ಪ್ರದ್ಯುಮ್ನ ಹತ್ಯೆ ಪ್ರಕರಣಕ್ಕೆ ಮತ್ತೆ ಹೊಸ ತಿರುವು!
ಗುರುಗ್ರಾಮ, ನವೆಂಬರ್ 14 : ರಾಯನ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಹತ್ಯೆ ಪ್ರಕರಣಕ್ಕೆ ಮತ್ತೆ ತಿರುವು ಸಿಕ್ಕಿದೆ. ಸಿಬಿಐ ಬಂಧಿಸಿದ್ದ ಬಾಲಾಪರಾಧಿ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾನೆ.
ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಜಿಲ್ಲಾ ಮಕ್ಕಳ ಹಿತರಕ್ಷಣಾ ಸಮಿತಿ, ಸಿಬಿಐ ಅಧಿಕಾರಿಗಳ ಮುಂದೆ ಆತ ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ಯೂ ಟರ್ನ್ ಸಿಕ್ಕಿದೆ.

ಕಳೆದ ವಾರ ಬಾಲಾಪರಾಧಿಯನ್ನು ಬಂಧಿಸಿದ್ದ ಸಿಬಿಐ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಪ್ರದ್ಯುಮ್ನ ಠಾಕೂರ್ ನನ್ನು ಹತ್ಯೆ ಮಾಡಿರುವುದಾಗಿ ನ್ಯಾಯಾಲಯ ಮುಂದೆ ಆತ ಹೇಳಿಕೆ ನೀಡಿದ್ದ. ಆದರೆ, ಈಗ ಹೇಳಿಕೆ ಹಿಂಪಡೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಪರೀಕ್ಷೆ ಮತ್ತು ಪೋಷಕರ ಸಭೆ ಮುಂದೂಡಲು ಹತ್ಯೆ ಮಾಡಿರುವುದಾಗಿ ಆತ ಹೇಳಿಕೆ ನೀಡಿದ್ದ. ಆದರೆ, ಈಗ ಹೇಳಿಕೆ ವಾಪಸ್ ಪಡೆದಿದ್ದು ಸಿಬಿಐ ತನಿಖೆಗೆ ಹಿನ್ನಡೆ ಉಂಟು ಮಾಡಿದೆ.
ಸಿಬಿಐ ಸೂಕ್ತವಾದ ಸಾಕ್ಷಿಗಳನ್ನು ಒದಗಿಸುವ ತನಕ ನ್ಯಾಯಾಲಯ ಬಾಲಾಪರಾಧಿಯ ಹೇಳಿಕೆಯನ್ನು ಪರಿಗಣನೆ ಮಾಡುವುದಿಲ್ಲ. ಬಾಲಪರಾಧಿಯನ್ನು ಫೋಷಕರು ಸೋಮವಾರ ಭೇಟಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಿಬಿಐ ಸಂಗ್ರಹಿಸಿದೆ.
ಬಾಲಾಪರಾಧಿಗಳನ್ನು ಸೋಮವಾರ ಭೇಟಿಯಾಗಲು ಅವಕಾಶವಿಲ್ಲ. ಮಂಗಳವಾರ ಮತ್ತು ಶುಕ್ರವಾರ ಮಾತ್ರ ಭೇಟಿ ಮಾಡಬಹುದು. ಆದರೂ ಪೋಷಕರು ಸೋಮವಾರ ಏಕೆ ಭೇಟಿ ಮಾಡಿದರು? ಎಂದು ಸಿಬಿಐ ಮಾಹಿತಿ ಸಂಗ್ರಹಿಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದೆ.
ಸೆಪ್ಟೆಂಬರ್ 8ರಂದು ಬೆಳಗ್ಗೆ ಎಂಟು ಗಂಟೆಗೆ ಶಾಲೆಗೆ ಹೋದೆ. ಸ್ನೇಹಿತನನ್ನು ಭೇಟಿ ಮಾಡಿ ನಂತರ, ಸಂಗೀತ ಶಿಕ್ಷಕರನ್ನು ಭೇಟಿಯಾಗಲು ಹೋದೆ. ಶಿಕ್ಷಕರು ಅಲ್ಲಿ ಇಲ್ಲದ ಕಾರಣ ವಾಶ್ ರೂಂಗೆ ಹೋದೆ. ಅಲ್ಲಿ ರಕ್ತ ಮತ್ತು ಮೃತ ದೇಹ ನೋಡಿ ಓಡಿಬಂದೆ ಎಂದು ಹೇಳಿಕೆ ನೀಡಿದ್ದಾನೆ.
ಸೆ.8ರಂದು ಶಾಲೆಗೆ ತೆರಳಿದ್ದ 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಮೃತದೇಹ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಮೊದಲು ಈ ಕೊಲೆ ಪ್ರಕರಣದ ತನಿಖೆಗೆ ಹರ್ಯಾಣ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ನಂತರ ತನಿಖೆ ಸಿಬಿಐಗೆ ಹಸ್ತಾಂತರವಾಗಿತ್ತು.












Click it and Unblock the Notifications