ಯುಪಿಗೂ ಕಾಲಿಟ್ಟ ಆಪರೇಷನ್ ಕಮಲ, ಎಸ್ಪಿಯ ಮತ್ತೊಬ್ಬ ಶಾಸಕ ರಾಜೀನಾಮೆ
ಲಕ್ನೋ, ಆಗಸ್ಟ್ 10: ಗುಜರಾತಿನ ನಂತರ ಇದೀಗ ಉತ್ತರ ಪ್ರದೇಶಕ್ಕೂ ಆಪರೇಷನ್ ಕಮಲ ಕಾಲಿಟ್ಟಿದೆ. ಬುಧವಾರ ಸಮಾಜವಾದಿ ಪಕ್ಷದ ವಿಧಾನ ಪರಿಷತ್ ಸದಸ್ಯ ಅಶೋಕ್ ಬಾಜಪೇಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಒಟ್ಟು ನಾಲ್ವರು ವಿಧಾನಪರಿಷತ್ ಸದಸ್ಯರು ರಾಜೀನಾಮೆ ನೀಡಿದಂತಾಗಿದೆ.
ಇನ್ನು ಬಿಎಸ್ಪಿಯ ಒರ್ವ ವಿಧಾನಪರಿಷತ್ ಸದಸ್ಯರೂ ರಾಜೀನಾಮೆ ನೀಡಿದ್ದು ಉತ್ತರ ಪ್ರದೇಶ ಮೇಲ್ಮನೆಯ 5 ವಿಕೆಟ್ ಪತನವಾಗಿದೆ.

ಯೋಗಿ ಆದಿತ್ಯನಾಥ್, ಸಚಿವರಿಗಾಗಿ ಇದೆಲ್ಲ!
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ದಿನೇಶ ಶರ್ಮಾ ಹಾಗೂ ಸಚಿವರಾದ ಸ್ವತಂತ್ರ ದೇವ್ ಸಿಂಗ್, ಮೋಹಸಿನ್ ರಾಜಾ ಇವರು ಯಾರೂ ವಿಧಾನಸಭೆಯಾಗಲಿ, ವಿಧಾನಪರಿಷತ್ ಸದಸ್ಯರಲ್ಲ.
ಸಚಿವರು ಮತ್ತು ಮುಖ್ಯಮಂತ್ರಿಯಾದವರು ಆರು ತಿಂಗಳ ಒಳಗೆ ಯಾವುದಾದರೊಂದು ಸದನ ಪ್ರವೇಶಿಸುವುದು ಅನಿವಾರ್ಯವಾಗಿದ್ದು, ಇವರಿಗಾಗಿ ಬಿಜೆಪಿ ರಾಜೀನಾಮೆ ಕೊಡಿಸುತ್ತಿದೆ ಎನ್ನಲಾಗಿದೆ.
ವಿಧಾನಸಭೆಯಲ್ಲಿ ಬಿಜೆಪಿಗೆ ಭರ್ಜರಿ ಸಂಖ್ಯಾ ಬಲ ಇರುವುದರಿಂದ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿ ಸಚಿವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡುವುದು ಸುಲಭವಾಗಿದೆ. ಹೀಗಾಗಿ ಈ ಸುಲಭ ಮಾರ್ಗವನ್ನು ಬಿಜೆಪಿ ಅನುಸರಿಸುತ್ತಿದೆ.
ಈಗಾಗಲೇ ರಾಜೀನಾಮೆ ನೀಡಿರುವ ಮೂವರು ಸಮಾಜವಾದಿ ಪಕ್ಷದ ವಿಧಾನ ಪರಿಷತ್ ಸದಸ್ಯರು ಬಿಜೆಪಿ ಸೇರಿದ್ದು, ಅಶೋಕ್ ಬಾಜಪೇಯಿ ಕೂಡ ಅದೇ ಹಾದಿ ಹಿಡಿಯಲಿದ್ದಾರೆ.












Click it and Unblock the Notifications