ಆ ಇಬ್ಬರು ಪ್ರಧಾನಿ ಮೋದಿಯನ್ನು ಪೂಜಿಸುತ್ತಾರೆ: ರಾಹುಲ್ ವಾಗ್ದಾಳಿ ನಡೆಸಿದ್ದು ಯಾರ ವಿರುದ್ಧ?
ಉಜ್ಜಯನಿ, ನವೆಂಬರ್ 19: ಭಾರತ್ ಜೋಡೋ ಯಾತ್ರೆ ಮುನ್ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ತಪಸ್ಸು ಮಾಡುವವರು(ಸಾಮಾನ್ಯ ಜನರು) ಸರ್ಕಾರದಿಂದ ಏನನ್ನೂ ಪಡೆಯುವುದಿಲ್ಲ, ಆದರೆ, ಆ 'ಇಬ್ಬರು' ಮೋದಿಯನ್ನು ಪೂಜಿಸುತ್ತಾರೆ. ಬಯಸಿದ್ದೆಲ್ಲವೂ ಅವರಿಗೆ ಸಿಗುತ್ತದೆ ಎಂದು ಟೀಕಿಸಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ರಾಹುಲ್ ಮಾತನಾಡಿದರು.

'ತಪಸ್ಯ ಮಾಡುವವರಿಗೆ ಸರ್ಕಾರದಿಂದ ಏನೂ ಸಿಗುವುದಿಲ್ಲ. ಇಬ್ಬರು ವ್ಯಕ್ತಿಗಳು ಪ್ರಧಾನಿ ಮೋದಿಯನ್ನು ದಿನವಿಡೀ ಪೂಜಿಸುತ್ತಾರೆ. ಅವರು ಬಯಸಿದ್ದನ್ನು ಪಡೆಯುತ್ತಾರೆ. ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ರಸ್ತೆಗಳು, ವಿದ್ಯುತ್ ಎಲ್ಲವನ್ನೂ ಅವರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ' ಎಂದು ರಾಹುಲ್ ಆರೋಪಿಸಿದ್ದಾರೆ.
ಮೋದಿ ನೇತೃತ್ವದ ಆಡಳಿತವು ಈ ಹಿಂದೆ ಕೋಟ್ಯಾಧಿಪತಿಗಳಿಗಾಗಿ ಮಾತ್ರ ಕೆಲಸ ಮಾಡಿದೆ ಮತ್ತು ಸಾಮಾನ್ಯ ಜನರ ಅಗತ್ಯಗಳನ್ನು ನಿರ್ಲಕ್ಷಿಸಿದೆ ಎಂದು ರಾಹುಲ್ ಹೇಳಿದ್ದಾರೆ.
ಉಜ್ಜಯಿನಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಮಲ್ ಪಟೇಲ್ ಮತ್ತು ಶಾಸಕರಾದ ಮಹೇಶ್ ಪರ್ಮಾರ್, ರಾಮಲಾಲ್ ಮಾಳವೀಯ ಸೇರಿದಂತೆ ಇತರರು ಗಾಂಧಿ ಅವರನ್ನು ಬರಮಾಡಿಕೊಂಡರು.

ಕಾಂಗ್ರೆಸ್ ಯಾತ್ರೆಯು ಉಜ್ಜಯಿನಿ ಜಿಲ್ಲೆಯ ಪಂಥ್ಪಿಪ್ಲೈ ಗ್ರಾಮವನ್ನು ತಲುಪಿದೆ. 83ನೇ ದಿನದ ಪಾದಯಾತ್ರೆಯಲ್ಲಿ ನೂರಾರು ಕಾರ್ಮಿಕರು ರಾಹುಲ್ ಗಾಂಧಿ ಜೊತೆ ಒಟ್ಟಾಗಿ ನಡೆದಾಡುತ್ತಿರುವುದು ಕಂಡು ಬಂದಿದೆ.
ಭಾರತ್ ಜೋಡೋ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಸಂಚರಿಸಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಯಾತ್ರೆಯು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಸುಮಾರು 3,500 ಕಿಮೀಗೂ ಅಧಿಕ ಕ್ರಮಿಸಲಿದೆ.












Click it and Unblock the Notifications