ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ
Recommended Video

ಬೆಂಗಳೂರು, ಫೆಬ್ರವರಿ 28 : ಪಾಕಿಸ್ತಾನದ ವಶದಲ್ಲಿದ್ದ ಭಾರತದ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಶುಭ ಶುಕ್ರವಾರದಂದು ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ದೇಶದೆಲ್ಲೆಡೆ ಹರ್ಷದ, ಹಬ್ಬದ ವಾತಾವರಣ ಮನೆಮಾಡಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಮಾತುಕತೆಯಿಲ್ಲದೆ, ಯಾವುದೇ ರಾಜಿ ಅಥವಾ ಒಪ್ಪಂದ ಮಾಡಿಕೊಳ್ಳದೆ, ಯಾವುದೇ ಯುದ್ಧ ಸೂಚನೆಯೂ ಇಲ್ಲದೆ ಪಾಕಿಸ್ತಾನ ಬಿಡುಗಡೆಗೆ ಒಪ್ಪಿಕೊಂಡಿರುವುದು ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.
ಅಭಿನಂದನ್ ಅವರನ್ನು ಯಾವುದೇ ಷರತ್ತಿಲ್ಲದೆ ಬಿಡುಗಡೆ ಮಾಡಲು ಸಂಭಾವ್ಯ ಕಾರಣಗಳು ಕೆಳಗಿನಂತಿವೆ.

* ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ಚೀನಾ ಸೇರಿದಂತೆ ವಿಶ್ವದ ಯಾವುದೇ ರಾಷ್ಟ್ರ ಬೆಂಬಲಿಸುತ್ತಿಲ್ಲದಿರುವುದರಿಂದ ಪಾಕಿಸ್ತಾನ ಭಾರೀ ಒತ್ತಡದಲ್ಲಿತ್ತು.
* ಭಾರತ ಏರ್ ಸ್ಟ್ರೈಕ್ ಮಾಡಿದ್ದು ಭಯೋತ್ಪಾದನಾ ನೆಲೆಗಳ ಮೇಲೆ, ಪಾಕಿಸ್ತಾನದ ಸೇನೆಯ ಮೇಲೆ ಅಲ್ಲ ಎಂಬುದನ್ನು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸುತ್ತಲೇ ಇತ್ತು ಮತ್ತು ಈ ಕುರಿತು ರಾಯಭಾರಿ ಮಟ್ಟದಲ್ಲಿ ಒತ್ತಡ ಹೇರುತ್ತಿತ್ತು.
* ಸದ್ಯದ ಸ್ಥಿತಿಯಲ್ಲಿ ಆರ್ಥಿಕವಾಗಿ ಜರ್ಝರಿತವಾಗಿರುವ ಪಾಕಿಸ್ತಾನ ಮತ್ತೊಂದು ಯುದ್ಧ ಎದುರಿಸುವ ಸಾಮರ್ಥ್ಯ ಹೊಂದಿಲ್ಲ. ಆರ್ಥಿಕವಾಗಿ ಮತ್ತು ನೈತಿಕವಾಗಿ ನಿತ್ರಾಣವಾಗಿರುವ ಪಾಕಿಸ್ತಾನಕ್ಕೆ ಬೇರೆ ದಾರಿ ಇರಲೇ ಇಲ್ಲ.
* ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತೇವೆ, ಆದರೆ ಮಾತುಕತೆಗೆ ಸಿದ್ಧರಾಗಿ ಎಂದ ಪಾಕಿಸ್ತಾನಕ್ಕೆ ಭಾರತ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಬದಲಿಗೆ, ಅಭಿನಂದನ್ ಅವರನ್ನು ಯಾವುದೇ ಷರತ್ತು ಇಲ್ಲದೆ, ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡದೆ ಬಿಡುಗಡೆ ಮಾಡಬೇಕೆಂಬ ಆಗ್ರಹ ಇಟ್ಟಿತ್ತು.
* ವಶದಲ್ಲಿಟ್ಟುಕೊಂಡ ಅಭಿನಂದನ್ ಅವರ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಜಿನೀವಾ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಲಾಗಿತ್ತು.
* ಅಭಿನಂದನ್ ಅವರನ್ನು ಪಾಕಿಸ್ತಾನ ಯುದ್ಧಕೈದಿ ಎಂದು ಬಿಂಬಿಸಿದ್ದು ಮತ್ತು ಅವರ ಮೇಲೆ ರಕ್ತ ಹರಿಯುವಂತೆ ಹಲ್ಲೆ ಮಾಡಿದ್ದು ಜಿನೀವಾ ಒಪ್ಪಂದದ ಮತ್ತೊಂದು ಉಲ್ಲಂಘನೆಯಾಗಿತ್ತು.
* ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಮೂಲಕ ಎರಡೂ ದೇಶಗಳ ನಡುವೆ ಶಾಂತಿಗೆ ನಾವು ಬದ್ಧರಾಗಿದ್ದೇವೆ ಎಂಬುದು ತೋರಿಸುವುದು ಮತ್ತು ಸಂಸತ್ತಿನಲ್ಲಿಯೂ ಛೀಥೂ ಅನ್ನಿಸಿಕೊಂಡಿರುವ ಇಮ್ರಾನ್ ಖಾನ್ ಅವರಿಗೆ ಮುಖ ಉಳಿಸಿಕೊಳ್ಳುವುದು ಬೇಕಿತ್ತು.












Click it and Unblock the Notifications