ಅಕ್ರಮ ಸಂಬಂಧ ಬಯಲು: ಗುಪ್ತಾಂಗ ಕಟ್ ಮಾಡ್ಕೊಂಡ ಸ್ವಾಮೀಜಿ!
ಜೈಪುರ, ಅ 18: ಸರ್ವಸಂಗ ಪರಿತ್ಯಾಗಿ ಆಗಿರಬೇಕಾಗಿದ್ದ ಖಾವಿದಾರಿಯೊಬ್ಬರು, ತಮ್ಮ ಅಕ್ರಮ ಸಂಬಂಧ ಬಯಲಾದ ಹಿನ್ನಲೆಯಲ್ಲಿ ಮಠದ ಆವರಣದಲ್ಲಿ ತನ್ನ ಗುಪ್ತಾಂಗವನ್ನು ಕಟ್ ಮಾಡಿಕೊಂಡ ಘಟನೆ, ಜೈಪುರದಿಂದ 270 ಕಿ.ಮೀ ದೂರದ ಚುರು ಜಿಲ್ಲೆಯಿಂದ ವರದಿಯಾಗಿದೆ.
32ವರ್ಷದ ಸಂತೋಷ್ ದಾಸ್ ಎನ್ನುವ ಸ್ವಾಮೀಜಿ, ಮಠದ ಆವರಣದ ಪಕ್ಕದಲ್ಲೇ ಇರುವ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರು. ಈ ವಿಚಾರ ಸ್ಥಳೀಯರ ಗಮನಕ್ಕೆ ಬಂದು, ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅಕ್ರಮ ಸಂಬಂಧ ಇರುವುದನ್ನು ಒಪ್ಪಿಕೊಂಡ ನಂತರ ಸ್ವಾಮೀಜಿ, ಮಠದ ಕೊಠಡಿಯಲ್ಲಿ ತಮ್ಮ ಗುಪ್ತಾಂಗವನ್ನು ಕಟ್ ಮಾಡಿಕೊಂಡಿದ್ದಾರೆ. ನೋವು ತಾಳಲಾರದೇ ಚೀರಾಡಿಕೊಳ್ಳುತ್ತಿದ್ದಾಗ, ಮಠದಲ್ಲಿದ್ದ ಇತರ ಸ್ವಾಮೀಜಿಗಳು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಜಿಲ್ಲೆಯ ತಾರಾನಗರದಲ್ಲಿರುವ ಆಶ್ರಮದ ನಿವಾಸಿಯಾಗಿರುವ ಸ್ವಯಂಘೋಷಿತ ದೇವಮಾನವ ಸಂತೋಷ್, ತನ್ನ ಗುಪ್ತಾಂಗವನ್ನು ಕಟ್ ಮಾಡಿಕೊಂಡ ಮಾಹಿತಿ ಮಂಗಳವಾರ (ಅ17) ಬೆಳಗ್ಗೆ ನಮಗೆ ಬಂದಿದೆ. ಸ್ವಾಮೀಜಿಯ ಸ್ಥಿತಿ ಗಂಭೀರವಾಗಿರುವುದರಿಂದ ಬಿಕನೀರ್ ನಗರದಲ್ಲಿರುವ ಆಸ್ಪತ್ರೆಗೆ ದಾಖಲಿಸಲು ತಾರಾನಗರದ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ವಾಮೀಜಿಯಿಂದ ಹೇಳಿಕೆಯನ್ನು ಇನ್ನೂ ಪಡೆದುಕೊಂಡಿಲ್ಲ.