ಆತನ ಸಿದ್ಧಾಂತವನ್ನು ಒಪ್ಪಲು ಸಾಧ್ಯವಿಲ್ಲ: ವರುಣ್ ಗಾಂಧಿ ಕುರಿತು ರಾಹುಲ್ ನೀಡಿದ ಅಪರೂಪದ ಹೇಳಿಕೆ ಏನು?
ನವದೆಹಲಿ, ಜನವರಿ 17: ಬಿಜೆಪಿ ಸಂಸದ ವರುಣ್ ಗಾಂಧಿ ಅವರ ಬಗ್ಗೆ ಅಪರೂಪದ ಹೇಳಿಕೆಯೊಂದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ನೀಡಿದ್ದಾರೆ.
ನಾವಿಬ್ಬರೂ ಎರಡು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳು. ಆತ ಅಳವಡಿಸಿಕೊಂಡ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಂಜಾಬ್ನಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, 'ನಾನು ಅವರನ್ನು ಭೇಟಿ ಮಾಡಬಹುದು. ಅಪ್ಪಿಕೊಳ್ಳಬಹುದು. ಆದರೆ, ನಾನು ಆ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.

'ವರುಣ್ ಗಾಂಧಿ ಬಿಜೆಪಿಯಲ್ಲಿದ್ದಾರೆ. ಅವರು ಇಲ್ಲಿ ಕಾಲಿಟ್ಟರೆ ಅವರಿಗೆ ಸಮಸ್ಯೆಯಾಗಬಹುದು. ನನ್ನ ಐಡಿಯಾಲಜಿ ಅವರ ಐಡಿಯಾಲಜಿಗೆ ಹೊಂದಿಕೆಯಾಗುತ್ತಿಲ್ಲ. ನಾನು ಎಂದಿಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಚೇರಿಗೆ ಹೋಗಲಾರೆ. ಅದಕ್ಕೂ ಮುನ್ನ ನನ್ನ ಶಿರಚ್ಛೇದ ಮಾಡಲೇಬೇಕು. ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ. ವರುಣ್ ಇನ್ನೊಂದನ್ನು ಅಳವಡಿಸಿಕೊಂಡಿದ್ದಾನೆ. ನಾನು ಆ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಅವರನ್ನು ಭೇಟಿ ಮಾಡಬಹುದು, ಅಪ್ಪಿಕೊಳ್ಳಬಹುದು. ಆದರೆ, ಆ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ರಾಹುಲ್ ಸುದ್ದಿಗಾರರಿಗೆ ತಿಳಿಸಿದರು.
'ಆರೆಸ್ಸೆಸ್ ಮತ್ತು ಬಿಜೆಪಿಯಿಂದ ದೇಶದ ಸಂಸ್ಥೆಗಳ ಮೇಲಿನ ಒತ್ತಡದ ಬಗ್ಗೆಯೂ ರಾಹುಲ್ ಕಳವಳ ವ್ಯಕ್ತಪಡಿಸಿದರು. ಇಂದು ದೇಶದ ಎಲ್ಲಾ ಸಂಸ್ಥೆಗಳು ಆರೆಸ್ಸೆಸ್ ಮತ್ತು ಬಿಜೆಪಿಯ ಹಿಡಿತದಲ್ಲಿವೆ. ಎಲ್ಲ ಸಂಸ್ಥೆಗಳ ಮೇಲೂ ಒತ್ತಡವಿದೆ. ಪತ್ರಿಕಾ ಒತ್ತಡದಲ್ಲಿದೆ. ಚುನಾವಣಾ ಆಯೋಗವು ಒತ್ತಡದಲ್ಲಿದೆ, ಅವರು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಾರೆ' ಎಂದು ಅವರು ಹೇಳಿದರು.
'ಇದು ಒಂದು ರಾಜಕೀಯ ಪಕ್ಷ ಮತ್ತು ಇನ್ನೊಂದು ರಾಜಕೀಯ ಪಕ್ಷದ ನಡುವಿನ ಹೋರಾಟವಲ್ಲ. ಇದು ಈಗ ಅವರ ವಶದಲ್ಲಿರುವ ದೇಶದ ಸಂಸ್ಥೆಗಳು ಮತ್ತು ಪ್ರತಿಪಕ್ಷಗಳ ನಡುವಿನ ಹೋರಾಟವಾಗಿದೆ' ಎಂದು ರಾಹುಲ್ ತಿಳಿಸಿದರು.

ಭಾರತ್ ಜೋಡೋ ಯಾತ್ರೆ ಮಂಗಳವಾರ ಹೋಶಿಯಾರ್ಪುರ ಜಿಲ್ಲೆಯ ತಾಂಡಾದಿಂದ ಪುನರಾರಂಭಗೊಂಡಿದ್ದು, ಇಂದು ಸಂಜೆಯ ವೇಳೆಗೆ ಮುಕೇರಿಯನ್ ತಲುಪಲಿದೆ.












Click it and Unblock the Notifications