ದಕ್ಷಿಣ ಮಾರುತ ಪ್ರಭಾವ; ಆಗಸ್ಟ್ 27ರವರೆಗೂ ಈ ರಾಜ್ಯಗಳಲ್ಲಿ ಮಳೆ ಸೂಚನೆ
ನವದೆಹಲಿ, ಆಗಸ್ಟ್ 25: ಪಶ್ಚಿಮ ಬಂಗಾಳ, ಸಿಕ್ಕಿಂ, ಮೇಘಾಲಯ, ಅಸ್ಸಾಂ, ಬಿಹಾರ, ಉತ್ತರಾಖಂಡ, ಉತ್ತರಪ್ರದೇಶ, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಆಗಸ್ಟ್ 27ರವರೆಗೂ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮುಂದಿನ ನಾಲ್ಕು ದಿನಗಳವರೆಗೂ ಈ ಪ್ರದೇಶಗಳಲ್ಲಿ ಮಳೆ ಮುಂದುವರೆಯುವುದಾಗಿ ತಿಳಿಸಿದೆ.
ಆಗಸ್ಟ್ 25ರಂದು ಹಿಮಾಲಯ ಪ್ರದೇಶಕ್ಕೆ ಮುಂಗಾರು ಅಪ್ಪಳಿಸಲಿದ್ದು, ಆಗಸ್ಟ್ 26ರವರೆಗೆ ಮಳೆ ಪ್ರಭಾವ ಜೋರಾಗಿರುತ್ತದೆ. ಬಂಗಾಳ ಕೊಲ್ಲಿಯಿಂದ ಈಶಾನ್ಯ ಭಾರತಕ್ಕೆ ಬಲವಾದ ದಕ್ಷಿಣ/ ನೈಋತ್ಯ ಮಾರುತಗಳು ಬೀಸುವ ಕಾರಣವಾಗಿ ಈಶಾನ್ಯ ರಾಜ್ಯಗಳಲ್ಲಿ ಅಧಿಕ ಮಳೆ ಇರುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಅಸ್ಸಾಂ ಮತ್ತು ಮೇಘಾಲಯದಲ್ಲಿ ಆಗಸ್ಟ್ 25ರಂದು ಭಾರೀ ಮಳೆಯಾಗಬಹುದು ಎಂದು ತಿಳಿಸಿದೆ.
ಈಶಾನ್ಯ ಭಾರತ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂನಲ್ಲಿ ಆಗಸ್ಟ್ 27ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಸೂಚನೆ ನೀಡಿದೆ. ಮುಂದೆ ಓದಿ...

ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಮಳೆ
ಈಶಾನ್ಯ ರಾಜ್ಯಗಳೊಂದಿಗೆ ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಆಗಸ್ಟ್ 27ರವರೆಗೂ ಮಳೆ ಮುಂದುವರೆಯುತ್ತದೆ. ಕೇರಳ, ತಮಿಳುನಾಡು, ಪುದುಚೇರಿ, ಮಾಹೆಯಲ್ಲಿ ಆಗಸ್ಟ್ 26, ಆಗಸ್ಟ್ 27ರಂದು ಚದುರಿದ ಹಾಗೂ ವ್ಯಾಪಕ ಮಳೆಯಾಗಬಹುದು ಎಂದು ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಮುಂದಿನ ಐದು ದಿನಗಳ ಕಾಲ, ಕೇರಳದಲ್ಲಿ ಆಗಸ್ಟ್ 28ರವರೆಗೂ ಭಾರೀ ಮಳೆಯಾಗುವ ಸೂಚನೆ ರವಾನಿಸಲಾಗಿದೆ.

ಮುಂದಿನ ಮೂರು ದಿನಗಳ ಕಾಲ ಮಳೆ
ಮುಂದಿನ ಮೂರು ದಿನಗಳ ಕಾಲ ಪೂರ್ವ ಭಾರತದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ನೈಋತ್ಯ ಹಾಗೂ ಮಧ್ಯ ಭಾರತದಲ್ಲಿ ಐದು ದಿನಗಳವರೆಗೂ ಚದುರಿದ ಮಳೆಯಾಗುತ್ತದೆ ಎಂದು ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಮುಂಗಾರು ಚುರುಕು ಪಡೆದಿದ್ದು, ಮುಂದಿನ ಎರಡು ದಿನಗಳ ಕಾಲ ಅಧಿಕ ಮಳೆಯಾಗಬಹುದು ಎಂದು ತಿಳಿಸಿದೆ. ಆಗಸ್ಟ್ ಮೊದಲ ವಾರದಲ್ಲಿ ಕೂಡ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿತ್ತು. ಹಲವು ಗ್ರಾಮಗಳು ಜಲಾವೃತವಾಗಿದ್ದವು.
ಇದೀಗ ಉತ್ತರ ಪ್ರದೇಶದ ನಜೀದಾಬಾದ್, ಬಿಜನೌರ್, ಅಮ್ರೋಹಾ, ಪಿಲಖೌ, ಸಹಸ್ವಾನ್, ಸಿಖಂದ್ರಾ ರಾವ್, ಹತ್ರಾಸ್, ಇಗ್ಲಸ್, ಅಲಿಗಾರ್, ಖೇರ್, ಗಭಾನ, ಜಟ್ಟರಿ, ಮಥುರಾದಲ್ಲಿ ಬುಧವಾರ ಹೆಚ್ಚಿನ ಮಳೆಯಾಗಲಿದೆ ಎಂದು ತಿಳಿಸಿದೆ.

ಕರ್ನಾಟಕದಲ್ಲಿ ಮುಂದಿನ ಮೂರು ದಿನ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಕರ್ನಾಟಕದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬುಧವಾರ ಹೆಚ್ಚಿನ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಆಗಸ್ಟ್ ತಿಂಗಳಿನಲ್ಲಿ ತಗ್ಗಿದ ಮುಂಗಾರು
ಆಗಸ್ಟ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿರುವುದಾಗಿ ಭಾರತದ ಪ್ರಮುಖ ಹವಾಮಾನ ವಿಶ್ಲೇಷಣಾ ಸಂಸ್ಥೆ ಸ್ಕೈಮೇಟ್ ತಿಳಿಸಿದೆ. ಮುಂಗಾರು ಮಳೆ ದೀರ್ಘಾವಧಿ ಸರಾಸರಿ 94%ನಷ್ಟಿದೆ. ಮುಂಗಾರು ಜೂನ್ ಅಂತ್ಯದಲ್ಲಿ ಉತ್ತಮ ರೀತಿ ಆರಂಭವಾಯಿತು. ದೀರ್ಘ ಸರಾಸರಿ 110% ಮಳೆಯಾಗಿತ್ತು. ಜುಲೈನಲ್ಲಿ ಮುಂಗಾರು ಅಬ್ಬರ ತಗ್ಗಿತ್ತು. ಸಾಮಾನ್ಯಕ್ಕಿಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿತ್ತು. ಆಗಸ್ಟ್ ಎರಡನೇ ವಾರದಲ್ಲಿ ಕೂಡ ವಿರಾಮವನ್ನು ಪಡೆದಿದೆ. ಇದರಿಂದ ಆಗಸ್ಟ್ ಮಧ್ಯದಲ್ಲಿ 9% ಕಡಿಮೆ ಮಳೆ ಪ್ರಮಾಣ ದಾಖಲಾಗಿದೆ.












Click it and Unblock the Notifications