Republic Day Parade 2022: ಭಾರತದ 73ನೇ ಗಣರಾಜ್ಯೋತ್ಸವದ ಕುರಿತು ಸಂಪೂರ್ಣ ಮಾಹಿತಿ ತಿಳಿಯಿರಿ
ನವದೆಹಲಿ, ಜನವರಿ 25: ಭಾರತದಲ್ಲಿ ಜನವರಿ 26 ಅನ್ನು ಗಣರಾಜ್ಯೋತ್ಸವ ದಿನ ಎಂದು ಆಚರಿಸಲಾಗುತ್ತದೆ. 1949ರ ನವೆಂಬರ್ 26ರಂದು ರಚಿಸಲಾದ ದೇಶದ ಸಂವಿಧಾನವನ್ನು 1950ರ ಜನವರಿ 26ರಂದು ಅಂಗೀಕರಿಸಲಾಯಿತು. ಈ ದಿನವನ್ನು ದೇಶದ ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಭಾರತವು ನಿಜವಾಗಿಯೂ ಅಂದಿನಿಂದ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಈ ದಿನವು ಬ್ರಿಟಿಷ್ ಆಡಳಿತದ ವಿರುದ್ಧದ ಮೊದಲ ಕ್ರಾಂತಿಯನ್ನು ಸೂಚಿಸುತ್ತದೆ.
ದೇಶದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಗಣರಾಜ್ಯದ ದಿನವನ್ನು ಹಬ್ಬಕ್ಕಿಂತ ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಂದು ಭಾರತೀಯ ಸೇನಾ ಪಡೆಗಳು ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಉತ್ಸಾಹವನ್ನು ಪ್ರದರ್ಶಿಸಲಾಗುತ್ತದೆ.
ಗಣರಾಜ್ಯೋತ್ಸವದ ಲೈವ್ ಪ್ರಸಾರಕ್ಕೆ ಹೇಗಿದೆ ದೂರದರ್ಶನದ ಸಿದ್ಧತೆ?
2022ರ ಜನವರಿ 26ರಂದು ಆಚರಿಸುತ್ತಿರುವ ಭಾರತದ 73ನೇ ಗಣರಾಜ್ಯೋತ್ಸವದ ವಿಶೇಷಗಳೇನು?, ಈ ವರ್ಷ ಯಾವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುವುದು?, ಭಾರತೀಯ ಸೇನಾ ಪಡೆಗಳ ಪರೇಡ್ ಹೇಗಿರಲಿದೆ ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.
ವಿಶೇಷ ಅತಿಥಿಗಳಿಗೆ ಯಾವುದೇ ಆಹ್ವಾನವಿಲ್ಲ
ಭಾರತದ ಗಣರಾಜ್ಯೋತ್ಸವವು ಕೇವಲ ಆಚರಣೆಯಾಗಿರದೆ, ಅದು ದೇಶದ ರಾಜತಾಂತ್ರಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣದಿಂದ ಈ ವರ್ಷ ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನವನ್ನು ನೀಡಿಲ್ಲ. ಸರ್ಕಾರವು ಐದು ಮಧ್ಯ ಏಷ್ಯಾ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನಗಳನ್ನು ಕಳುಹಿಸಿತ್ತು, ಆದರೆ ಈಗ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಈ ಹಿಂದೆ 1966ರಲ್ಲಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಿರಲಿಲ್ಲ. ಅದಕ್ಕೂ ಮೊದಲು 1952 ಮತ್ತು 1953ರಲ್ಲೂ ಗಣರಾಜ್ಯೋತ್ಸವ ಪರೇಡ್ನಲ್ಲಿ ಮುಖ್ಯ ಅತಿಥಿಗಳು ಇರಲಿಲ್ಲ ಎಂಬುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.
ಗಣರಾಜ್ಯೋತ್ಸವದ ಪರೇಡ್ 30 ನಿಮಿಷ ತಡ
ಕಳೆದ 75 ವರ್ಷಗಳ ಸ್ವಾತಂತ್ರ್ಯೋತ್ಸವದ ನಂತರದಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವದ ಆಚರಣೆಯಲ್ಲಿ ತಡವಾಗಲಿದೆ. ಸಾಮಾನ್ಯವಾಗಿ ಗಣರಾಜ್ಯೋತ್ಸವದ ಪರೇಡ್ ಬೆಳಗ್ಗೆ 10 ಗಂಟೆಗೆ ಆರಂಭವಾಗುತ್ತದೆ. ಆದರೆ ಈ ಬಾರಿ ಕೊವಿಡ್-19 ನಿರ್ಬಂಧಗಳ ಕಟ್ಟುನಿಟ್ಟಿನ ಜಾರಿ ಹಿನ್ನೆಲೆ 30 ನಿಮಿಷಗಳ ಕಾಲ ತಡವಾಗಿ ಪರೇಡ್ ಆರಂಭವಾಗಲಿದೆ. ಪರೇಡ್ ಪ್ರಾರಂಭವಾಗುವ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
90 ನಿಮಿಷಗಳವರೆಗೂ ನಡೆಯಲಿರುವ ಪರೇಡ್
ಗಣರಾಜ್ಯೋತ್ಸವದ ಪರೇಡ್ ಸಮಾರಂಭವು ಕಳೆದ ವರ್ಷದಂತೆ 90 ನಿಮಿಷಗಳ ಅವಧಿವರೆಗೂ ನಡೆಯುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡಿಯಾ ಗೇಟ್ ಬಳಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ತದನಂತರ ಸೇನಾ ತುಕಡಿಗಳ ಮಾರ್ಚ್ ಪಾಸ್ ಶುರುವಾಗುತ್ತವೆ. ಮೆರವಣಿಗೆಯಲ್ಲಿ ಸಾಂಸ್ಕೃತಿಕ ವೈವಿಧ್ಯತೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಐತಿಹಾಸಿಕ ಗಣರಾಜ್ಯೋತ್ಸವ ಪರೇಡ್ ರಾಷ್ಟ್ರಪತಿ ಭವನದಿಂದ ಆರಂಭವಾಗಿ ಇಂಡಿಯಾ ಗೇಟ್ನಲ್ಲಿ ಕೊನೆಗೊಳ್ಳಲಿದೆ. ಈ ನಡುವೆ ವಿಜಯ್ ಚೌಕ್ನಿಂದ ರಾಜ್ಪಥ್, ಅಮರ್ ಜವಾನ್ ಜ್ಯೋತಿ, ಇಂಡಿಯಾ ಗೇಟ್ ಪ್ರಿನ್ಸೆಸ್ ಪ್ಯಾಲೇಸ್, ತಿಲಕ್ ಮಾರ್ಗ್ ಮೂಲಕ ಸಾಗಲಿರುವ ಪರೇಡ್ ಅಂತಿಮವಾಗಿ ಇಂಡಿಯಾ ಗೇಟ್ಗೆ ತಲುಪಲಿದೆ.
73ನೇ ಗಣರಾಜ್ಯೋತ್ಸವದ ಧ್ವಜಾರೋಹಣ
ಕೊವಿಡ್19 ನಿರ್ಬಂಧಗಳ ಹಿನ್ನೆಲೆ ಗಣರಾಜ್ಯೋತ್ಸವದ ದಿನವನ್ನು ಕಡಿಮೆ ಅವಧಿಯಲ್ಲಿ ಆಚರಿಸಲಾಗುತ್ತದೆ. ಈ ಮೆರವಣಿಗೆಯ ತಂಡವು ಚಿಕ್ಕದಾಗಿರುತ್ತದೆ. ಸಾಂಸ್ಕೃತಿಕ ಪ್ರದರ್ಶನ ಕಡಿಮೆಯಾಗಿರಲಿದ್ದು, ಬುಧವಾರ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಸಾಮಾನ್ಯವಾಗಿ ಮೆರವಣಿಗೆಯು 9 ಗಂಟೆಗೆ ಪ್ರಾರಂಭವಾಗಲಿದ್ದು, 11.30ರ ಸುಮಾರಿಗೆ ಕೊನೆಯಾಗುತ್ತದೆ. ಮೆರವಣಿಗೆಯಲ್ಲಿನ ಬದಲಾವಣೆಗಳಿಂದಾಗಿ ಈ ಸಮಯದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಗಣರಾಜ್ಯೋತ್ಸವ ಸಂಭ್ರಮ ವೀಕ್ಷಣೆ ಹೇಗೆ?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣದ ಹಿನ್ನೆಲೆ ಗಣರಾಜ್ಯೋತ್ಸವದಲ್ಲಿ ಪ್ರೇಕ್ಷಕರ ಪ್ರಮಾಣವನ್ನು 24,000ಕ್ಕೆ ತಗ್ಗಿಸಲಾಗಿದೆ. ರಕ್ಷಣಾ ಸಂಸ್ಥೆಯ ಮೂಲಗಳ ಪ್ರಕಾರ ಕೊವಿಡ್-19 ಭೀತಿಗೂ ಮೊದಲು ಅಂದರೆ 2020ರಲ್ಲಿ ಗಣರಾಜ್ಯೋತ್ಸವ ಆಚರಿಸುವ ವೇಳೆ 1.25 ಲಕ್ಷ ಪ್ರೇಕ್ಷಕರಿಗೆ ಪರೇಡ್ ವೀಕ್ಷಿಸಲು ಅನುಮತಿ ನೀಡಲಾಗುತ್ತಿತ್ತು.
ಈ ವರ್ಷದ ಗಣರಾಜ್ಯೋತ್ಸವ ಪರೇಡ್ ಅನ್ನು ಡಿಡಿ ನ್ಯೂಸ್ ಮತ್ತು ಅದರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ನೀವು ಲೈವ್ ಆಗಿ ವೀಕ್ಷಿಸಬಹುದು. ಬಹುತೇಕ ಖಾಸಗಿ ಸುದ್ದಿ ವಾಹಿನಿಗಳು ಗಣರಾಜ್ಯೋತ್ಸವ ಪರೇಡ್ ಅನ್ನು ನೇರ ಪ್ರಸಾರ ಮಾಡಲಿವೆ.
56 ಪ್ರಸ್ತಾವನೆಗಳಲ್ಲಿ 21 ಸ್ತಬ್ಧಚಿತ್ರಗಳಿಗೆ ಅವಕಾಶ
ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು ಒಟ್ಟು 56 ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಈ ಪೈಕಿ 21 ಅನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ದೆಹಲಿ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಕೋಷ್ಟಕಗಳು ಈ ವರ್ಷ ಮೆರವಣಿಗೆಯ ಭಾಗವಾಗುವುದಿಲ್ಲ. ಕೆಂಪು ಕೋಟೆಗೆ ಸಾಮಾನ್ಯ ಮಾರ್ಗ ಅನುಸರಿಸುವ ಬದಲು ಈ ವರ್ಷ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ತುಕಡಿಗಳನ್ನು ನಿಯೋಜಿಸಲಾಗುತ್ತದೆ. ಈ ಪರೇಡ್ ಮತ್ತು ಕಾರ್ಯಕ್ರಮಗಳ ಅವಧಿಯಲ್ಲಿ ಕೊವಿಡ್-19 ನಿರ್ಬಂಧಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಗಣರಾಜ್ಯೋತ್ಸವದ ಥೀಮ್:
ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ 2022ರ ಗಣರಾಜ್ಯೋತ್ಸವದ ಪರೇಡ್ನ ವಿಷಯವು 'ಭಾರತ@75' ಆಗಿರುತ್ತದೆ. ಜನವರಿ 26 ಅನ್ನು ದೇಶದ ಗಣರಾಜ್ಯ ದಿನವೆಂದು ಆಯ್ಕೆ ಮಾಡಲಾಯಿತು, ಏಕೆಂದರೆ 1930 ರಲ್ಲಿ ಈ ದಿನದಂದು ಭಾರತೀಯ ಸ್ವಾತಂತ್ರ್ಯದ ಘೋಷಣೆ (ಪೂರ್ಣ ಸ್ವರಾಜ್) ಅನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಘೋಷಿಸಿತು, ಇದು ಬ್ರಿಟಿಷ್ ಆಡಳಿತವು ನೀಡುವ ಅಧಿಪತ್ಯದ ಸ್ಥಾನಮಾನಕ್ಕೆ ವಿರುದ್ಧವಾಗಿತ್ತು.