ರೋಹಿಂಗ್ಯ ಮುಸ್ಲಿಮರಿಂದ ದೇಶಕ್ಕೆ ಅಭದ್ರತೆ ಭೀತಿ: ಭಾರತ
ರೋಹಿಂಗ್ಯ ಮುಸ್ಲಿಮರಿಂದ ಭಾರತಕ್ಕೆ ಧಕ್ಕೆ ಎಂದ ಭಾರತ. ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಭಾರತ ಸರ್ಕಾರದ ಹೇಳಿಕೆ.
ನವದೆಹಲಿ, ಸೆಪ್ಟೆಂಬರ್ 14: ರೋಹಿಂಗ್ಯ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಲು ಈಗಾಗಲೇ ನಿರಾಕರಿಸಿರುವ ಭಾರತ ಸರ್ಕಾರವು ತನ್ನ ನಿರ್ಧಾರದ ಹಿಂದಿನ ಕಾರಣವನ್ನು ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಬಾಂಗ್ಲಾ ರೋಹಿಂಗ್ಯಾ ಮುಸ್ಲಿಮರಿಗೆ ನೆರವಿನ ಹಸ್ತ ಚಾಚಿದ ಭಾರತ
ಈ ಅರ್ಜಿಯಲ್ಲಿ, ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ರೋಹಿಂಗ್ಯ ಮುಸ್ಲಿಮರನ್ನು ಐಎಸ್ಐಎಸ್ ನಂಥ ಭಯೋತ್ಪಾದಕ ಸಂಘಟನೆಗಳು ಭಾರತದ ವಿರುದ್ಧ ಬಳಸಿಕೊಳ್ಳುವ ಸಾಧ್ಯತೆಗಳಿರುವುದರಿಂದಲೇ ತಾನು ಅವರಿಗೆ ಆಶ್ರಯ ನೀಡಲು ನಿರಾಕರಿಸಿರುವುದಾಗಿ ತಿಳಿಸಿದೆ.
ಇತ್ತೀಚೆಗೆ, ಇಬ್ಬರು ರೋಹಿಂಗ್ಯ ಮುಸ್ಲಿಮರಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿಗಳು ದಾಖಲಾಗಿದ್ದು, ಇದರಲ್ಲಿ ಆ ಯುವಕರು, ರೋಹಿಂಗ್ಯ ಮುಸ್ಲಿಮರಿಗೆ ಭಾರತವು ಆಶ್ರಯ ಕಲ್ಪಿಸುವ ಬಗ್ಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡಬೇಕು. ಯಾವುದೇ ಕಾರಣಕ್ಕೂ ರೋಹಿಂಗ್ಯ ಮುಸ್ಲಿಮರನ್ನು ದೇಶದಿಂದ ಹೊರಹಾಕುವ ಬಗ್ಗೆ ಕ್ರಮ ಕೈಗೊಳ್ಳಬಾರದೆಂದು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಪ್ರಾರ್ಥಿಸಿದ್ದರು.
ರೋಹಿಂಗ್ಯಾ ಮುಸ್ಲಿಮರಿಂದ ಭಾರತದ ಭದ್ರತೆಗೆ ಅಪಾಯ : ರಾಜನಾಥ್ ಸಿಂಗ್
ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಭಾರತ ಸರ್ಕಾರದಿಂದ ಉತ್ತರ ಕೋರಿತ್ತು. ಈ ಹಿನ್ನೆಲೆಯಲ್ಲಿ, ನ್ಯಾಯಾಲಯಕ್ಕೆ ತನ್ನ ಅಫಿಡವಿಟ್ ಸಲ್ಲಿಸಿರುವ ಭಾರತ ಸರ್ಕಾರ, ''ರೋಹಿಂಗ್ಯ ಮುಸ್ಲಿಮರಿಂದ ಭಾರತದ ಭದ್ರತೆಗೆ ಅಪಾಯ ಬರುವ ಸಾಧ್ಯತೆಗಳಿವೆ. ಇವರನ್ನು ಐಎಸ್ಐಎಸ್ ಉಗ್ರರು ಭಾರತದಲ್ಲಿ ಉಗ್ರವಾದ ನಡೆಸಲು ಬಳಸಿಕೊಳ್ಳಬಹುದಾದ ಸಾಧ್ಯತೆಗಳು ಇರುವುದರಿಂದ ಭಾರತವು ಇವರಿಗೆ ಆಶ್ರಯ ಕಲ್ಪಿಸಲು ಸಿದ್ಧವಿಲ್ಲ'' ಎಂದು ತಿಳಿಸಿದೆ.
ಆದರೆ, ಇದನ್ನು ಅರ್ಜಿದಾರರು ಅಲ್ಲಗಳೆದಿದ್ದಾರೆ. ರೋಹಿಂಗ್ಯ ಮುಸ್ಲಿಮರು ನಿರಾಶ್ರಿತರಾಗಿದ್ದು, ಅವರಿಗೂ ಭಯೋತ್ಪಾದನೆಗೂ ಯಾವುದೇ ನಂಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎರಡೂ ಕಡೆಯ ವಾದ-ವಿವಾದ ಆಲಿಸಿದ ನ್ಯಾಯಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ. 18ಕ್ಕೆ ಮುಂದೂಡಿದ್ದಾರೆ.