IMD Weather Alert: ವೈಪರೀತ್ಯ ಪ್ರಭಾವ! ಈ ಭಾಗಗಳಲ್ಲಿ ಶೀತದ ಅಲೆ ಎಚ್ಚರಿಕೆ, ಕೆಲವೆಡೆ ಮಳೆ ಮುನ್ಸೂಚನೆ
India Weather Forecast: ಭಾರತದಲ್ಲಿ ಹವಾಮಾನದ ಸ್ಥಿತಿಗತಿಗಳು ತೀವ್ರತರದಲ್ಲಿ ಬದಲಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿ ಮಾತ್ರವಲ್ಲದೇ ಇತರ ರಾಜ್ಯಗಳ ಭಾಗಗಳಲ್ಲಿ ದಟ್ಟ ಮಂಜು ಆವರಿಸಿದೆ. ಇದರೊಂದಿಗೆ ಕೆಲವು ಪ್ರದೇಶಗಳಲ್ಲಿ ಹವಾಮಾನ ವೈಪರಿತ್ಯಗಳ ಕಾರಣದಿಂದ ಅಲ್ಲಲ್ಲಿ ಮಳೆ ನಿರೀಕ್ಷೆ ಇದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಹ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಬಿಸಿಲು, ದಟ್ಟ ಮಂಜು, ಚಳಿ ಹಾಗೂ ಮಳೆ ಆಗಲಿವೆ ಎಂಬ ವಿವರ ಇಲ್ಲಿದೆ.
ಇಂದು ಸೋಮವಾರ ಬೆಳಗ್ಗೆ ದೆಹಲಿ-ಎನ್ಸಿಆರ್ನ ಭಾಗದಲ್ಲಿ ಅತೀವ ಮಂಜು ಆವರಿಸಿತ್ತು. ಎದುರಿನ ವ್ಯಕ್ತಿ, ವಾಹನಗಳು ಏನು ಕಾಣದಷ್ಟು ಅಗೋಚರತೆ ನಿರ್ಮಾಣವಾಗಿತ್ತು. ಇದರಿಂದ ಉದ್ಯೋಗಕ್ಕ ತೆರಳುವವರು, ಶಾಲೆಗಳಿಗೆ ತೆರಳುವ ಮಕ್ಕಳಿಗೆ ತೊಂದರೆ ಆಯಿತು. ಮೈಕೊರೆವ ಚಳಿ ನಿರ್ಮಾಣವಾಗಿತ್ತು. ಈ ಚಳಿ, ಮಂಜು ಕೇವಲ ದೆಹಲಿಗೆ ಮಾತ್ರ ಸಿಮೀತವಾಗಿರಲಿಲ್ಲ.

ಇಂದಿನಿಂದ ಮುಂದಿನ ಐದು ದಿನ ದೆಹಲಿ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜನರು ಚಳಿಯಿಂದ ಆರೋಗ್ಯ ರಕ್ಷಿಸಿಕೊಳ್ಳುವುದು, ಜಾಗರೂಕರಾಗಿರುವಂತೆ, ಮಕ್ಕಳು ಹಾಗೂ ಅನಾರೋಗ್ಯ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಐಎಂಡಿ ತಿಳಿಸಿದೆ. ಪ್ರಯಾಗ್ರಾಜ್, ಕಾನ್ಪುರ, ಲಕ್ನೋ, ಆಗ್ರಾ, ತುಂಡ್ಲಾ, ಚಂಡೀಗಢ, ದೆಹಲಿ, ನೈನಿತಾಲ್, ಅಮೃತಸರ ಮತ್ತು ಶಿಮ್ಲಾ ಸೇರಿದಂತೆ 10 ನಗರಗಳಲ್ಲಿ ಮಂಜು ಆವರಿಸಿದೆ. ಈ ಭಾಗದಲ್ಲಿ ತೀವ್ರ ಚಳಿ ಕಂಡು ಬಂದಿದೆ.
ವೈಪರೀತ್ಯ ಪ್ರಭಾವದಿಂದ ಮಳೆ ಮುನ್ಸೂಚನೆ: ಮೀನುಗಾರರಿಗೆ ಎಚ್ಚರಿಕೆ
ಐಎಂಡಿ ಪ್ರಕಾರ, ಕರ್ನಾಟಕದ ಕರಾವಳಿ ಮತ್ತು ಸುತ್ತಮುತ್ತಲಿನ ಸಮುದ್ರದ ಮೇಲೆ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಈ ವೈಪರಿತ್ಯದ ಪ್ರಭಾವದಿಂದ ಡಿಸೆಂಬರ್ 10 ರವರೆಗೆ ದಕ್ಷಿಣ ತಮಿಳುನಾಡು ಕರಾವಳಿ, ಮನ್ನಾರ್ ಕೊಲ್ಲಿ ವಿವಿಧೆಡೆ ಜೋರು ಗಾಳಿ ಬೀಸುವ ನಿರೀಕ್ಷೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ತಜ್ಞರು ಸೂಚಿಸಿದ್ದಾರೆ. ಇನ್ನೂ ತಮಿಳುನಾಡಿನ ಕರಾವಳಿ ಭಾಗದ ಕೆಲವು ಜಿಲ್ಲೆಗಳಲ್ಲಿ ಡಿಸೆಂಬರ್ 12ರವರೆಗೆ ಅಲ್ಲಲ್ಲಿ ಹಗುರದಿಂದ ಮಧ್ಯಮ ಮಳೆ ಆಗಬಹುದೆಂದು ಮುನ್ಸೂಚನೆ ನೀಡಲಾಗಿದೆ.
ದೆಹಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ಶೀತ ಅಲೆಯು ಬೀಸಲಿದೆ. ಬೆಳಗ್ಗೆ ಮತ್ತು ಸಂಜೆ ನಂತರ ಶಾಖದ ವಾತಾವರಣ ಶೀತದ ಅಲೆಯಾಗಿ ಬದಲಾಗಲಿದೆ. ಕೆಲವೆಡೆ ಹಗಲು ಹೊತ್ತು ಸಹ ಬಿಸಿಲು ಕಡಿಮೆ ಆಗಿ ಶೀತದ ಅಲೆಯೇ ಮೇಲುಗೈ ಸಾಧಿಸಬಹುದು. ದೆಹಲಿಯಲ್ಲಿ ನಿಷ್ಠ ತಾಪಮಾನವು 6 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ನಿರೀಕ್ಷೆ ಇದೆ. ಇದು ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗಿದೆ.
ಪ್ರಮುಖ ನಗರಗಳಲ್ಲಿ ಶೀತದ ಅಲೆ ಎಚ್ಚರಿಕೆ
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಹಾಗೂ ಪೂರ್ವ ಭಾರತದ ರಾಜ್ಯಗಳಲ್ಲಿ ಶೀತ ಅಲೆಯ ವಾತಾವರಣ ಕಂಡು ಬರಲಿದೆ. ಇಲ್ಲಿ ಕನಿಷ್ಠ ತಾಪಮಾನದಲ್ಲಿ ಭಾರೀ ಬದಲಾವಣೆ ಆಗಲಿದೆ. ಚಳಿ ಜನರನ್ನು ಬಾಧಿಸಲಿದೆ. ಬಿಹಾರದ 10 ಜಿಲ್ಲೆಗಳಾದ ಪಾಟ್ನಾ, ಭಾಗಲ್ಪುರ, ಪೂರ್ಣಿಯಾ, ದರ್ಭಾಂಗಾ, ಗೋಪಾಲ್ಗಂಜ್, ಭೋಜ್ಪುರ, ಕಿಶನ್ಗಂಜ್, ಅರಾರಿಯಾ ಮತ್ತು ಗಯಾಗಳಿಗೆ ಶೀತಗಾಳಿ ಮತ್ತು ದಟ್ಟ ಮಂಜಿನ ಎಚ್ಚರಿಕೆ ಕೊಡಲಾಗಿದೆ.
ಈ ಮೇಲಿನ ನಗರ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 15 ರಿಂದ 20 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಇದು ವಾತಾವರಣವನ್ನು ಮತ್ತಷ್ಟು ತಂಪಾಗಿಸಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 4.5 ರಿಂದ 6.4 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಲಿದೆ. ಸೂರ್ಯ ಈ ನಗರಗಳಲ್ಲಿ ತಾತ್ಕಾಲಿಕವಾಗಿ ಕಣ್ಮರೆಯಾಗಲಿದ್ದಾರೆ ಎನ್ನಲಾಗಿದೆ.
ಇನ್ನೂ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ರಾಜ್ಯದ ಕೆಲವಡೆ ಭಾಗಶಃ ಮೋಡ ಕವಿದ ಆಕಾಶ ಕಂಡು ಬರಲಿದೆ. ಕನಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಲಿದೆ. ಇತ್ತ ಮಧ್ಯಪ್ರದೇಶದ ಕೆಲವು ಪ್ರದೇಶಗಳು ತೀವ್ರ ಶೀತ ಅಲೆ ಎದುರಿಸಲಿವೆ. ಇನ್ನೂ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ, ಒಡಿಶಾ ಇತರ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೆಳಗ್ಗೆ, ರಾತ್ರಿ ಮಂಜು, ಚಳಿ ವಾತಾವರಣ ನಿರ್ಮಾಣಗೊಳ್ಳಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications