ಹೊಗೆ ಬಿಟ್ಟರೆ 20 ಸಾವಿರ ರೂಪಾಯಿ ದಂಡ!
ನವದೆಹಲಿ, ಸೆ. 11 : ಕಂಡಕಂಡಲ್ಲಿ ಹೊಗೆ ಬಿಟ್ಟರೆ 200 ರೂಪಾಯಿ ಅಲ್ಲ, 20 ಸಾವಿರ ರೂಪಾಯಿ ದಂಡ ತೆರಬೇಕಾಗುವುದು!
ಹೌದು... ಧೂಮಪಾನಿಗಳಿಗೆ ಒಂದು ಕೆಟ್ಟ ಸುದ್ದಿಯಿದೆ. ಸಾರ್ವಜನಿಕ ಸ್ಥಳದಲ್ಲಿ ಧಮ್ ಎಳೆದರೆ ಅದನ್ನು ಅಪರಾಧ ಎಂದು ಪರಿಗಣಿಸಿ 20 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು ಎಂದು ತಂಬಾಕು ನಿಯಂತ್ರಣ ಅಧ್ಯಯನ ನಡೆಸಲು ಆರೋಗ್ಯ ಸಚಿವಾಲಯ ನೇಮಿಸಿದ್ದ ತಜ್ಞರ ಸಮಿತಿ ವರದಿ ನೀಡಿದೆ.

ನವದೆಹಲಿ ಸರ್ಕಾರದ ಮಾಜಿ ಕಾರ್ಯದರ್ಶಿ ರಮೇಶ್ಚಂದ್ರ ನೇತೃತ್ವದ ಸಮಿತಿ ಕಳೆದ ವಾರ ಇಂಥದ್ದೊಂದು ವರದಿ ನೀಡಿದೆ. ಧೂಮಪಾನ ಮಾಡುವ ತಪ್ಪಿಗೆ ವಿಧಿಸಿತ್ತಿದ್ದ 200 ರೂ. ದಂಡದ ಬದಲಾಗಿ ಅದನ್ನು 20 ಸಾವಿರಕ್ಕೆ ಏರಿಸುವಂತೆ ಸಮಿತಿ ಶಿಫಾರಸು ಮಾಡಿದೆ. [ಸಿಗರೇಟು ಸೇವನೆ ಇನ್ಮುಂದೆ ಜೇಬಿಗೂ ಹಾನಿಕರ!]
ಲೂಸ್ ಸಿಗರೇಟ್ ಸಿಗಲ್ಲ
ಸಿಗರೇಟ್ಗಳ ಬಿಡಿ-ಬಿಡಿ ಮಾರಾಟಕ್ಕೂ ಬ್ರೇಕ್ ಹಾಕುವಂತೆ ವರದಿ ಹೇಳಿದೆ. ಧೂಮಪಾನ ಹೆಚ್ಚಲು ಬಿಡಿಯಾಗಿ ಸಿಗರೇಟ್ ಮಾರುತ್ತಿರುವುದೇ ಪ್ರಮುಖ ಕಾರಣವಾಗಿದ್ದು ಅದನ್ನು ನಿಲ್ಲಿಸುವಂತೆ ವರದಿ ನೀಡಲಾಗಿದೆ.(ಸಿಗರೇಟ್ ನಿಷೇಧ : ಎಲ್ಲರಿಗೂ ಕೋರ್ಟ್ ನೋಟಿಸ್)
ಸರಿಯಾಗಿ ಮುದ್ರಿಸದಿದ್ದರೆ ಬಿತ್ತು ದಂಡ
ಪ್ರತಿಯೊಂದು ಸಿಗರೇಟ್ ಪ್ಯಾಕ್ ಮೇಲೆ 'ಆರೋಗ್ಯಕ್ಕೆ ಹಾನಿಕರ' ಎಂಬ ಸಂದೇಶ ಮತ್ತು ಇದನ್ನು ಸಾರುವ ಚಿತ್ರ ಸರಿಯಾಗಿ ಮುದ್ರಿಸದ ಕಂಪನಿಗಳಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು 5 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಏರಿಸುವಂತೆ ತಿಳಿಸಲಾಗಿದೆ.
ಜಾಹೀರಾತು ಫಲಕ ಪ್ರದರ್ಶನವಿಲ್ಲ
ಮಾರಾಟ ಸ್ಥಳದಲ್ಲಿ ಜಾಹೀರಾತು ಫಲಕ ಪ್ರದರ್ಶನಕ್ಕೆ ತಡೆ, ತಂಬಾಕು ಸೇವನೆ ವಯೋಮಿತಿ ಹೆಚ್ಚಳಕ್ಕೆ ಚಿಂತನೆ, ಸಿಗರೇಟ್ ಪ್ಯಾಕ್ನ ಶೇ. 80ರಷ್ಟು ಭಾಗದ ಮೇಲೆ ಎಚ್ಚರಿಕೆ ಸಂದೇಶ ಪ್ರಕಟಮಾಡುವ ಕುರಿತು ಶಿಫಾರಸು ಮಾಡಲಾಗಿದೆ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]
ಜಾರಿಯಾಗುವುದೆ ಕಠಿಣ ಕಾನೂನು?
ಈ ಶಿಫಾರಸುಗಳು ಅನುಷ್ಠಾನಕ್ಕೆ ಬಂದರೆ ಮೋದಿ ಸರ್ಕಾರ ರೂಪಿಸುತ್ತಿರುವ ಕಠಿಣ ಕಾನೂನುಗಳ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಕ್ಯಾನ್ಸರ್, ಹೃದ್ರೋಗ ಮತ್ತು ಶ್ವಾಸ ಕೋಶ ಸಂಬಂಧಿ ಕಾಯಿಲೆಗಳ ತಡೆಗೆ ವಿಧೇಯಕ ನೆರವಾಲಿದೆ. ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಆರೋಗ್ಯ ಸಚಿವಾಲಯ ವರದಿ ಪಡೆದಿದ್ದು ಸಮಿತಿ ಹೇಳಿರುವ ಎಲ್ಲ ಶಿಫಾರಸುಗಳಿಗೆ ಮಾನ್ಯತೆ ನೀಡಿಲ್ಲ. ಈ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಂಥದ್ದೊಂದು ಕಾನೂನು ಜಾರಿಯಾದರೆ ಸಿಗರೇಟ್ ಕಂಪನಿಗಳು ಮತ್ತು ಧೂಮಪಾನಿಗಳು ಕೊಂಚ ಪರಿಣಾಮ ಎದುರಿಸುವುದೆಂತು ಸತ್ಯ.












Click it and Unblock the Notifications