ಕ್ಷಮಿಸು ಮಗಳೇ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಶವವಾಗಿ ಪತ್ತೆಯಾದ ಬಾಲಕಿಯ ಕ್ಷಮೆಯಾಚಿಸಿದ ಪೊಲೀಸರು
ತಿರುವನಂತಪುರಂ, ಜುಲೈ. 30: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಕಾಣೆಯಾಗಿದ್ದ ಐದು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದರೆ. ಆಕೆಯ ಮೃತದೇಹವನ್ನು ಡಂಪ್ ಸೈಟ್ನಿಂದ ಹೊರತೆಗೆಯುಲಾಗಿದ್ದು, ರಾತ್ರಿಯಿಡೀ ಪೊಲೀಸರು ನಡೆಸಿದ ಹುಡುಕಾಟ ಕೊನೆಗೊಂಡಿದೆ. ಇದಾದ ನಂತರ ಕೇರಳ ಪೊಲೀಸರು ಕ್ಷಮೆಯಾಚಿಸಿದ್ದಾರೆ.
ಶುಕ್ರವಾರ ಕೇರಳದ ಕೊಚ್ಚಿಯಲ್ಲಿ ಐದು ವರ್ಷದ ಬಾಲಕಿಯನ್ನು ತನ್ನ ಮನೆಯಿಂದ ವಲಸೆ ಕಾರ್ಮಿಕನೊಬ್ಬ ಅಪಹರಿಸಿದ ನಂತರ ಅಮಾನುಷವಾಗಿ ಅತ್ಯಾಚಾರ ಮಾಡಿ, ಬಾಲಕಿಯ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಶವಪರೀಕ್ಷೆ ವರದಿಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಸಾಯಿಸಲಾಗಿದೆ ಎಂದಿದೆ. ಆಕೆಯ ಶವವನ್ನು ಶನಿವಾರ ಸಮೀಪದ ಆಲುವಾದಲ್ಲಿನ ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಜವುಗು ಪ್ರದೇಶದಲ್ಲಿ ಗೋಣಿಚೀಲದಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
മകളേ മാപ്പ്🌹#keralapolice pic.twitter.com/cCY3boF8hM
— Kerala Police (@TheKeralaPolice) July 29, 2023
"ನಾವು ರಾತ್ರಿ 7.10 ಕ್ಕೆ ದೂರು ಸ್ವೀಕರಿಸಿದ್ದೇವೆ ಮತ್ತು ಶುಕ್ರವಾರ ರಾತ್ರಿ 8 ಗಂಟೆಗೆ ಮೊದಲು ಎಫ್ಐಆರ್ ದಾಖಲಿಸಲಾಗಿದೆ. ನಮ್ಮ ತಂಡವು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಮಗು ಕಾರ್ಮಿಕನೊಂದಿಗೆ ಇರುವುದು ಕಂಡುಬಂದಿದೆ. ನಾವು ಅವನನ್ನು ರಾತ್ರಿ 9.30 ಕ್ಕೆ ಬಂಧಿಸಿದ್ದೇವೆ. ಆದರೆ, ಅವನು ಕುಡಿದ ಮತ್ತಿನಲ್ಲಿದ್ದನು ಆಗ ಮಗು ಅವನೊಂದಿಗೆ ಇರಲಿಲ್ಲ" ಎಂದು ಎರ್ನಾಕುಲಂ ಗ್ರಾಮಾಂತರ ಎಸ್ಪಿ ವಿವೇಕ್ ಕುಮಾರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಇಡೀ ರಾತ್ರಿಯ ಹುಡುಕಾಟದಲ್ಲಿ ಮಗು ಸಿಗದೇ ನಂತರ ಅದರ ಮೃತದೇಹ ಸಿಕ್ಕಿದ್ದು, ಕೇರಳ ಪೊಲೀಸರು ಕ್ಷಮೆಯಾಚಿಸಿದ್ದಾರೆ. "ಕ್ಷಮಿಸು ಮಗಳೇ" ಎಂದು ಕೇರಳ ಪೊಲೀಸರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. "ಆಕೆಯನ್ನು ಜೀವಂತವಾಗಿ ಆಕೆಯ ಪೋಷಕರ ಬಳಿಗೆ ತರಲು ನಾವು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಮಗುವನ್ನು ಅಪಹರಿಸಿದ ಶಂಕಿತನನ್ನು ಬಂಧಿಸಲಾಗಿದೆ" ಎಂದು ಮಲಯಾಳಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಶನಿವಾರ ರಾತ್ರಿ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಆತ ಕುಡಿದ ಅಮಲಿನಲ್ಲಿದ್ದ ಕಾರಣ ವಿಚಾರಣೆ ವಿಳಂಬವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಪೊಲೀಸರ ಕಡೆಯಿಂದ ಲೋಪವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಆರೋಪಿಗಳು ಬಾಲಕಿಯನ್ನು ಅಪಹರಿಸಿದ್ದಾರೆ ಎಂಬುದು ಗೊತ್ತಿದ್ದರೂ ಪೊಲೀಸರು ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ವಿ ಡಿ ಸತೀಶನ್ ಹೇಳಿದ್ದಾರೆ. ಆದರೆ, ತನಿಖಾಧಿಕಾರಿಗಳ ಪರವಾಗಿ ವಿಳಂಬದ ಆರೋಪವನ್ನು ಪೊಲೀಸರು ತಿರಸ್ಕರಿಸಿದ್ದಾರೆ.
''ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕಿ ನಾಪತ್ತೆಯಾಗಿದ್ದು, ಸಂಜೆ 5:30ರ ವೇಳೆಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ. ಪಾಲಕರು ರಾತ್ರಿ 7:10ರ ಸುಮಾರಿಗೆ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ರಾತ್ರಿ 8 ಗಂಟೆಗೆ ಎಫ್ಐಆರ್ ದಾಖಲಿಸಿ ಆರೋಪಿಯನ್ನು 9: 30 ಗಂಟೆಗೆ ಬಂಧಿಸಲಾಗಿದೆ. ಆದರೆ ಅಮಲಿನಲ್ಲಿದ್ದ ಆರೋಪಿಗೆ ಆ ರಾತ್ರಿ ಯಾವುದೇ ಪ್ರಶ್ನೆಗೆ ಉತ್ತರಿಸಲು ಆಗುತ್ತಿರಲಿಲ್ಲ. ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವುದು ದುರದೃಷ್ಟಕರ" ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications