ಸುನಂದಾ ಪುಷ್ಕರ್ ಸಾವು ಅಸಹಜ : ದೆಹಲಿ ಹೈಕೋರ್ಟ್
ನವದೆಹಲಿ, ಆಗಸ್ಟ್ 30 : ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಪ್ರಕರಣದ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ಅವರ ಸಾವು ಸಹಜವಾಗಿರಲಿಲ್ಲ ಎಂದು ಹೇಳಿದ್ದು, ತನಿಖೆ ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸುನಂದಾ ಪುಷ್ಕರ್ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಇನ್ನೆರಡು ವಾರದಲ್ಲಿ ತಿಳಿಸಬೇಕು, ಅಂತಿಮ ವರದಿ ಸಲ್ಲಿಸಬೇಕೆಂದು ದೆಹಲಿ ಹೈಕೋರ್ಟ್ ಪೊಲೀಸರಿಗೆ ತಾಕೀತು ಮಾಡಿದೆ. ದೆಹಲಿ ಪೊಲೀಸರು ಜವಾಬ್ದಾರಿಯುತವಾಗಿ ತನಿಖೆ ನಡೆಸುತ್ತಿಲ್ಲ ಎಂದು ತೀವ್ರವಾಗಿ ಟೀಕಿಸಿದೆ.

ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಜಿಎಸ್ ಸಿಸ್ತಾನಿ ಮತ್ತು ಚಂದರ್ ಶೇಕರ್ ಅವರು, ಈ ಘಟನೆ ನಡೆದಿದ್ದು 2014ರ ಜನವರಿಯಲ್ಲಾದರೂ, ತನಿಖೆಯಲ್ಲಿ ಯಾವುದೇ ಯಶಸ್ಸನ್ನು ಏಕೆ ಸಾಧಿಸಿಲ್ಲ ಎಂದು ತರಾಟಾಗೆ ತೆಗೆದುಕೊಂಡರು.
ಜನವರಿ 17, 2014ರಂದು ದಕ್ಷಿಣ ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಹೆಂಡತಿ ಸುನಂದಾ ಪುಷ್ಕರ್ ಅವರು ನಿಗೂಢವಾಗಿ ಸಾವಿಗೀಡಾಗಿದ್ದರು. ಈ ಸಾವನ್ನು ಅಸಹಜ ಸಾವೆಂದು ಬಣ್ಣಿಸಿರುವ ಸುಬ್ರಮಣಿಯನ್ ಸ್ವಾಮಿಯವರು, ತನಿಖೆಯ ದಾರಿ ತಪ್ಪಿಸುವ ಉದ್ದೇಶದಿಂದಲೇ ವೈಜ್ಞಾನಿಕ ವರದಿ ತರಿಸಿಕೊಳ್ಳುವಲ್ಲಿ ನಿಧಾನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಡಿಷನಲ್ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು, ತನಿಖೆಯಲ್ಲಿ ಯಾವುದೇ ವಿಳಂಬ ಮಾಡುತ್ತಿಲ್ಲ, ತನಿಖಾದಳ ನಡೆಸಿರುವ ತನಿಖೆಯ ವರದಿಯನ್ನು ನ್ಯಾಯಾಲಯ ಪರಿಶೀಲಿಸಬಹುದು ಎಂದು ಹೇಳಿದಾಗ, ಹಾಗೆಲ್ಲ ಪರಿಶೀಲಿಸುವುದು ಸರಿಯಲ್ಲ, ಆದರೆ, ಅಂತಿಮ ವರದಿಯನ್ನು ಇನ್ನೆರಡು ವಾರದಲ್ಲಿ ಸಲ್ಲಿಸತಕ್ಕದ್ದು ಎಂದು ನ್ಯಾಯಮೂರ್ತಿಗಳು ತಾಕೀತು ಮಾಡಿದರು.












Click it and Unblock the Notifications