
"ಧಾರ್ಮಿಕ ಆಚರಣೆಗಳನ್ನು ಸಮಾನತೆಯ ಹಕ್ಕಿನ ಆಧಾರದಮೇಲೆ ನಿರ್ಧರಿಸುವುದಕ್ಕಾಗುವುದಿಲ್ಲ, ಅದು ಭಕ್ತರಿಗೆ ಬಿಟ್ಟಿದ್ದು. ಅತ್ಯಗತ್ಯ ಧಾರ್ಮಿಕ ಆಚರಣೆಗಳನ್ನು ಕೋರ್ಟು ನಿರ್ಧರಿಸುವುದು ಸರಿಯಲ್ಲ. ಧಾರ್ಮಿಕ ಭಾವನೆಗಳಿಗೆ ಇದು ಘಾಸಿಯುಂಟುಮಾಡಬಹುದು" ಎಂಬುದು ನ್ಯಾ.ಇಂದು ಮಲ್ಹೋತ್ರಾ ಅವರ ವಾದ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಏಕಿಲ್ಲ?
ವೈವಿಧ್ಯಮಯ ಧಾರ್ಮಿಕ ಆಚರಣೆ
"ಭಾರತದಲ್ಲಿ ವೈವಿದ್ಯಮಯವಾದ ಧಾರ್ಮಿಕ ಆಚರಣೆಗಳಿವೆ. ಪ್ರತಿಯೊಂದು ಧರ್ಮವೂ ಅದು ನಂಬಿದ ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವುದನ್ನು ಬಯಸುತ್ತದೆ. ಇಂಥ ವಿಷಯಗಳಲ್ಲಿ ಕೋರ್ಟಿನ ಮಧ್ಯಸ್ತಿಕೆ ಸರಿಯಲ್ಲ"- ಇಂದು ಮಲ್ಹೋತ್ರಾ.
ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ: ಸುಪ್ರೀಂಕೋರ್ಟ್ ತೀರ್ಪು ಯಾರ ಪರ?
4:1 ಅನುಪಾತದ ತೀರ್ಪು
ಶಬರಿಮಲೆ ಪ್ರಕರಣದ ವಿಚಾರಣೆ ನಡೆಸಿದ ಪಂಚ ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ಸಿಜೆಐ ದೀಪಕ್ ಮಿಶ್ರಾ, ನ್ಯಾ. ಆರ್ ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ ಮತ್ತು ನ್ಯಾ. ಇಂದು ಮಲ್ಹೋತ್ರಾ ಅವರಿದ್ದರು. ಇವರಲ್ಲಿ ಇಂದು ಮಲ್ಹೋತ್ರಾ ಅವರನ್ನು ಬಿಟ್ಟು ಉಳಿದ ನಾಲ್ವರು ನ್ಯಾಯಮೂರ್ತಿಗಳೂ 'ಮಹಿಳೆಯರಿಗೆ ಶಬರಿಮಲೆ ದೇವಾಲಯಕ್ಕೆ ಪ್ರವೇಶ' ನೀಡುವುದೇ ಸರಿ ಎಂಬ ತೀರ್ಪು ನೀಡಿದ್ದರು.
ಪ್ರವೇಶದ ಮೇಲೆ ನಿರ್ಬಂಧ ಹೇರಿದ್ದೇಕೆ?
ಹತ್ತರಿಂದ ಐವತ್ತು ವರ್ಷ ವಯಸ್ಸಿನ ಹೆಣ್ಣುಮಕ್ಕಳು ಋತುಮತಿಯಾಗುವ ಕಾರಣ ಅವರಿಗೆ ದೇವಾಲಯ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಮುಟ್ಟಾಗುವ ಮಹಿಳೆಯರು ದೇವಾಲಯಕ್ಕೆ ಪ್ರವೇಶಸಿದರೆ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ದೂರಲಾಗಿತ್ತು. 800 ವರ್ಷಗಳಿಂದ ಪಾಲಿಸಿಕೊಂದು ಬಂದಿದ್ದ ಈ ನಿಯಮವನ್ನು ಇಂದು ಸುಪ್ರೀಂ ಕೋರ್ಟ್ ತಡೆದು, ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದೆ.
ಬೆಂಗಳೂರಿನ ಇಂದು ಮಲ್ಹೋತ್ರಾ!
ಇಂದು ಮಲ್ಹೋತ್ರಾ ಅವರು ಕಳೆದ ಏಪ್ರಿಲ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. ಈ ಮೂಲಕ ದೇಶದ ನ್ಯಾಯಾಂಗ ಇತಿಹಾಸದಲ್ಲಿ ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದ ಪ್ರಥಮ ಮಹಿಳಾ ವಕೀಲೆ ಎಂಬ ಹಿರಿಮೆಗೆ ಇಂದು ಮಲ್ಹೋತ್ರಾ ಪಾತ್ರವಾಗಿದ್ದರು. ಇನ್ನೂ ಹೆಮ್ಮೆಯ ಸಂಗತಿ ಎಂದರೆ ಇಂದು ಅವರು ನಮ್ಮ ಬೆಂಗಳೂರಿನವರು. 1956 ರಲ್ಲಿ ಜನಿಸಿದ ಇವರು 1983ರಲ್ಲಿ ತಮ್ಮ ವಕೀಲಿ ವೃತ್ತಿಯ ಪಯಣ ಆರಂಭಿಸಿದರು.