ಗೋವಾ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಮೇಘಾಲಯಕ್ಕೆ ವರ್ಗಾವಣೆ
ನವದೆಹಲಿ, ಆಗಸ್ಟ್ 18: ಮೇಘಾಲಯದ ರಾಜ್ಯಪಾಲ ತಥಾಗತ ರಾಯ್ ಅವರ ಐದು ವರ್ಷದ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಅವರ ಸ್ಥಾನಕ್ಕೆ ಗೋವಾದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರನ್ನು ನೇಮಿಸಲಾಗಿದೆ.
ಗೋವಾದ ರಾಜ್ಯಪಾಲರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಸತ್ಯ ಪಾಲ್ ಮಲಿಕ್ ಅವರನ್ನು ಮೇಘಾಲಯಕ್ಕೆ ವರ್ಗಾವಣೆ ಮಾಡಿ ರಾಷ್ಟ್ರಪತಿ ಭವನ ಮಂಗಳವಾರ ಆದೇಶ ಹೊರಡಿಸಿದೆ.
ಸತ್ಯಪಾಲ್ ಮಲಿಕ್ ಅವರ ವರ್ಗಾವಣೆಯಿಂದ ತೆರವಾಗುತ್ತಿರುವ ಗೋವಾ ರಾಜ್ಯಪಾಲರ ಹುದ್ದೆಗೆ ಯಾವುದೇ ಹೊಸಬರನ್ನು ನೇಮಿಸಿಲ್ಲ. ಬದಲಾಗಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಈಗಿನ ಜವಾಬ್ದಾರಿಯೊಂದಿಗೆ ಹೆಚ್ಚುವರಿ ಹೊಣೆಗಾರಿಕೆ ನಿಭಾಯಿಸುವಂತೆ ಸೂಚಿಸಲಾಗಿದೆ.

ಗೋವಾಕ್ಕೆ ಹೊಸ ರಾಜ್ಯಪಾಲರ ನೇಮಕ ಮಾಡುವವರೆಗೂ ಕೋಶ್ಯಾರಿ ಅವರೇ ಅಲ್ಲಿನ ರಾಜ್ಯಪಾಲರ ಕರ್ತವ್ಯ ನಿಭಾಯಿಸಲಿದ್ದಾರೆ. ತಥಾಗತ ರಾಯ್ ಅವರು ರಾಜ್ಯಪಾಲರಾಗಿ ಐದು ವರ್ಷದ ಗರಿಷ್ಠ ಅವಧಿ ಪೂರ್ಣಗೊಳಿಸಿದ್ದಾರೆ. ಮೊದಲ ಮೂರು ವರ್ಷ ತ್ರಿಪುರದ ರಾಜ್ಯಪಾಲರಾಗಿದ್ದ ಅವರು, ಕೊನೆಯ ಎರಡು ವರ್ಷಗಳನ್ನು ಮೇಘಾಲಯದ ರಾಜ್ಯಪಾಲರಾಗಿ ಕಳೆದಿದ್ದರು. ಅವರ ಅಧಿಕಾರಾವಧಿಯನ್ನು ಮುಂದುವರಿಸಲು ಸರ್ಕಾರ ಮುಂದಾಗಿಲ್ಲ.
ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸತ್ಯಪಾಲ್ ಸಿಂಗ್ ಅವರನ್ನು 2019ರ ಅಕ್ಟೋಬರ್ನಲ್ಲಿ ಗೋವಾ ರಾಜ್ಯಪಾಲರಾಗಿ ನೇಮಿಸಲಾಗಿತ್ತು.












Click it and Unblock the Notifications