ಆರ್ ಬಿಐ ಮೇಲೆ ಬೆಂಕಿಯುಗುಳಿದ ಆರೆಸ್ಸೆಸ್ ಸಹವರ್ತಿ ಸಂಸ್ಥೆ
ನವದೆಹಲಿ, ನವೆಂಬರ್ 1: ಡಾಲರ್ ವಿರುದ್ಧದ ರುಪಾಯಿ ಮೌಲ್ಯ ಕುಸಿತಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರಣ ಎಂದು ರಾಷ್ಟ್ರೀಯ ಸ್ವಯಂಸೇವಕ್ ಸಂಘ್ (ಆರೆಸ್ಸೆಸ್) ಸಹವರ್ತಿ ಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಆರೋಪಿಸಿದೆ. ದೇಶದ ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಠಮಾರಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದೆ.
ಆರ್ ಬಿಐ ಹಾಗೂ ಮೋದಿ ಸರಕಾರದ ಮಧ್ಯೆ ಇರುವ ಭಿನ್ನಾಭಿಪ್ರಾಯ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. ಆರ್ ಬಿಐ ಸ್ವಾಯತ್ತತೆಗೆ ಸರಕಾರದಿಂದ ಯಾವುದೇ ಧಕ್ಕೆ ಆಗಬಾರದು ಎಂದು ಕೇಂದ್ರ ಬ್ಯಾಂಕ್ ನ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ಕಳೆದ ಶುಕ್ರವಾರ ಹೇಳಿದ್ದರು. ಅವರ ಹೇಳಿಕೆಗೆ ಅಖಿಲ ಭಾರತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೌಕರರ ಒಕ್ಕೂಟ ಬೆಂಬಲ ವ್ಯಕ್ತಪಡಿಸಿತ್ತು.
ಮಾಧ್ಯಮದ ಜತೆಗೆ ಮಾತನಾಡಿರುವ ಸ್ವದೇಶಿ ಜಾಗರಣ್ ಮಂಚ್ ನ ರಾಷ್ಟ್ರೀಯ ಸಹ-ಸಂಚಾಲಕ ಅಶ್ವನಿ ಮಹಾಜನ್, ರುಪಾಯಿ ಮೌಲ್ಯದ ಕುಸಿತ ತಡೆಯುವಲ್ಲಿ ಆರ್ ಬಿಐ ವಿಫಲವಾಗಿದೆ. ಅದರ ಅಧಿಕಾರಿಗಳು ಸರಕಾರದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಗೌರವಕ್ಕೆ ಇದು ಒಳ್ಳೆಯದಲ್ಲ್ ಎಂದಿದ್ದಾರೆ.

ದೇಶದೊಳಗೆ ಸಾಕಷ್ಟು ಬಂಡವಾಳ ಹರಿದುಬಂದಿದೆ
ಈ ಸರಕಾರದ ಉತ್ತಮ ನೀತಿಗಳಿಂದಾಗಿ ದೇಶದೊಳಗೆ ಸಾಕಷ್ಟು ಪ್ರಮಾಣದ ಬಂಡವಾಳ ಹರಿದುಬಂದಿದೆ. ಇದರಿಂದ ನಮ್ಮ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಾಗಿದೆ. ಆದರೆ ಆ ಸಂಗ್ರಹವನ್ನು ಭವಿಷ್ಯಕ್ಕಾಗಿ ಇಟ್ಟುಕೊಳ್ಳಲಾಗಿದೆ ಎಂದು ಆರ್ ಬಿಐ ಹೇಳುತ್ತಾ ಬಂತು. ಈಗ ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ಹಣ ವಾಪಸ್ ಪಡೆಯುವಾಗ ಅಂತರರಾಷ್ಟ್ರೀಯ ವಿಚಾರಗಳನ್ನು ನಿಂದಿಸುತ್ತಿದೆ ಎಂದು ಮಹಾಜನ್ ಹೇಳಿದ್ದಾರೆ.

ಹಠಮಾರಿಯಂತೆ ವರ್ತಿಸುತ್ತಿದೆ ಆರ್ ಬಿಐ
ಬಡ್ಡಿದರವನ್ನು ಹೆಚ್ಚಿಗೆ ಇಟ್ಟು, ಆರ್ ಬಿಐ ಹಠಮಾರಿಯಂತೆ ವರ್ತಿಸುತ್ತಿದೆ. "ಯುಪಿಎ ಸರಕಾರದಲ್ಲಿ ಇದ್ದಿದ್ದಕ್ಕಿಂತ ಹಣದುಬ್ಬರ ಹಾಗೂ ವಿತ್ತೀಯ ಕೊರತೆ ಈಗ ಕಡಿಮೆ ಇದೆ. ಆದರೂ ಬಡ್ಡಿದರ ಇಳಿಕೆ ಮಾಡಿಲ್ಲ" ಎಂದಿದ್ದಾರೆ. ಬ್ಯಾಂಕಿಂಗ್ ಹಿನ್ನೆಲೆಯಿಲ್ಲದ ವ್ಯಕ್ತಿಗಳನ್ನು ಸಹ ಆರ್ ಬಿಐ ಮಂಡಳಿ ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ನ ದಾಳಿಗೆ ಕೂಡ ಮಹಾಜನ್ ಉತ್ತರಿಸಿದ್ದಾರೆ. "ಐಎಂಎಫ್ ಹಾಗೂ ವಿಶ್ವ ಬ್ಯಾಂಕ್ ನಿಂದ ಬಂದ ಆರ್ಥಿಕ ತಜ್ಞರಷ್ಟೇ ಉತ್ತಮ ಕೆಲಸಗಳನ್ನು ಮಾಡಬಲ್ಲರು ಎಂದು ಕಾಂಗ್ರೆಸ್ ತಪ್ಪಾಗಿ ತಿಳಿದಂತಿದೆ" ಎಂದಿದ್ದಾರೆ.

ಭಾರತವನ್ನು ಚೆನ್ನಾಗಿ ಬಲ್ಲ ಆರ್ಥಿಕ ತಜ್ಞರ ನೇಮಕ
ಈ ದೇಶವನ್ನು ಚೆನ್ನಾಗಿ ಬಲ್ಲ ಆರ್ಥಿಕ ತಜ್ಞರನ್ನು ಮೋದಿ ಸರಕಾರ ನೇಮಕ ಮಾಡಿದೆ. ದಶಕಗಳ ಅನುಭವ ಇರುವ ಡಾ.ಎಸ್.ಗುರುಮೂರ್ತಿ ಹೆಸರಾಂತ ಆರ್ಥಿಕ ತಜ್ಞರು. ಡಾ.ಸತೀಶ್ ಮರಾಠೆ ಕೂಡ ಸಹಕಾರಿ ಬ್ಯಾಂಕ್ ಗಳನ್ನು ನಡೆಸುವ ದೀರ್ಘ ಕಾಲದ ಅನುಭವ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಆರೆಸ್ಸೆಸ್ ಹಾಗೂ ಎಬಿವಿಪಿ ಜತೆಗೆ ನಂಟು
ಗುರುಮೂರ್ತಿ ಹಾಗೂ ಮರಾಠೆ ಅವರನ್ನು ಈಚೆಗೆ ಅರೆಕಾಲಿಕ ಅಧಿಕಾರೇತರ ನಿರ್ದೇಶಕರನ್ನಾಗಿ ಆರ್ ಬಿಐಗೆ ನೇಮಿಸಲಾಗಿದೆ. ಇಬ್ಬರೂ ಆರೆಸ್ಸೆಸ್ ಜತೆಗೆ ನಂಟನ್ನು ಹೊಂದಿದ್ದಾರೆ. ಗುರುಮೂರ್ತಿ ಅವರು ಸ್ವದೇಶಿ ಜಾಗರಣ್ ಮಂಚ್ ನ ಸಂಚಾಲಕರೂ ಹೌದು. ಮರಾಠೆ ಅವರು ಆರೆಸ್ಸೆಸ್ ನ ವಿದ್ಯಾರ್ಥಿ ಘಟಕವಾದ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷದ್ ಜತೆಗೆ ನಂಟನ್ನು ಹೊಂದಿದ್ದಾರೆ.












Click it and Unblock the Notifications