ದಲಿತರ ಮನೆಯಲ್ಲಿ ಊಟ: ನಾಟಕ ನಿಲ್ಲಿಸಿ ಸಾಕು ಎಂದ ಭಾಗ್ವತ್
ಮುಂಬೈ, ಮೇ 4: ದಲಿತರ ಮನೆಗಳಿಗೆ ತೆರಳಿ ಊಟ ಮಾಡುವ ಮೂಲಕ ಅವರನ್ನು ಒಲಿಸಿಕೊಳ್ಳಲು ಬಿಜೆಪಿ ನಾಯಕರು ನಡೆಸುತ್ತಿರುವ ಪ್ರಯತ್ನವನ್ನು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಟೀಕಿಸಿದ್ದಾರೆ.
ದಲಿತರ ಮನೆಗಳಲ್ಲಿ ಊಟ ಮಾಡುವ ನಾಟಕ ಸಾಕು. ಅದರ ಬದಲು ದುರ್ಬಲ ವರ್ಗದ ಜನರೊಂದಿಗೆ ಬೆರೆತು ನಿರಂತರವಾಗಿ ಅವರೊಂದಿಗೆ ಸಮಾಲೋಚನೆ ನಡೆಸಿ ಜಾತಿ ವ್ಯವಸ್ಥೆಯ ಸಂಕಟಗಳಿಂದ ಅವರನ್ನು ಹೊರತರಲು ಪ್ರಯತ್ನಿಸಿ ಎಂದು ಕಟುವಾಗಿ ಹೇಳಿದ್ದಾರೆ.
'ದಲಿತರೊಂದಿಗೆ ಉಂಡು ಅವರನ್ನು ಶುದ್ಧಿಗೊಳಿಸಲು ನಾನು ರಾಮನಲ್ಲ!
ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಲ್ಲಿನ ಕೆಲವು ಅಂಶಗಳನ್ನು ಬದಲಾವಣೆ ಮಾಡಲು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಉಂಟಾದ ಗೊಂದಲ ಪರಿಹರಿಸಲು ಬಿಜೆಪಿ ನಾಯಕರು ದಲಿತರ ಮನೆಗಳಿಗೆ ತೆರಳಿ ಊಟ ಮಾಡುವ ಮೂಲಕ ಅವರನ್ನು ಸಮಾಧಾನ ಮಾಡುವ ತಂತ್ರಕ್ಕೆ ಬಿಜೆಪಿ ಮುಂದಾಗಿತ್ತು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ದಲಿತರು ಮತ್ತು ಆದಿವಾಸಿಗಳ ಮನೆಗಳಿಗೆ ತೆರಳಿ ಅವರೊಂದಿಗೆ ಅನೇಕ ಬಾರಿ ಆಹಾರ ಸೇವಿಸಿದ್ದರು. ಪಕ್ಷದ ವರಿಷ್ಠರ ಆದೇಶದ ಮೇರೆಗೆ ಬಿಜೆಪಿಯ ಇತರೆ ನಾಯಕರೂ ದಲಿತರ ಮನೆಯಲ್ಲಿ ಊಟ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸತೊಡಗಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋಹನ್ ಭಾಗ್ವತ್, ಈ ನಡೆ ಎರಡೂ ಕಡೆಗಳಲ್ಲಿ ಆಗಬೇಕು. ದಲಿತರನ್ನು ಕೂಡ ಮೇಲ್ಜಾತಿಯವರು ತಮ್ಮ ಮನೆಗಳಿಗೆ ಆಹ್ವಾನಿಸಬೇಕು ಎಂದು ಹೇಳಿದ್ದಾರೆ.
ದಲಿತರ ಮನೆಗಳಲ್ಲಿ ಊಟ ಮಾಡುವುದು ಮತ್ತು ಅದರ ಪ್ರಚಾರಕ್ಕಾಗಿ ಮಾಧ್ಯಮಗಳನ್ನು ಆಹ್ವಾನಿಸುವುದು ಉತ್ತಮ ಬೆಳವಣಿಗೆಯಲ್ಲ. ನಾಯಕರುಗಳು ದಲಿತರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿರಬೇಕು. ಬರಿ ಅವರ ಮನೆಗಳಲ್ಲಿ ಊಟ ಮಾಡಿದರೆ ಪ್ರಯೋಜನವಾಗಲಾರದು. ನಿಮ್ಮ ಕುಟುಂಬದ ಇತರೆ ಸದಸ್ಯರನ್ನೂ ಅವರ ಮನೆಗಳಿಗೆ ಕಳುಹಿಸಿ. ನಿಮ್ಮ ಮನೆಗೂ ಅವರನ್ನು ಆಹ್ವಾನಿಸಿ ಎಂದು ಸಲಹೆ ನೀಡಿದ್ದಾರೆ.