ವಲಸೆ ಕಾರ್ಮಿಕರ ರೈಲು ಸಂಚಾರಕ್ಕೆ ಹೊಸ ಮಾರ್ಗಸೂಚಿ ಪ್ರಕಟ
ನವದೆಹಲಿ, ಮೇ 19 : ಲಾಕ್ ಡೌನ್ ಪರಿಣಾಮ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನ ಮೂಲಕ ತವರು ರಾಜ್ಯಕ್ಕೆ ವಾಪಸ್ ಕಳಿಸಲಾಗುತ್ತಿದೆ. ಇದಕ್ಕಾಗಿ ಗೃಹ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಗೃಹ ಇಲಾಖೆಯಿಂದ ಹೊಸ ನಿಗದಿತ ಕಾರ್ಯಾಚರಣೆ ವಿಧಾನ (ಎಸ್ಓಪಿ) ಕಳುಹಿಸಿಕೊಡಲಾಗಿದೆ. ಮೇ 17ರಂದು ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗಲು ವಿಶೇಷ ಶ್ರಮಿಕ್ ರೈಲಿನ ಸಂಚಾರ ಮುಂದುವರೆಯಲಿದೆ ಎಂದು ಗೃಹ ಇಲಾಖೆ ಹೇಳಿದೆ. ಕೇಂದ್ರ ರೈಲ್ವೆ ಇಲಾಖೆ ವಿಶೇಷ ರೈಲು ಓಡಿಸುವ ಹೊಣೆ ತೆಗೆದುಕೊಂಡಿದೆ.

ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಾರ್ಮಿಕರನ್ನು ಕಳಿಸಲು ಮತ್ತು ಬರಮಾಡಿಕೊಳ್ಳಲು ನೋಡೆಲ್ ಆಫೀಸರ್ ನೇಮಕ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ. ಕಾರ್ಮಿಕರ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು.
ಪ್ರಮುಖ ಅಂಶಗಳು
* ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ಚರ್ಚಿಸಿದ ಬಳಿಕ ರೈಲ್ವೆ ಯಾವ-ಯಾವ ನಿಲ್ದಾಣದಲ್ಲಿ ನಿಲುಗಡೆನೀಡಬೇಕು ಎಂಬುದನ್ನು ತೀರ್ಮಾನ ಮಾಡಬೇಕು. ರಾಜ್ಯ/ಕೇಂದ್ರಾಡಳಿತ ಪ್ರದೇಶ ಇದಕ್ಕೆ ಸಹಕಾರ ನೀಡಬೇಕು.
* ಕೇಂದ್ರಾಡಳಿತ ಪ್ರದೇಶ/ರಾಜ್ಯಗಳು ರೈಲ್ವೆ ಇಲಾಖೆ ಜೊತೆ ಚರ್ಚಿಸಿ, ಕೋಚ್ಗಳ ಸಂಖ್ಯೆ, ಟಿಕೆಟ್ ದರ ಮುಂತಾದವುಗಳನ್ನು ಅಂತಿಮಗೊಳಿಸಬೇಕು.
* ರೈಲು ಹತ್ತುವಾಗ ಮತ್ತು ನಿಗದಿತ ನಿಲ್ದಾಣದಲ್ಲಿ ಇಳಿಯುವಾಗ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ಯಾವುದೇ ಸೋಂಕಿನ ಲಕ್ಷಣ ಇಲ್ಲದ ಕಾರ್ಮಿಕರು ಮಾತ್ರ ಸಂಚಾರ ನಡೆಸಬಹುದು.
* ರೈಲು ಹತ್ತುವಾಗ ಮತ್ತು ಇಳಿಯುವಾಗ, ರೈಲು ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ
* ತಮ್ಮ ತವರು ರಾಜ್ಯ/ಕೇಂದ್ರಾಡಳಿತ ಪ್ರದೇಶ ತಲುಪಿದ ಕೂಡಲೇ ಅಲ್ಲಿನ ಸರ್ಕಾರದ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.












Click it and Unblock the Notifications