ಕೇಂದ್ರ ಸಚಿವರಾದ ಅಬ್ಬಾಸ್, ಆರ್.ಸಿ.ಪಿ ಸಿಂಗ್ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾ ಹೆಗಲಿಗೆ ಹೊಸ ಖಾತೆ..
ನವದೆಹಲಿ, ಜುಲೈ 6: ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ರಾಮ ಚಂದ್ರ ಪ್ರಸಾದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.
ಕೇಂದ್ರ ಸರ್ಕಾರ ಜುಲೈ 6ರಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ರಾಮ ಚಂದ್ರ ಪ್ರಸಾದ್ ಸಿಂಗ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಕ್ಕು ಸಚಿವಾಲಯಗಳ ಉಸ್ತುವಾರಿಯನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನೀಡಲಾಗಿದೆ.
ನಖ್ವಿ ಮತ್ತು ಸಿಂಗ್ ಇಬ್ಬರ ರಾಜ್ಯಸಭಾ ಅಧಿಕಾರಾವಧಿ ಗುರುವಾರ ಕೊನೆಗೊಳ್ಳಲಿದೆ. ಅದಕ್ಕೂ ಮುನ್ನ, ಮುಖ್ತಾರ್ ಅಬ್ಬಾಸ್ ನಖ್ವಿ, ರಾಮ ಚಂದ್ರ ಪ್ರಸಾದ್ ಸಿಂಗ್ ಇಬ್ಬರು ಬುಧವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ತಾರ್ ಅಬ್ಬಾಸ್ ನಖ್ವಿ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯ ಜವಾಬ್ದಾರಿ ಹೊತ್ತಿದ್ದರೆ, ರಾಮ ಚಂದ್ರ ಪ್ರಸಾದ್ ಸಿಂಗ್ ಉಕ್ಕು ಸಚಿವರಾಗಿದ್ದರು.

"ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆಯಂತೆ, ಸಂವಿಧಾನದ 75 ನೇ ವಿಧಿಯ ಷರತ್ತು (2) ರ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸಚಿವ ಸಂಪುಟದಿಂದ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ರಾಮಚಂದ್ರ ಪ್ರಸಾದ್ ಸಿಂಗ್ ರಾಜೀನಾಮೆಗಳನ್ನು ಅಂಗೀಕರಿಸಿದ್ದಾರೆ" ಎಂದು ರಾಷ್ಟ್ರಪತಿ ಭವನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಪರಾಷ್ಟ್ರಪತಿ ಹುದ್ದೆಗೆ ಅಲ್ಪಸಂಖ್ಯಾತ ಸಮುದಾಯದ ಯಾರನ್ನಾದರೂ ಕಣಕ್ಕಿಳಿಸಲು ಬಿಜೆಪಿ ಚಿಂತಿಸುತ್ತಿದೆ ಎನ್ನುವ ರಾಜಕೀಯ ವದಂತಿಗಳ ನಡುವೆ ಜಖ್ವಿ ರಾಜೀನಾಮೆ ನೀಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ರಾಜೀನಾಮೆ ನೀಡುವ ಹಿಂದಿನ ದಿನ ನಖ್ವಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಇಬ್ಬರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ವತಿಯಿಂದ ಸಚಿವ ಸ್ಥಾನ ಏಕೈಕ ಮುಸ್ಲಿಂ ವ್ಯಕ್ತಿ ಮುಖ್ತಾರ್ ಅಬ್ಬಾಸ್ ನಖ್ವಿ. ಈಗ ಅವರೂ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಿಜೆಪಿ ತನ್ನ 395 ಸಂಸದರಲ್ಲಿ ಯಾವುದೇ ಮುಸ್ಲಿಂ ಸಂಸದರನ್ನೂ ಹೊಂದಿಲ್ಲದ ಪಕ್ಷವಾಗಿದೆ. 15 ರಾಜ್ಯಗಳ 57 ಸ್ಥಾನಗಳಿಗೆ ನಡೆದ ರಾಜ್ಯಸಭಾ ಚುನಾವಣೆಯ ಅವಧಿಯಲ್ಲಿ ಮುಕ್ತಾಯಗೊಂಡ ಮೂವರು ಬಿಜೆಪಿ ಮುಸ್ಲಿಂ ಸಂಸದರಲ್ಲಿ ನಖ್ವಿ ಕೂಡ ಒಬ್ಬರು, ಈ ಮೂವರಲ್ಲಿ ಒಬ್ಬರನ್ನೂ ಕೂಡ ಬಿಜೆಪಿ ಮರುನಾಮಕರಣ ಮಾಡಿಲ್ಲ.
ಕೆಲವು ಮೂಲಗಳ ಪ್ರಕಾರ ಉಪ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಮುಖ್ತಾರ್ ಅಬ್ಬಾಸ್ ನಖ್ವಿ ಕಣಕ್ಕಿಲಿಯಲಿದ್ದಾರೆ ಎನ್ನುವ ಸುದ್ದಿ ಇದೆ.












Click it and Unblock the Notifications