ರಾಮ್ಪಾಲ್ಗೆ ಹಾಲು ಅಭಿಷೇಕ; ಅದೇ ಭಕ್ತರಿಗೆ ಪ್ರಸಾದ!
ಬರ್ವಾಲಾ, ನ. 20: ಹರ್ಯಾಣದ ವಿವಾದಿತ ಸ್ವಯಂಘೋಷಿತ ದೇವಮಾನವ ರಾಮ್ಪಾಲ್ ಕೊನೆಗೂ ಜೈಲು ಪಾಲಾಗಿದ್ದಾನೆ. ಪೊಲೀಸರು ಆತನನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ. 28ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಹೈ ಕೋರ್ಟ್ ಆದೇಶ ನೀಡಿದೆ.
ರಾಮ್ಪಾಲ್ ಹತ್ತಿರ ತೆರಳಲಾಗದಂತೆ ಅಡ್ಡ ನಿಂತಿದ್ದ ಭಕ್ತರನ್ನು ಚದುರಿಸುವಲ್ಲಿ ಪೊಲೀಸರು ಸಫಲರಾಗಿದ್ದು, ಆತನ ಸತ್ಲೋಕ್ ಆಶ್ರಮವನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಭಕ್ತರು ಆಶ್ರಮ ಬಿಟ್ಟು ತೆರಳುತ್ತಿದ್ದಾರೆ.

ಈ ಸಂದರ್ಭದಲ್ಲಿ ರಾಮ್ಪಾಲ್ ಕುರಿತು ಸ್ಥಳೀಯರು ಸಾಕಷ್ಟು ವಿಚಿತ್ರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಅವತಾರ ಎಂದು ರಾಮ್ಪಾಲ್ ಘೋಷಿಸಿಕೊಂಡಿದ್ದ. ಅಲ್ಲದೆ, ಕವಿ ಕಬೀರ ಸರ್ವೋಚ್ಚ ದೇವರು ಎಂದು ತಿಳಿಸಿದ್ದ.
ಇದಕ್ಕಿಂತ ವಿಚಿತ್ರ ವಿಷಯವೆಂದರೆ ದೇವಮಾನವ ರಾಮ್ಪಾಲ್ಗೆ ದಿನವೂ ಹಾಲಿನಿಂದ ಅಭಿಷೇಕ ಮಾಡಲಾಗುತ್ತಿತ್ತು. ನಂತರ ಅದೇ ಹಾಲಿನಿಂದ ಕೀರು ತಯಾರಿಸಿ ಭಕ್ತರಿಗೆ ಹಂಚಲಾಗುತ್ತಿತ್ತು. ಇದನ್ನು ಭಕ್ತರು ಮಹಾಪ್ರಸಾದ ಎಂದು ಕುಡಿದು ತಮ್ಮ ಜೀವನ ಪಾವನವಾಯಿತೆಂದು ತಿಳಿಯುತ್ತಿದ್ದರು. ರಾಮ್ಪಾಲ್ ಮೋಡಿಗೆ ಒಳಗಾಗಿದ್ದ ಭಕ್ತರು ಆತ ಹೇಳಿದಂತೆ ಕೇಳುತ್ತಿದ್ದರು.

ಯಾರು ಈ ರಾಮ್ಪಾಲ್: ಬಂಧಿತ 63 ವರ್ಷ ವಯಸ್ಸಿನ ರಾಮ್ಪಾಲ್ ಮೊದಲು ಇಂಜಿನಿಯರ್ ಆಗಿದ್ದ. ನಂತರ ತನ್ನನ್ನು ಸಂತನೆಂದು ಘೋಷಿಸಿಕೊಂಡಿದ್ದ. ಕಬೀರನ ದೋಹಾಗಳನ್ನು ಹೇಳುತ್ತ ಆಶ್ರಮಕ್ಕೆ ಬರುವ ಭಕ್ತರ ಮೇಲೆ ಮೋಡಿ ಮಾಡಿದ್ದ.
ಈತನ ಭಕ್ತರಾಗುವ ಮೊದಲು ಮದ್ಯ, ಮಾಂಸ, ಸಿಗರೇಟು ಸೇರಿದಂತೆ ಹಲವು ಆಹಾರಗಳನ್ನು ತ್ಯಜಿಸಲೇಬೇಕಿತ್ತು. ಅಸ್ಪ್ರಶ್ಯತೆ ಹಾಗೂ ನೃತ್ಯಗಳನ್ನು ನಿಷೇಧಿಸುವ ಮೂಲಕ ಉತ್ತಮ ಹೆಸರನ್ನೂ ಗಳಿಸಿದ್ದ. ಆದರೆ, ಭಿಕ್ಷುಕರಿಗೆ ಹಣ ನೀಡಬೇಡಿ. ಏನಾದರೂ ಕುಡಿಯಲು ಕೊಟ್ಟು ಕಳುಹಿಸಿಬಿಡಿ ಎಂಬಂತಹ ವಿಚಿತ್ರ ಸಲಹೆಗಳನ್ನು ನೀಡುತ್ತಿದ್ದ.

ಆತನನ್ನು ಪ್ರಶ್ನಿಸುವ ಯಾರನ್ನೇ ಆದರೂ ಆಶ್ರಮದ ಹೊರಗೇ ತಡೆಯಲಾಗುತ್ತಿತ್ತು. ಆತನಿಗೆ ವಿವಿಧ ರಾಜ್ಯಗಳಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಇದ್ದಾರೆ ಎನ್ನಲಾಗಿದೆ.












Click it and Unblock the Notifications