ಮೋದಿ ಸರ್ಕಾರ ನಿದ್ದೆಯಲ್ಲಿರುವಾಗ ಚೀನಾದಿಂದ ಯುದ್ಧಕ್ಕೆ ಸಿದ್ಧತೆ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
ಜೈಪುರ, ಡಿಸೆಂಬರ್ 16: ಚೀನಾ ದೇಶವು ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ನಿದ್ರೆಯಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದರು.
ಭಾರತ್ ಜೋಡೊ ಯಾತ್ರೆಯಲ್ಲಿರುವ ಅವರು ರಾಜಸ್ಥಾನದ ದೌಸಾದಲ್ಲಿ ಮಾಧ್ಯಮಗೋಷ್ಠಿ ನಡೆಸಿದರು.
'ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಕೇವಲ ಆಕ್ರಮಣಕ್ಕೆ ಅಲ್ಲ. ಅವರ ಅಸ್ತ್ರಗಳ ಮಾದರಿಯನ್ನು ನೋಡಿ. ಅವರು ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ನಮ್ಮ ಸರ್ಕಾರ ಈ ವಾಸ್ತವವನ್ನು ಒಪ್ಪಿಕೊಳ್ಳುತ್ತಿಲ್ಲ. ಭಾರತ ಸರ್ಕಾರವು ಕೇವಲ ನಡೆದಿರುವ ಘಟನೆಗಳ ಬಗ್ಗೆ ತಲೆಕೆಸಿಕೊಂಡಿದೆಯೇ ಹೊರತು ಮುಂದಿನ ತಂತ್ರಗಳ ಬಗ್ಗೆ ಅಲ್ಲ' ಎಂದು ಅವರು ಟೀಕಿಸಿದರು.

'ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ. ಅವರು ನಮ್ಮ ಸೈನಿಕರನ್ನು ಹೊಡೆದು ಹಾಕುತ್ತಿದ್ದಾರೆ. ಚೀನಾದ ಬೆದರಿಕೆ ಸ್ಪಷ್ಟವಾಗಿದೆ. ಆದರೆ, ನಮ್ಮ ಸರ್ಕಾರ ಈ ವಾಸ್ತವವನ್ನು ಮರೆಮಾಡುತ್ತಿದೆ. ಎಲ್ಲವನ್ನೂ ನಿರ್ಲಕ್ಷಿಸುತ್ತಿದೆ. ಲಡಾಖ್ ಮತ್ತು ಅರುಣಾಚಲದಲ್ಲಿ ಚೀನಾ ಆಕ್ರಮಣಕ್ಕೆ ತಯಾರಿ ನಡೆಸುತ್ತಿದೆ. ನಮ್ಮ ಸರ್ಕಾರ ಮಾತ್ರ ನಿದ್ರಿಸುತ್ತಿದೆ' ಎಂದು ರಾಹುಲ್ ಆರೋಪಸಿದರು.
ಇದೇ ವೇಳೆ, ರಾಹುಲ್ ಗಾಂಧಿ ಅವರು, ವಿದೇಶಾಂಗ ಸಚಿವ ಎಸ್ ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿದೇಶಾಂಗ ಸಚಿವರಿಗೆ ವಾಸ್ತವದ ಕುರಿತು ಅರಿವಿಲ್ಲ. ಚೀನಾದ ಬಗ್ಗೆ ತಿಳಿದುಕೊಂಡಿಲ್ಲ. ನಾವು ಅವರ ಜ್ಞಾನವನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದರು.

ಕಳೆದ ವಾರ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಯಥಾಸ್ಥಿತಿಯನ್ನು ಬದಲಿಸಲು ಪ್ರಯತ್ನಿಸಿದೆ. ಚೀನಾ ಸೈನಿಕರು ಭಾರತದ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಮೋದಿ ಸರ್ಕಾರ ಮರೆಮಾಚಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಕೋಲಾಹಲವೇ ನಡೆದಿದೆ.
2020 ರಲ್ಲಿ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ 20 ಭಾರತೀಯ ಸೈನಿಕರನ್ನು ಚೀನಾ ದೇಶವು ಹತ್ಯೆ ಮಾಡಿತ್ತು.
ತಮಿಳು ನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೊ ಯಾತ್ರೆ ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಈಗಾಗಲೇ ಭಾರತದ ಏಳು ರಾಜ್ಯಗಳಲ್ಲಿ ಸಾಗಿರುವ ಯಾತ್ರೆಯು ಡಿಸೆಂಬರ್ 4ರಂದು ರಾಜಸ್ಥಾನ ತಲುಪಿದೆ. ಮಧ್ಯಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಸಾಗಿರುವ ಯಾತ್ರೆಗೆ ಭಾರೀ ಜನಬೆಂಬಲ ದೊರೆತಿದೆ. ಭಾರತ್ ಜೋಡೊ ಯಾತ್ರೆಯು 3500 ಕಿಮೀ ಕ್ರಮಿಸಲಿದೆ.












Click it and Unblock the Notifications