ಹೈಕೋರ್ಟ್ ಜಡ್ಜ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ
ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಕರ್ಣನ್ ಅವರು ತಮ್ಮ ಸಹೋದ್ಯೋಗಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ತಾವು ದಲಿತನಾಗಿರುವುದರಿಂದ ತಮ್ಮನ್ನು ಗುರಿಯನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು.
ನವದೆಹಲಿ, ಫೆಬ್ರವರಿ 08 : ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿಯ ವಿರುದ್ಧ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆಯ ನೋಟೀಸ್ ಜಾರಿ ಮಾಡಿದೆ.
ಕೋಲ್ಕತಾ ಹೈಕೋರ್ಟ್ನ ನ್ಯಾಯಮೂರ್ತಿ ಸಿಎಸ್ ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆಯ ನೋಟೀಸ್ ಜಾರಿ ಮಾಡಲಾಗಿದೆ. ಫೆಬ್ರವರಿ 13ರಂದು ಖುದ್ದಾಗಿ ಹಾಜರಾಗಿ, ತಮ್ಮ ವಿರುದ್ಧ ಕೋರ್ಟ್ ನಿಂದನೆಯ ಕ್ರಮವನ್ನು ಏಕೆ ಜರುಗಿಸಬಾರದು ಎಂಬುದರ ವಿವರಣೆ ನೀಡಬೇಕೆಂದು ಹೇಳಿದೆ.
ನ್ಯಾ. ಆರ್ ಕರ್ಣನ್ ಅವರಿಂದ ನ್ಯಾಯಾಂಗಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದು, ಅವರು ವಿಚಾರಣೆ ನಡೆಸುತ್ತಿದ್ದ ಎಲ್ಲ ಕೇಸ್ ಫೈಲುಗಳನ್ನು ವಾಪಸ್ ಮಾಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಅವರ ನೇತೃತ್ವದ 7 ಸದಸ್ಯರಿರುವ ನ್ಯಾಯಪೀಠ, ಸಿಎಸ್ ಕರ್ಣನ್ ಅವರ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ನಡೆಸಲಿದೆ. ಕರ್ಣನ್ ಅವರು ತಮ್ಮ ಸಹೋದ್ಯೋಗಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದ್ದರು.
ತಾವು ದಲಿತನಾಗಿರುವುದರಿಂದ ತಮ್ಮನ್ನು ಗುರಿಯನ್ನಾಗಿ ಮಾಡಲಾಗುತ್ತಿದೆ. ಅವರನ್ನು ಮದ್ರಾಸ್ ಹೈಕೋರ್ಟ್ ನಿಂದ ಕೋಲ್ಕತಾ ಹೈಕೋರ್ಟಿಗೆ ವರ್ಗಾವಣೆ ಮಾಡಿದ ಸರ್ವೋಚ್ಚ ನ್ಯಾಯಾಲಯದ ಸಮಿತಿಯ ನಿರ್ಧಾರವನ್ನು ಕೂಡ ಪ್ರಶ್ನಿಸಿದ್ದರು.
ಹೈಕೋರ್ಟಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ನ್ಯಾ. ಕರ್ಣನ್ ಅವರು ಜನವರಿ 23ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ತಾವು ಮಾಡಿರುವ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಂಡು ಭ್ರಷ್ಟಾಚಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದೂ ಆಗ್ರಹಿಸಿದ್ದರು.
ಹಿಂದೆ ಕೂಡ ಸರ್ವೋಚ್ಚ ನ್ಯಾಯಾಲಯದ ಹಿಂದಿನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರು ಕರ್ಣನ್ ಅವರನ್ನು ಮುಂದೆ ನಿಲ್ಲಿಸಿಕೊಂಡು, ಕೋಲ್ಕತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಅನಗತ್ಯ ಆರೋಪ ಮಾಡುತ್ತಿರುವುದಕ್ಕೆ ಛೀಮಾರಿ ಹಾಕಿದ್ದರು.