"ಸಿಂಗಪುರ ರೂಪಾಂತರ ಸೋಂಕು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು ಹುಷಾರ್"
ನವದೆಹಲಿ, ಮೇ 18: ಸಿಂಗಪುರದಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರ ಸೋಂಕು ಭಾರತದಲ್ಲಿ ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಿಂಗಪುರದಲ್ಲಿ ಈಚೆಗೆ ಪತ್ತೆಯಾಗಿರುವ ಕೊರೊನಾ ಸೋಂಕಿನ ರೂಪಾಂತರ ಸೋಂಕು ಮಕ್ಕಳಿಗೆ ಅತಿ ಅಪಾಯಕಾರಿಯಾಗಿದೆ. ಇದು ಭಾರತ ಪ್ರವೇಶಿಸುವ ಎಲ್ಲಾ ಸಾಧ್ಯತೆಗಳೂ ಹೆಚ್ಚಾಗಿವೆ. ಹೀಗಾಗಿ ಶೀಘ್ರವೇ ಸಿಂಗಪುರದಿಂದ ವಿಮಾನ ಯಾನವನ್ನು ಸ್ಥಗಿತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಂದೆ ಓದಿ...
"ಭಾರತಕ್ಕೆ ಮೂರನೇ ಅಲೆಯಾಗಬಹುದು ಎಚ್ಚರ"
ಸಿಂಗಪುರದಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಸೋಂಕು ಮಕ್ಕಳಿಗೆ ಅಪಾಯಕಾರಿ ಎನ್ನಲಾಗಿದೆ. ಭಾರತಕ್ಕೆ ಇದು ಮೂರನೇ ಅಲೆ ರೂಪದಲ್ಲಿ ಬರಬಹುದಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ತಡಮಾಡದೇ ಎಚ್ಚೆತ್ತುಕೊಂಡು ಸಿಂಗಪುರದಿಂದ ಭಾರತಕ್ಕೆ ಬರುವ ವಿಮಾನಗಳಿಗೆ ತಡೆ ಒಡ್ಡಬೇಕು. ಮೂರನೇ ಅಲೆ ತಡೆಯಲು ಎಲ್ಲಾ ಸಿದ್ಧತೆಗಳನ್ನು ಶೀಘ್ರವೇ ಕೈಗೊಳ್ಳಬೇಕು.ಮಕ್ಕಳಿಗೆ ಲಸಿಕೆ ನೀಡಲು ತಯಾರಿ ನಡೆಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಒಂದೇ ದಿನ 4,329 ಜನ ಕೊರೊನಾ ವೈರಸ್ಗೆ ಬಲಿ
ಶಾಲೆಗಳನ್ನು ಮುಚ್ಚಿದ ಸಿಂಗಪುರ ಆಡಳಿತ
ಸಿಂಗಪುರದಲ್ಲಿ ರೂಪಾಂತರಗೊಂಡಿರುವ ಕೊರೊನಾ ಸೋಂಕು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಸಿಂಗಪುರ ಆಡಳಿತಾಧಿಕಾರಿಗಳು ಎಚ್ಚರಿಕೆ ನೀಡಿದ್ದು, ಬುಧವಾರದಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಕಳೆದ ಎಂಟು ತಿಂಗಳಿನಿಂದ ಸಿಂಗಪುರ ಕೊರೊನಾ ಸೋಂಕಿನಿಂದ ಮುಕ್ತವಾಗಿತ್ತು. ಆದರೆ ಈಚೆಗೆ ಕೊರೊನಾ ಪ್ರಕರಣಗಳು ಮತ್ತೆ ಪತ್ತೆಯಾಗಿದ್ದು, ಸರ್ಕಾರ ಕಠಿಣ ನಿಯಮಗಳನ್ನು ಹೇರಲು ನಿರ್ಧರಿಸಿದೆ. ಜೊತೆಗೆ ಕೊರೊನಾ ರೂಪಾಂತರ ಸೋಂಕು ಮಕ್ಕಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ ಎಂಬ ಕಾರಣಕ್ಕೆ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಕಾಲೇಜುಗಳನ್ನು ಮೇ 19ರಿಂದ ಮುಚ್ಚಲು ನಿರ್ಧರಿಸಲಾಗಿದೆ.
ಸಿಂಗಪುರ ಆರೋಗ್ಯ ಸಚಿವ ಆನ್ ಯೆ ಕಂಗ್ ಮಾಹಿತಿ
"ಭಾರತದಲ್ಲಿ ಮೊದಲ ಬಾರಿ ಪತ್ತೆಯಾಗಿದ್ದ B.1.617 ರೂಪಾಂತರ ಸೋಂಕಿನಂಥ ಮಾದರಿ ಇದೀಗ ಸಿಂಗಪುರದಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿರುವುದು ಕಂಡುಬರುತ್ತಿದೆ. ಈ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ ಸೋಂಕಿಗೆ ಒಳಗಾಗಿರುವ ಮಕ್ಕಳ ಸ್ಥಿತಿ ಗಂಭೀರವಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ" ಎಂದು ಆರೋಗ್ಯ ಸಚಿವ ಆನ್ ಯೆ ಕಂಗ್ ತಿಳಿಸಿದ್ದರು.
ಮಕ್ಕಳಲ್ಲಿ ಹೆಚ್ಚಾದ ಕೊರೊನಾ ರೂಪಾಂತರ ಸೋಂಕು; ಶಾಲೆಗಳಿಗೆ ಬೀಗ ಜಡಿದ ಸಿಂಗಪುರ
ಭಾರತದಲ್ಲಿ ಹೆಚ್ಚಾದ ಸಾವಿನ ಸಂಖ್ಯೆ
ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಮಂಗಳವಾರ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,63,533 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇದು ಕಳೆದ 26 ದಿನಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ಸೋಂಕಿನ ಪ್ರಮಾಣವಾಗಿದೆ. ಸೋಮವಾರ ನೀಡಿದ ಅಂಕಿಅಂಶಗಳಲ್ಲಿ ಏಪ್ರಿಲ್ 21ರ ನಂತರ ಮೊದಲ ಬಾರಿಗೆ 3ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿತ್ತು. ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,329ಕ್ಕೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ. ಇದಕ್ಕೂ ಮೊದಲು ಮೇ 12ರಂದು 4,205 ಸಾವಿನ ಪ್ರಕರಣಗಳು ದಾಖಲಾಗಿದ್ದು ಈವರೆಗಿನ ಅತಿ ದೊಡ್ಡ ಸಂಖ್ಯೆಯಾಗಿತ್ತು.