ಐಐಎಂಗಳಲ್ಲಿ ಇನ್ನು ಸರಕಾರದ ಹಸ್ತಕ್ಷೇಪ ಸುತಾರಾಂ ಇಲ್ಲ
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂ)ಗೆ ಇನ್ನೂ ಹೆಚ್ಚಿನ ಸ್ವಾಯತ್ತತೆ ನೀಡುವ ಮಸೂದೆಯೊಂದಕ್ಕೆ ಮಂಗಳವಾರ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಆ ಮೂಲಕ ಐಐಎಂಗಳ ಕಾರ್ಯಚಟುವಟಿಕೆಯಲ್ಲಿ ಹಾಗೂ ಅಧಿಕಾರ ಚಲಾಯಿಸುವುದರಲ್ಲಿ ಸರಕಾರದ ಪಾತ್ರ ಮಿತಿಗೊಳ್ಳುತ್ತದೆ.
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಮಸೂದೆ, 2017ಕ್ಕೆ ಕಳೆದ ಜುಲೈನಲ್ಲೇ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಪ್ರಾಧ್ಯಾಪಕರ ಆಯ್ಕೆ, ನಿರ್ದೇಶಕರ ನೇಮಕ ಸೇರಿದಂತೆ ಐಐಎಂನ ಕಾರ್ಯಚಟುವಟಿಕೆ ನಡೆಸಲು ಕಾನೂನುಬದ್ಧ ಅಧಿಕಾರ ನೀಡುವ ಮಸೂದೆ ಇದು.

ಸ್ನಾತಕೋತ್ತರ ಡಿಪ್ಲೊಮಾದ ಬದಲಾಗಿ ಪದವಿಯನ್ನೇ ಪ್ರದಾನ ಮಾಡುವ ಅಧಿಕಾರ ಈ ಮಸೂದೆ ಮೂಲಕ ಐಐಎಂಗೆ ದೊರೆಯಲಿದೆ. "ಈ ಮಸೂದೆಯು ಈ ಸಂಸ್ಥೆಗಳಿಗೆ ಸ್ವಾಯತ್ತತೆಯನ್ನು ನೀಡುತ್ತದೆ. ಇದರ ಮೂಲಕ ಸರಕಾರ, ಅಧಿಕಾರಿಗಳು ಐಐಎಂಗಳ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದು ಪೂರ್ತಿ ನಿಂತುಹೋಗುತ್ತದೆ. ಐಐಎಂಗಳೇ ಸ್ವತಂತ್ರವಾಗಿ ಎಲ್ಲ ತೀರ್ಮಾನ ಕೈಗೊಳ್ಳಬಹುದು" ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಚರ್ಚೆಯ ವೇಳೆ ಉತ್ತರಿಸಿದ ಅವರು, ನಿಯಮಗಳನ್ನು ರೂಪಿಸಲಾಗುವುದು. ರಾಜ್ಯಸಭಾ ಸದಸ್ಯರ ಸಲಹೆಗಳನ್ನು ಪರಿಗಣಿಸಲಾಗುವುದು. ಈ ಮಸೂದೆಗೆ ಮೇಲ್ಮನೆಯಲ್ಲಿ ಅವಿರೋಧವಾಗಿ ಒಪ್ಪಿಗೆ ಸಿಕ್ಕಿದೆ ಎಂದಿದ್ದಾರೆ.
ಯಾವುದೇ ಬಡ ವಿದ್ಯಾರ್ಥಿಗೆ ಐಐಎಂಗಳಲ್ಲಿ ಪ್ರವೇಶ ನಿರಾಕರಿಸಬಾರದು. ಶಿಕ್ಷಣ ಸಾಲದ ಬಡ್ಡಿಯನ್ನು ಸರಕಾರವೇ ಭರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಎಂ.ವಿ.ರಾಜೀವ್ ಗೌಡ, ಐಐಎಂನಲ್ಲಿ ವ್ಯಾಸಂಗ ಮಾಡಬಯಸುವ ಯಾರಿಗೇ ಆಗಲೀ ಸಂಪನ್ಮೂಲದ ಕೊರತೆ ಆಗಬಾರದು ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆಯಬೇಕು. ಜಗತ್ತಿನಾದ್ಯಂತ ಡಾಕ್ಟರೇಟ್ ಪದವಿಗೆ ಪ್ರವೇಶ ದೊರೆಯಬೇಕು. ಇದನ್ನೇ ಸರಕಾರ ಗುರಿಯಾಗಿಟ್ಟುಕೊಳ್ಳಬೇಕು ಎಂದರು.












Click it and Unblock the Notifications