ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ನವದೆಹಲಿ, ಮಾರ್ಚ್ 8: ರಾಜ್ಯಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂದು ಇನ್ನೂ ಅಂತಿಮವಾಗಿಲ್ಲ.
ಗುಜರಾತ್ ನಿಂದ ಆಯ್ಕೆಯಾಗಿದ್ದು ರಾಜ್ಯಸಭಾ ಸದಸ್ಯರಾಗಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಬಾರಿ ಉತ್ತರ ಪ್ರದೇಶದಿಂದ ಕಣಕ್ಕಿಳಿಯಲಿದ್ದಾರೆ. ಸದ್ಯ ಬಿಹಾರವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮಧ್ಯ ಪ್ರದೇಶದಿಂದ ಕಣಕ್ಕಿಳಿಯಲಿದ್ದಾರೆ.
ಗುಜರಾತ್ ನಿಂದ ಸಚಿವರಾದ ಪರ್ಷೋತ್ತಮ್ ರೂಪಾಲ ಮತ್ತು ಮನ್ಸುಖ್ ಎಲ್ ಮಾಂಡವಿಯಾ, ರಾಜಸ್ಥಾನದಿಂದ ಭೂಪೆಂದರ್ ಯಾದವ್ ರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಮುಂದಾಗಿದೆ.

ಇನ್ನು ಮಧ್ಯ ಪ್ರದೇಶದಿಂದ ಥಾವರ್ ಚಂದ್ ಗೆಹ್ಲೋಟ್, ಬಿಹಾರದಿಂದ ರವಿ ಶಂಕರ್ ಪ್ರಸಾದ್, ಹಿಮಾಚಲ ಪ್ರದೇಶದಿಂದ ಜೆ.ಪಿ.ನಡ್ಡಾ ರಾಜ್ಯಸಭೆ ಚುನಾಣಾ ಅಖಾಡಕ್ಕಿಳಿಯಲಿದ್ದಾರೆ.
ಆದರೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳು ಯಾರು ಎಂದು ಇನ್ನೂ ಅಂತಿಮವಾಗಿಲ್ಲ. ಈಗಾಗಲೇ ರಾಜ್ಯ ಘಟಕ ಸಂಸದ ಹಾಗೂ ಕೇರಳ ಮೂಲದ ಉದ್ಯಮಿ ರಾಜೀವ್ ಚಂದ್ರಶೇಖರ್ ಮತ್ತು ವಿ.ಆರ್.ಎಲ್ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಹೆಸರನ್ನು ಕೇಂದ್ರಕ್ಕೆ ಕಳುಹಿಸಿದೆ.
ಕಾಂಗ್ರೆಸ್ ಕನ್ನಡಿಗರನ್ನೇ ರಾಜ್ಯಸಭೆಗೆ ಕಳುಹಿಸಲು ನಿರ್ಧರಿಸಿರುವುದರಿಂದ ಬಿಜೆಪಿಯೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ.
ಮಾರ್ಚ್ 23ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ.












Click it and Unblock the Notifications