ಹಿರಿಯ ನಾಗರೀಕರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮುಕ್ತ.. ಮುಕ್ತ..
ಹಿರಿಯ ನಾಗರೀಕರು ಮತ್ತು ಅಂಗವಿಕಲರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೈಲಿಯುದ್ದ ಸರತಿಯಲ್ಲಿ ನಿಲ್ಲುವ ತೊಂದರೆಯನ್ನು ತಪ್ಪಿಸಲು, ಟಿಟಿಡಿ ಜಾರಿಗೆ ತಂದಿರುವ ವಿಶೇಷ ವ್ಯವಸ್ಥೆಯಿಂದಾಗಿ ಹಿರಿಯ ನಾಗರೀಕರಿಗೆ ಬಹಳ ಅನುಕೂಲವಾಗುತ್ತಿದೆ.
ಹಿರಿಯ ನಾಗರೀಕರು ಮತ್ತು ಅಂಗವಿಕಲರು ಏಳುಕುಂಡಲವಾಡು ವೆಂಕಟರಮಣನ ದರ್ಶನಕ್ಕೆ ಮೈಲಿಯುದ್ದ ಸರತಿಯಲ್ಲಿ ನಿಲ್ಲುವ ಅವಶ್ಯಕತೆ ಇಲ್ಲದೇ, ವಿಶೇಷ ದರ್ಶನದ ವ್ಯವಸ್ಥೆಯನ್ನು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಕೆಲವು ತಿಂಗಳ ಹಿಂದೆ ಜಾರಿಗೆ ತಂದಿರುವುದು ಹಿರಿಯ ನಾಗರೀಕರಿಗೆ ಬಹಳ ಅನುಕೂಲವಾಗುತ್ತಿದೆ.
ಅಂಗವಿಕಲರು ಮತ್ತು ಹಿರಿಯ ನಾಗರೀಕರು ಸಾಮಾನ್ಯ ಮತ್ತು ವಿಶೇಷ ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗಿತ್ತು. ಕೆಲವೊಂದು ದಾಖಲೆಗಳನ್ನು ನೀಡಿ, ನೇರ ದರ್ಶನಕ್ಕೆ ಹೋಗಬಹುದಾದ ವ್ಯವಸ್ಥೆಯನ್ನು ಟಿಟಿಡಿ ಜಾರಿಗೆ ತಂದ ನಂತರ, ಈ ವಿಶೇಷ ಸೌಲಭ್ಯದ ಲಾಭವನ್ನು ಅಂಗವಿಕಲರು ಮತ್ತು ಹಿರಿಯ ನಾಗರೀಕರು ಪಡೆದುಕೊಳ್ಳುವಂತಾಗಿದೆ.
ತಿರುಪತಿ ದೇವಾಲಯದ ಕೆಲ ಆದಾಯಕ್ಕೆ ಜಿಎಸ್ಟಿ ವಿನಾಯಿತಿ
ಮೆಟ್ಟಲು ಹತ್ತದೇ, ಅವರಿಗೆಂದೇ ನಿಯೋಜಿಸಲಾಗಿರುವ ಪ್ರತ್ಯೇಕ ಕೊಠಡಿಯಲ್ಲಿ ಎರಡು ಗಂಟೆಗೆ ಮುನ್ನ ಹಾಜರಿದ್ದರೆ ಸಾಕು. ಇವರಿಗೆ ಟಿಟಿಡಿ ಬಿಸಿಬಿಸಿ ಅನ್ನಾ ಸಾಂಬಾರ್, ಮೊಸರನ್ನ ಮತ್ತು ಹಾಲನ್ನು ಉಚಿತವಾಗಿ ನೀಡುತ್ತಿದೆ. ಜೊತೆಗೆ, ಇಪ್ಪತ್ತು ರೂಪಾಯಿಗೆ ಎರಡು ಲಡ್ಡನ್ನೂ ನೀಡುತ್ತಿದೆ.
ಅಲ್ಲದೇ, 25ರೂಪಾಯಿಗೆ ಒಂದರಂತೆ ಇವರಿಗಾಗಿಯೇ ಇರುವ ಪ್ರತ್ಯೇಕ ಕೌಂಟರ್ ನಲ್ಲಿ ಲಡ್ಡು ವಿತರಿಸಲಾಗುತ್ತಿದೆ. ನಡೆದಾಡಲು ಅಶಕ್ತರಾಗಿರುವ ಹಿರಿಯರಿಗೆ ಮತ್ತುಅಂಗವಿಕಲರಿಗೆ, ಪಾರ್ಕಿಂಗ್ ಸ್ಥಳದಿಂದ ದೇವಾಲಯದ ಹೊರ ಬಾಗಿಲು ಮತ್ತು ಅಲ್ಲಿಂದ ವಾಪಸ್ ಹೋಗಲು ವಿಶೇಷ ವಿದ್ಯುತ್ ಬೋಗಿ ವ್ಯವಸ್ಥೆ ಕಲ್ಪಿಸಿರುವುದು ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಟಿಟಿಡಿ ಜಾರಿಗೆ ತಂದಿರುವ ಈ ವ್ಯವಸ್ಥೆಯ ಇನ್ನೊಂದು ಪ್ರಮುಖ ಅಂಶವೇನಂದರೆ, ಹಿರಿಯ ನಾಗರೀಕರು ಮತ್ತು ಅಂಗವಿಕಲರನ್ನು ದರ್ಶನಕ್ಕೆ ಬಿಡುವ ವೇಳೆ, ಇತರ ಸರದಿಯಲ್ಲಿ ಬರುವ ಭಕ್ತರಿಗೆ ದರ್ಶನದ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ಜನದಂದಣಿ, ನೂಕಾಟ, ತಳ್ಳಾಟ ಮುಂತಾದ ಗೊಡವೆಯಿಲ್ಲದೇ ಇವರು ನಿಶ್ಚಿಂತೆಯಿಂದ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.
ಇವರಿಗಾಗಿ ದಿನಕ್ಕೆ ಎರಡು ಸ್ಲಾಟ್ ನೀಡಲಾಗಿದೆ. ಒಂದು ಬೆಳಗ್ಗೆ ಹತ್ತು ಗಂಟೆಗೆ ಇನ್ನೊಂದು ಮಧ್ಯಾಹ್ನ ಮೂರು ಗಂಟೆಗೆ. ಹಿರಿಯ ನಾಗರೀಕರು ಮತ್ತು ಅಂಗವಿಕಲರು ಮಾಡಬೇಕಾಗಿರುವುದು ಇಷ್ಟೇ..
ವಯಸ್ಸಿನ ಪ್ರಮಾಣಪತ್ರ, ಇತ್ತೀಚಿನ ಒಂದು ಭಾವಚಿತ್ರದ ಜೊತೆಗೆ ಒಂದು ಫೋಟೋ ಪ್ರಮಾಣಪತ್ರವನ್ನು ತೆಗೆದುಕೊಂಡು, ಸೇತುವೆಯ ಕೆಳಗೆ ಇರುವ S1 ಕೌಂಟರಿಗೆ ಹೋಗಿ ನೊಂದಾಣಿ ಮಾಡಿಕೊಂಡರೆ ಸಾಕು. ಮುಂದಿನದನ್ನು ಟಿಟಿಡಿ ಆಡಳಿತ ಮಂಡಳಿ ನೋಡಿಕೊಳ್ಳುತ್ತದೆ.