ಮಾಧ್ಯಮದ ಮೇಲೆ ಹರ್ಯಾಣ ಪೊಲೀಸ್ ಲಾಠಿ ಪ್ರಹಾರ
ಹರ್ಯಾಣ, ನ.18: ವಿವಾದಿತ ಸ್ವಾಮೀಜಿ ರಾಮ್ ಪಾಲ್ ಬಂಧನ ಸಂಬಂಧ ಸ್ವಾಮೀಜಿ ಬೆಂಬಲಿಗರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಗಾಯಗೊಂಡಿದ್ದಾರೆ. ಮಂಗಳವಾರ ಸುದ್ದಿ ಸಂಗ್ರಹಿಸಲು ತೆರಳಿದ ಮಾಧ್ಯಮದವರ ಮೇಲೂ ಪೊಲೀಸರು ದಾಳಿ ಮಾಡಿದ್ದಾರೆ.
ಮಾಧ್ಯಮದವರು ಗಲಾಟೆ ನಡೆಯುತ್ತಿದ್ದ ಸ್ವಾಮೀಜಿ ಆಶ್ರಮವನ್ನು ಸುತ್ತುವರಿದಿದ್ದರು. ಸ್ವಾಮೀಜಿ ಬೆಂಬಲಿಗರು ಮತ್ತು ಪೊಲೀಸರ ನಡುವಿನ ಘರ್ಷಣೆ ಸೆರೆಹಿಡಿಯುತ್ತಿದ್ದರು. ಈ ವೇಳೆ ಪೊಲೀಸರು ಪತ್ರಕರ್ತರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.[ಎರಡು ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳಿಗೆ ಜಾಮೀನು]
ಬಾಯಿ ಮಾತಿಗೂ ಬೆಲೆ ನೀಡದ ಮಾಧ್ಯಮ ಪ್ರತಿನಿಧಿಗಳು ಆಶ್ರಮವನ್ನು ಸುತ್ತುವರಿಯಲು ಪ್ರಯತ್ನಿಸಿದರು. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅನಿವಾರ್ಯವಾಗಿ ಬೆದರಿಸಬೇಕಾಯಿತು ಎಂದು ಹರ್ಯಾಣ ಡಿಜಿಪಿ ಎಸ್.ಎಸ್.ವಸಿಷ್ಠ ಹೇಳಿದ್ದಾರೆ.
ನಾವು ಚಿತ್ರೀಕರಣ ಮಾಡುತ್ತಿದ್ದೇವು, ಏಕಾಏಕಿ ದಾಳಿ ನಡೆಸಿದ ಪೊಲೀಸರು ನಮ್ಮ ಮೇಲೆ ಲಾಠಿ ಬೀಸಿದರು. ಈ ವೇಳೆ ಅನೇಕ ಪತ್ರಕರ್ತರು ತೀವ್ರವಾಗಿ ಗಾಯಗೊಂಡರು. ಅಲ್ಲದೇ ಕ್ಯಾಮರಾಗಳು ಪುಡಿ ಪುಡಿಯಾದವು ಎಂದು ವಾಹಿನಿಯ ವರದಿಗಾರರೊಬ್ಬ ಹೇಳಿದ್ದಾರೆ.
ಅಲ್ಲದೇ ಗಾಯಗೊಂಡ ಪತ್ರಕರ್ತರಿಗೆ ವೈದ್ಯಕೀಯ ನೆರವು ನೀಡುವ ಪ್ರಯತ್ನವನ್ನು ಮಾಡಲಾಗಿಲ್ಲ. ನಿಜವಾಗಿಯೂ ಪೊಲೀಸರ ವರ್ತನೆ ಪ್ರಜಾಪ್ರಭುತ್ವ ವಿರೋಧಿಯಾಗಿತ್ತು ಎಂದು ಮತ್ತೊಬ್ಬ ವರದಿಗಾರ ತಿಳಿಸಿದ್ದಾರೆ. ಒಟ್ಟಿನಲ್ಲಿ ಸ್ವಯಂ ಘೋಷಿತ ದೇವಮಾನವನ ಪ್ರಕರಣ ಪತ್ರಕರ್ತರು ಮತ್ತು ಪೊಲೀಸರ ನಡುವಿನ ಘರ್ಷಣೆಗೆ ಕಾರಣವಾಗಿದ್ದು ಮಾತ್ರ ವಿಚಿತ್ರ.