Supreme Court: ರೈತರ ಬೇಡಿಕೆಗಳ ಪರಿಶೀಲನೆ, ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ದೇಶನ
ನವದೆಹಲಿ, ಜುಲೈ. 24: ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವೆ ವಿಶ್ವಾಸದ ಕೊರತೆಯಿದೆ. ಅವರನ್ನು ತಲುಪಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದ ವಿಷಯಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್ಪಿ) ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲು ಸುಪ್ರೀಂ ಕೋರ್ಟ್ ಬುಧವಾರ (ಜುಲೈ. 24) ಪ್ರಸ್ತಾಪಿಸಿದೆ. ಫೆಬ್ರವರಿ 13 ರಿಂದ ರೈತರು ಮೊಕ್ಕಾಂ ಹೂಡಿರುವ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಒಂದು ವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.

ಸಮಿತಿಯಲ್ಲಿ ಸೇರಿಸಬಹುದಾದ ವ್ಯಕ್ತಿಗಳನ್ನು ಸೂಚಿಸುವಂತೆ ಕೇಂದ್ರ ಸರ್ಕಾರ ಮತ್ತು ಹರಿಯಾಣ ಮತ್ತು ಪಂಜಾಬ್ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ಸೂಚಿಸಿದೆ. ಪಂಜಾಬ್-ಹರಿಯಾಣ ಶಂಭು ಗಡಿಯನ್ನು ವಾರದೊಳಗೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜುಲೈ 10 ರ ಆದೇಶದ ವಿರುದ್ಧ ಹರಿಯಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಫೆಬ್ರವರಿ 13 ರಿಂದ ಅಂಬಾಲದ ಬಳಿಯಿರುವ ಶಂಭು ಗಡಿಯಲ್ಲಿ ರೈತರು ಮೊಕ್ಕಾಂ ಹೂಡಿದ್ದಾರೆ. ಪಂಜಾಬ್ನಿಂದ ಹಲವಾರು ರೈತ ಸಂಘಗಳ ಅಡಿಯಲ್ಲಿ ಸಾವಿರಾರು ರೈತರು ಬೆಳೆಗಳಿಗೆ ಎಂಎಸ್ಪಿಯ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿಯತ್ತ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ್ದಾರೆ.
ರಾಷ್ಟ್ರ ರಾಜಧಾನಿಗೆ ರೈತರ ಪಾದಯಾತ್ರೆಯನ್ನು ತಡೆಯಲು ಹರಿಯಾಣ ಸರ್ಕಾರವು ಅಂಬಾಲಾ-ನವದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದೆ. ಅಂದಿನಿಂದ ರೈತರು ಶಂಭು ಗಡಿಯಲ್ಲಿ ಬೀಡು ಬಿಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ, ಹರಿಯಾಣ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು 500-600 ಕ್ಕೂ ಹೆಚ್ಚು ಟ್ಯಾಂಕ್ಗಳನ್ನು "ಶಸ್ತ್ರಸಜ್ಜಿತ ಟ್ಯಾಂಕ್ಗಳಾಗಿ" ಮಾರ್ಪಡಿಸಲಾಗಿದೆ ಎಂದು ಹೇಳಿದ್ದಾರೆ. ಶಂಭು ಗಡಿಯಲ್ಲಿ ಇವುಗಳನ್ನು ಇರಿಸಲಾಗಿದೆ. ರೈತರಿಗೆ ರಾಜಧಾನಿ ಪ್ರವೇಶಿಸಲು ಅವಕಾಶ ನೀಡಿದರೆ ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ಉದ್ಭವಿಸಬಹುದು ಎಂದು ವಾದಿಸಿದ್ದಾರೆ.
ಈ ವೇಳೆ ರೈತರು ತಮ್ಮ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳಿಲ್ಲದೆ ರಾಜಧಾನಿಗೆ ಪ್ರಯಾಣಿಸಲು ಅನುಮತಿ ನೀಡಬಹುದೇ ಎಂದು ನ್ಯಾಯಾಲಯವು ಪ್ರಶ್ನಿಸಿದೆ. ಹರಿಯಾಣ ಸರ್ಕಾರ ಸ್ವಲ್ಪ ಪ್ರಯತ್ನ ಮಾಡಬೇಕಾಗಿದೆ. ನೀವು ರೈತರ ಜೊತೆಗೆ ಮಾತಾಡಬೇಕು. ಇಲ್ಲದಿದ್ದರೆ ಅವರು ದೆಹಲಿಗೆ ಏಕೆ ಬರಬೇಕು ಎಂದು ಪ್ರಶ್ನಿಸಿದೆ. ಜೊತೆಗೆ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವೆ ವಿಶ್ವಾಸದ ಕೊರತೆ ಕಂಡುಬರುತ್ತಿದೆ ಎಂದು ನ್ಯಾಯಾಲಯವು ತಿಳಿಸಿದೆ.












Click it and Unblock the Notifications