ರಾಜೀನಾಮೆ ನಾಟಕಕ್ಕೆ ತೆರೆ: ಎನ್ಸಿಪಿ ಮುಖ್ಯಸ್ಥರಾಗಿ ಮುಂದುವರೆಯಲಿರುವ ಶರದ್ ಪವಾರ್
ಮುಂಬೈ, ಮೇ. 05: ಮಹಾರಾಷ್ಟ್ರದ ಎನ್ಸಿಪಿ ಕಾರ್ಯಕರ್ತರ ಭಾವನಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಕ್ಷದ ಉನ್ನತ ನಾಯಕರು ತಮ್ಮ ರಾಜೀನಾಮೆಯನ್ನು ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ ಶರದ್ ಪವಾರ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥರಾಗಿ ಮುಂದುವರಿಯುವುದಾಗಿ ಹೇಳಿದರು.
1999 ರಲ್ಲಿ ಸ್ಥಾಪಿಸಿದ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯುವ ಬಗ್ಗೆ ಯೋಚಿಸಲು ಸಮಯ ಬೇಕಾಗುತ್ತದೆ ಎಂದು 82 ವರ್ಷ ವಯಸ್ಸಿನವ ಶರದ್ ಪವಾರ್ ರಾಜೀನಾಮೆ ಘೋಷಿಸಿದ್ದ ಕೆಲವೆ ಗಂಟೆಗಳಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದರು. ಆದರೆ, ಪ್ರತಿಭಟನೆ ಮಾತ್ರ ಮುಂದುವರೆಯುತ್ತಿತ್ತು. ಇದೆ ಬೆನ್ನಲ್ಲೆ ಎನ್ಸಿಪಿ ಕಮಿಟಿ ಕೂಡ ರಾಜೀನಾಮೆ ತಿರಸ್ಕರಿಸಿತ್ತು.

"ಎಲ್ಲವನ್ನೂ ಮರುಪರಿಶೀಲಿಸಿದ ನಂತರ, ನಾನು ಪಕ್ಷದ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಘೋಷಿಸುತ್ತೇನೆ. ನನ್ನ ಹಿಂದಿನ ನಿರ್ಧಾರವನ್ನು ನಾನು ಹಿಂತೆಗೆದುಕೊಳ್ಳುತ್ತೇನೆ" ಎಂದು ಶರದ್ ಪವಾರ್ ಇಂದು ಸಂಜೆ ತಿಳಿಸಿದರು. ಇದರಿಂದ ಮೂರು ದಿನಗಳ ರಾಜೀನಾಮೆ ನಾಟಕಕ್ಕೆ ತೆರೆ ಬಿದ್ದಿದೆ. ಇದರಿಂದ ಆಡಳಿತಾರೂಢ ಬಿಜೆಪಿಯೊಂದಿಗೆ ಅವರ ಸೋದರಳಿಯ ಅಜಿತ್ ಪವಾರ್ ಅವರ ಮೈತ್ರಿಯ ಚರ್ಚೆಯ ನಡುವೆ ಪಕ್ಷದ ಮೇಲೆ ಆರದ್ ಪವಾರ್ ಅವರ ಹಿಡಿತವನ್ನು ಮತ್ತೆ ತೋರಿಸಿಕೊಟ್ಟಿದೆ.
"ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದರೂ ಸಂಸ್ಥೆಯಲ್ಲಿ ಯಾವುದೇ ಹುದ್ದೆ ಅಥವಾ ಜವಾಬ್ದಾರಿಗೆ ಉತ್ತರಾಧಿಕಾರಿ ಯೋಜನೆ ರೂಪಿಸಬೇಕು ಎಂಬ ಸ್ಪಷ್ಟ ಅಭಿಪ್ರಾಯ ಹೊಂದಿದ್ದು, ಮುಂದೆ ಪಕ್ಷದಲ್ಲಿ ಸಂಘಟನಾ ಬದಲಾವಣೆ, ನಿಯೋಜನೆಗೆ ಒತ್ತು ನೀಡುತ್ತೇನೆ. ಹೊಸ ಜವಾಬ್ದಾರಿಗಳು, ಹೊಸ ನಾಯಕತ್ವವನ್ನು ರಚಿಸುವುದು, ಸಂಘಟನೆಯ ಬೆಳವಣಿಗೆಗೆ ನಾನು ಶಕ್ತಿಯುತವಾಗಿ ಕೆಲಸ ಮಾಡುತ್ತೇನೆ ಮತ್ತು ಪಕ್ಷದ ಸಿದ್ಧಾಂತ ಮತ್ತು ಪಕ್ಷದ ಗುರಿಗಳನ್ನು ಜನರ ಬಳಿಗೆ ಕೊಂಡೊಯ್ಯುತ್ತೇನೆ" ಎಂದು ಶರದ್ ಪವಾರ್ ಹೇಳಿದರು.

2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ತಮ್ಮ ಇನ್ನೊಂದು ಕೆಲಸವನ್ನು ಪುನರಾರಂಭಿಸಲು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದರು. "ಎಲ್ಲಾ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವುದು ಬಹಳ ಮುಖ್ಯ. ರಾಹುಲ್ ಗಾಂಧಿಯಿಂದ ಸಿಪಿಐಎಂನ ಸೀತಾರಾಮ್ ಯೆಚೂರಿಯವರೆಗೆ ಎಲ್ಲರೂ ಕರೆ ಮಾಡಿ ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಕೇಳಿಕೊಂಡರು" ಎಂದು ಶರದ್ ಪವಾರ್ ತಿಳಿಸಿದರು.
ಇಂದು ಬೆಳಗ್ಗೆ, ಪ್ರಫುಲ್ ಪಟೇಲ್ ನೇತೃತ್ವದ ಎನ್ಸಿಪಿ ಸಮಿತಿಯು ಶರದ್ ಪವಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸಿತು. ಲಕ್ಷಗಟ್ಟಲೆ ಕಾರ್ಯಕರ್ತರ ಸಲುವಾಗಿ ಅವರು ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಹೇಳಿತ್ತು.












Click it and Unblock the Notifications