ಬಿಜೆಪಿ ಕಚೇರಿ ಮೇಲೆ ನಿಂತಿದ್ದ ಜನರಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ: ವಿಡಿಯೊ ನೋಡಿ
ಜೈಪುರ, ಡಿಸೆಂಬರ್ 06: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ರಾಜಸ್ಥಾನದ ಝಲಾವರ್ನಲ್ಲಿ ಸಾಗುತ್ತಿದೆ. ಇಂದು ಬೆಳಗ್ಗೆ ಬಿಜೆಪಿ ಕಚೇರಿ ಮೇಲೆ ನಿಂತಿದ್ದ ಜನರಿಗೆ ರಾಹುಲ್ ಫ್ಲೈಯಿಂಗ್ ಕಿಸ್ ಕೊಟ್ಟರು. ಆ ನಂತರ ಕೈ ಬೀಸಿದರು. ಈ ಸಂದರ್ಭವನ್ನು ಸೆರೆಹಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಭಾರತ್ ಜೋಡೊ ಯಾತ್ರೆ ಹಿನ್ನೆಲೆ: ಚಳಿಗಾಲದ ಅಧಿವೇಶನಕ್ಕೆ ರಾಹುಲ್ ಗಾಂಧಿ ಗೈರಾಗುವ ಸಾಧ್ಯತೆ
ಬಿಜೆಪಿ ಕಚೇರಿಯ ಮೇಲ್ಛಾವಣಿಯಲ್ಲಿ ನಿಂತಿದ್ದ ಜನರತ್ತ ರಾಹುಲ್ ಕೈ ಬೀಸಿದರು. ಬಿಜೆಪಿ ಧ್ವಜಗಳನ್ನು ಹಿಡಿದುಕೊಂಡಿದ್ದ ಕಾರ್ಯಕರ್ತರಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ದೊಡ್ಡ ನಗುವಿನೊಂದಿಗೆ ಕೈಬೀಸಿದ ರಾಹುಲ್ ಅವರಿಗೆ ಹಲವು ಬಿಜೆಪಿ ಕಾರ್ಯಕರ್ತರು ಹಿಂತಿರುಗಿ ಕೈಬೀಸುತ್ತಿರುವುದು ಕಂಡುಬಂದಿತು. ಇದು ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೊದಲ್ಲಿ ಕಂಡುಬಂದಿದೆ.
|
ವಸುಂಧರಾ ರಾಜೇ ತವರು ಕ್ಷೇತ್ರ ಝಲಾವರ್
ಝಲಾವರ್, ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ತವರು ಕ್ಷೇತ್ರವಾಗಿದೆ. ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ ಚುನಾವಣೆಗೆ ಮುಂಚಿತವಾಗಿ ರಾಹುಲ್ ಈ ಕ್ಷೇತ್ರದಲ್ಲಿ ಯಾತ್ರೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಝಲಾವರ್ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದೆ.
ರಾಹುಲ್ ಗಾಂಧಿ ಅವರಿಗೆ ಎದುರಾದ ಬಿಜೆಪಿ ಕಚೇರಿಯು ವಸುಂಧರಾ ರಾಜೆ ಅವರ ಪುತ್ರ ಬಿಜೆಪಿ ಸಂಸದ ದುಷ್ಯಂತ್ ಸಿಂಗ್ ಅವರ ಕಚೇರಿಯಾಗಿದೆ. ಕಟ್ಟಡವನ್ನು ದೀಪಾಲಂಕಾರ ಹಾಗೂ ಬಿಜೆಪಿ ಧ್ವಜಗಳಿಂದ ಅಲಂಕರಿಸಲಾಗಿತ್ತು. ಅದರ ಮುಂಬಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ವಸುಂಧರಾ ರಾಜೆ ಮತ್ತು ದುಷ್ಯಂತ್ ಸಿಂಗ್ ಅವರ ಭಾವ ಚಿತ್ರಗಳಿರುವ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ರಾಹುಲ್ ಅವರೊಂದಿಗೆ ರಾಜಸ್ಥಾನ ಸಚಿವ ಸಚಿನ್ ಪೈಲಟ್ ಸಹ ಇದ್ದರು.
ಇದು ರಾಹುಲ್ ಗಾಂಧಿ ಶೈಲಿ ಎಂದ ಜೈರಾಮ್ ರಮೇಶ್
ರಾಹುಲ್ ಅವರ ಫೈಲಿಂಗ್ ಕಿಸ್ ವಿಡಿಯೊ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ನ ಪ್ರಮುಖ ನಾಯಕ ಜೈ ರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.
'ಇದು ರಾಹುಲ್ ಗಾಂಧಿಯವರ ಶೈಲಿ. ನೀವು ಇದರ ಬಗ್ಗೆ ಹೆಚ್ಚು ಗಂಭೀರವಾಗಬೇಕಿಲ್ಲ. ರಾಹುಲ್ ಅವರು ಎಲ್ಲರನ್ನೂ ಸ್ವಾಗತಿಸುತ್ತಾರೆ' ಎಂದು ಹೇಳಿದರು.
ಸೈದ್ದಾಂತಿಕ ವಿರೋಧಿಗಳಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರನ್ನು ಸಹ ರಾಹುಲ್ ಆಹ್ವಾನಿಸಿದ್ದಾರೆ ಎಂದೂ ಜೈರಾಮ್ ರಮೇಶ್ ತಿಳಿಸಿದರು.
ಯಾವುದೇ ದ್ವೇಷವಿಲ್ಲ ಎಂದ ರಾಹುಲ್ ಗಾಂಧಿ
ಈ ವಿಡಿಯೊವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, 'ಯಾವುದೇ ದುರುದ್ದೇಶವಿಲ್ಲ. ಕೋಪವಿಲ್ಲ. ಅಸಮಾಧಾನವಿಲ್ಲ. ಇದ್ಯಾವುದೂ ಭಾರತ ಜೋಡೊ ಯಾತ್ರಿಗಳ ಹೃದಯದಲ್ಲಿಲ್ಲ. ಅವರಲ್ಲಿರುವುದು ಭಾರತವನ್ನು ಒಂದುಗೂಡಿಸುವ ಬಯಕೆ. ಭಾರತೀಯರ ನೋವುಗಳ ಬಗ್ಗೆ ಸಹಾನುಭೂತಿ ಮತ್ತು ಎಲ್ಲಾ ನಾಗರಿಕರ ಮೇಲಿನ ಪ್ರೀತಿ' ಎಂದು ಬರೆದುಕೊಂಡಿದ್ದಾರೆ.
ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಲು ಎಲ್ಲರೂ ಸ್ವತಂತ್ರರು ಎಂದು ರಾಹುಲ್ ತಿಳಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಗೆ ಜನಬೆಂಬಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ಮಧ್ಯ ಪ್ರದೇಶದಲ್ಲಿ ಅಪಾರ ಜನಬೆಂಬಲ ವ್ಯಕ್ತವಾಗಿದೆ. ಬುರ್ಹಾನ್ಪುರ, ಖಾಂಡ್ವಾ, ಖಾರ್ಗೋನ್ ಮತ್ತು ಎಂಪಿಯ ಇಂದೋರ್ ಜಿಲ್ಲೆಗಳ ಮೂಲಕ ಭಾರತ್ ಜೋಡೊ ಯಾತ್ರೆ ಹಾದುಹೋಗಿದೆ. ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಮಾಜಿ ಸೈನಿಕರು, ಕಲಾವಿದರು, ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಕನ್ನಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗುತ್ತಿರುವ ಯಾತ್ರೆ
ಭಾರತ್ ಜೋಡೊ ಯಾತ್ರೆಯು ತಮಿಳು ನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿದೆ. ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. 3,500 ಕಿಲೋ ಮೀಟರ್ಗೂ ಅಧಿಕ ದೂರ ಯಾತ್ರೆ ಕ್ರಮಿಸಲಿದೆ. ಈಗಾಗಲೇ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶಗಳಲ್ಲಿ ಯಾತ್ರೆ ಸಾಗಿದೆ. ಪ್ರಸ್ತುತ ರಾಜಸ್ಥಾನದಲ್ಲಿ ಯಾತ್ರೆ ಸಾಗುತ್ತಿದೆ.