ರಫೇಲ್ : ಪ್ರಧಾನಿ ಮೋದಿ ವಿರುದ್ದ ರಾಹುಲ್ ಬತ್ತಳಿಕೆಗೆ ಸಿಕ್ತು ಇನ್ನೊಂದು ಅಸ್ತ್ರ
ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರದ ವಿರುದ್ದ ಪರಿಣಾಮಕಾರಿಯಾಗಿ ಹೋರಾಟ ನಡೆಸಲು ವಿಫಲರಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಫೇಲ್ ಡೀಲ್ ವಿಚಾರದಲ್ಲಿ ಮಾತ್ರ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಬಿಸಿಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಾ ಬರುತ್ತಿದ್ದಾರೆ.
ರಫೇಲ್ ಒಪ್ಪಂದದ ಆಳವನ್ನು ಅರಿತಂತಿರುವ ರಾಹುಲ್ ಬಲಿತ ರಾಜಕಾರಣಿಯಂತೆ ಸಾಗುತ್ತಿದ್ದು, ಸಾರ್ವತ್ರಿಕ ಚುನಾವಣೆಯ ಹೊತ್ತಲ್ಲಿ, ಎನ್ಡಿಎ ಮೈತ್ರಿಕೂಟದ ಅವಧಿಯಲ್ಲಿ ನಡೆದ ಬಹುದೊಡ್ಡ ಭ್ರಷ್ಟಾಚಾರ ಇದು ಎಂದು ಮತದಾರರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರೂ ಆಗಬಹುದು.
ಇದೇ ಶನಿವಾರ (ಅ 13) ಬೆಂಗಳೂರಿನ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಂಗಣದಲ್ಲಿ, ಅಲ್ಲಿನ ಸಿಬ್ಬಂದಿಗಳ ಜೊತೆ ರಾಹುಲ್ ಗಾಂಧಿಯ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಎಚ್ಎಎಲ್ ಸಂಸ್ಥೆ ತನ್ನ ಆವರಣದಲ್ಲಿ ಸಂವಾದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ನಿಲುವು ತಾಳಿರುವುದರಿಂದ, ರಾಹುಲ್ ಬತ್ತಳಿಕೆಗೆ ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ.
ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ, ರಫೇಲ್ ವಿಚಾರವನ್ನೇ ರಾಹುಲ್ ಗಾಂಧಿ ಪ್ರಮುಖವಾಗಿ ಮೋದಿ ವಿರುದ್ದ ಟೀಕಿಸಲು ಬಳಸುತ್ತಿರುವುದು ಗೊತ್ತಿರುವ ವಿಚಾರ. ಹೀಗಿರುವಾಗ, ಎಚ್ಎಎಲ್ ಆವರಣದಲ್ಲಿ ಅನುಮತಿ ನಿರಾಕರಿಸಿರುವುದನ್ನು ಇಟ್ಟುಕೊಂಡು, ಮತ್ತೊಂದು ಸುತ್ತು ಮೋದಿ ವಿರುದ್ದ ಮುಗಿಬೀಳಲು ರಾಹುಲ್ ಗಾಂಧಿಗೆ ಅಸ್ತ್ರ ಸಿಕ್ಕಂತಾಗಿದೆ.
ಎಚ್ಎಎಲ್ ಸಂಸ್ಥೆ ಕೇಂದ್ರದ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿ ಬರುವಂತಹ ಸಂಸ್ಥೆಯಾಗಿರುವುದರಿಂದ, ಕೇಂದ್ರ ಸರಕಾರದ ಒತ್ತಡದಿಂದಾಗಿ ರಾಹುಲ್ ಗಾಂಧಿ ಸಂವಾದಕ್ಕೆ ಅನುಮತಿ ನಿರಾಕರಿಸಲಾಗಿದೆಯಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಮೋದಿ ವಿರುದ್ದ ರಾಹುಲ್ ಬತ್ತಳಿಕೆಗೆ ಸಿಕ್ಕ ಇನ್ನೊಂದು ಅಸ್ತ್ರ ಇದಾಗುವ ಸಾಧ್ಯತೆಯಿದೆ. ಮುಂದೆ ಓದಿ

ದೇಶದ ಸೂಕ್ಷ್ಮಾತಿಸೂಕ್ಷ್ಮ ಪ್ರದೇಶಗಳಲ್ಲಿ ಒಂದು
ಎಚ್ಎಎಲ್ ಆವರಣದಲ್ಲಿ ಆ ಸಂಸ್ಥೆಯ ಸಿಬ್ಬಂದಿಗಳ ಜೊತೆ ಸಂವಾದ ನಡೆಸಲು ಕಾಂಗ್ರೆಸ್ ಎಲ್ಲಾ ಪೂರ್ವತಯಾರಿಗಳನ್ನು ನಡೆಸಿತ್ತು, ಪೊಲೀಸರ ಅನುಮತಿಯನ್ನೂ ಕೋರಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಇನ್ನೆರಡು ದಿನ ಇರಬೇಕಾದರೆ, ರಾಹುಲ್ ಸಂವಾದಕ್ಕೆ ಅನುಮತಿ ಸಿಗಲಿಲ್ಲ. ಎಚ್ಎಎಲ್ ಸಂಸ್ಥೆಯ ಆವರಣ ದೇಶದ ಸೂಕ್ಷ್ಮಾತಿಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವುದರಿಂದ, ಸಂಸ್ಥೆ ಅನುಮತಿ ನಿರಾಕರಿಸಿರಬಹುದು.

ರಾಷ್ಟ್ರ ಮಟ್ಟದಲ್ಲಿ ಸದ್ದಾಗುವ ಸುದ್ದಿ
ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಇದುವರೆಗೆ ಎಚ್ಎಎಲ್ ಆವರಣ ಬಳಕೆಯಾದ ಉದಾಹರಣೆಗಳಿಲ್ಲ. ಬಹುದೊಡ್ಡ ಕ್ಯಾಂಪಸ್ ಅನ್ನು ಹೊಂದಿರುವ ಎಚ್ಎಎಲ್ ಭಾರೀ ಭದ್ರತೆಯನ್ನು ಹೊಂದಿರುವಂತಹ ಸಂಸ್ಥೆ. ಒಂದು ವೇಳೆ, ರಾಹುಲ್ ಸಂವಾದಕ್ಕೆ ಅನುಮತಿ ನೀಡಿದ್ದರೆ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವ ಸುದ್ದಿಯಾಗುವುದರಿಂದ, ಎಲ್ಲಾ ಮಾಧ್ಯಮಗಳು ಮತ್ತು ಸಾರ್ವಜನಿಕರು ಬರುವ ಸಾಧ್ಯತೆಯಿರುವುದರಿಂದ, ಭದ್ರತಾ ದೃಷ್ಟಿಯಿಂದ, ಸಂಸ್ಥೆ ಅನುಮತಿ ನಿರಾಕರಿಸಬಹುದು.

ಎಚ್ಎಎಲ್ ಸಂಸ್ಥೆಗೆ ತೊಂದರೆಯಾಗಿದೆ
ಆದರೆ. ರಫೇಲ್ ವಿಚಾರದಲ್ಲಿ ಮೋದಿ ವಿರುದ್ದ ವಾಗ್ದಾಳಿ ನಡೆಸುವತ್ತ ಸದ್ಯ ಉತ್ತುಂಗದಲ್ಲಿರುವ ರಾಹುಲ್ ಗಾಂಧಿ, ಎಚ್ಎಎಲ್ ಅನುಮತಿ ನಿರಾಕರಿಸಿರುವುದನ್ನು ಬೇರೆಯೇ ಆಯಾಮದಲ್ಲಿ ಕೊಂಡೊಯ್ಯುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ, ಹತ್ತು ಹಲವು ಬಾರಿ, ರಫೇಲ್ ಒಪ್ಪಂದದಿಂದ ಕರ್ನಾಟಕಕ್ಕೆ ನಷ್ಟವಾಗಿದೆ, ಎಚ್ಎಎಲ್ ಸಂಸ್ಥೆಗೆ ತೊಂದರೆಯಾಗಿದೆ, ಅಲ್ಲಿನ ಸಿಬ್ಬಂದಿಗಳ ಕೆಲಸಕ್ಕೂ ತೊಂದರೆ ಬರುವ ಸಾಧ್ಯತೆಯಿದೆ ಎಂದು ರಾಹುಲ್ ಹೇಳುತ್ತಲೇ ಬರುತ್ತಿದ್ದಾರೆ.

ಪರ್ಯಾಯವಾಗಿ, ಬೆಂಗಳೂರು ಮಿನ್ಸ್ಕ್ ಚೌಕದ ಬಳಿ ಇನ್ನೊಂದು ಆವರಣ
ಹೀಗಿರುವಾಗ, ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರಕಾರದ ಒತ್ತಡದಿಂದ ಎಚ್ಎಎಲ್ ಅನುಮತಿ ನಿರಾಕರಿಸಿದೆ ಎಂದು ರಾಹುಲ್ ಮತ್ತೊಂದು ಸುತ್ತು ಮೋದಿ ಸರಕಾರದ ವಿರುದ್ದ ಮಾತಿನ ಯುದ್ದ ಆರಂಭಿಸುವ ಸಾಧ್ಯತೆಯಿಲ್ಲದಿಲ್ಲ. ಪರಿಸ್ಥಿತಿಯ ಕಾವನ್ನು ಕೂಡಲೇ ಅರಿತ ಕೆಪಿಸಿಸಿ, ಎಚ್ಎಎಲ್ ಆವರಣಕ್ಕೆ ಪರ್ಯಾಯವಾಗಿ, ಬೆಂಗಳೂರು ಮಿನ್ಸ್ಕ್ ಚೌಕದ ಬಳಿ ಇನ್ನೊಂದು ಆವರಣವನ್ನು ಗುರುತಿಸಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ
ಫ್ರಾನ್ಸ್ ದೇಶದ ಏವಿಯೇಶನ್ ಸಹಯೋಗದೊಂದಿಗೆ ರಫೇಲ್ ಯುದ್ದ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಎಚ್ಎಎಲ್ಗೆ ಇರಲಿಲ್ಲ. ಇದು ಯುಪಿಎ ಅವಧಿಯಲ್ಲಿ ಮಾಡಿಕೊಂಡಿದ್ದ 126 ರಫೇಲ್ ಯುದ್ದ ವಿಮಾನಗಳ ಖರೀದಿ ಒಪ್ಪಂದ ಮುರಿದು ಬೀಳಲು ಪ್ರಮಖ ಕಾರಣ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಯುದ್ದ ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಮುಂದಾದರೆ ಅದರ ಬೆಲೆ ದುಪ್ಪಟ್ಟಾಗುತ್ತಿತ್ತು. ಜೊತೆಗೆ, ವಿಮಾನಗಳನ್ನು ಭಾರತದಲ್ಲೇ ತಯಾರಿಸಿದರೆ, ಅವುಗಳಿಗೆ ಗ್ಯಾರೆಂಟಿ ಕೊಡಬೇಕಾಗಿತ್ತು. ಆದರೆ ವಿಮಾನಗಳಿಗೆ ಗ್ಯಾರಂಟಿ ಕೊಡುವ ಪರಿಸ್ಥಿತಿಯಲ್ಲಿ ಎಚ್ಎಎಲ್ ಇರಲಿಲ್ಲ. ಹೀಗಾಗಿ ಎಚ್ಎಎಲ್ ಸಂಸ್ಥೆಗೆ ಈ ಆರ್ಡರ್ ಸಿಕ್ಕಿರಲಿಲ್ಲ ಎಂದು ರಕ್ಷಣಾ ಸಚಿವೆ ಹೇಳಿದ್ದರು.












Click it and Unblock the Notifications