ಕಾಂಗ್ರೆಸ್ ಯುವರಾಜನಿಗೆ ಕಾಶ್ಮೀರದಲ್ಲಿ ಮುಖಭಂಗ
ಶ್ರೀನಗರ, ನ.6 : ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರಿಗೆ ಜಮ್ಮ ಕಾಶ್ಮೀರದಲ್ಲಿ ಭಾರೀ ಮುಖಭಂಗ ಉಂಟಾಗಿದೆ. ಬೃಹತ್ ಸಮಾವೇಶದಲ್ಲಿ ಸ್ಥಳೀಯರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಸವಲತ್ತು ದೊರೆಯುತ್ತಿಲ್ಲ ಎಂದು ರಾಹುಲ್ ಗಾಂಧಿ ಭಾಷಣಕ್ಕೆ ಅಡ್ಡಿ ಪಡಿಸಿದ್ದಾರೆ. ತಮ್ಮ ಭಾಷಣಕ್ಕೆ ಅಡ್ಡಿ ಉಂಟಾಗಿದ್ದರಿಂದ ರಾಹುಲ್ ಗಾಂಧಿಗೆ ತೀವ್ರ ಮುಖಭಂಗ ಉಂಟಾಗಿದೆ.
ಬುಧವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಮ್ಮು ಕಾಶ್ಮೀರದಲ್ಲಿ ಸರ್ ಪಂಚ್ ಸಮಾವೇಶ ಉದ್ದೇಶಿಸಿ ಮಾತನಾಡಲು ಆಗಮಿಸಿದ್ದರು. ಆದರೆ, ರಾಹುಲ್ ಗಾಂಧಿ ಭಾಷಣ ಆರಂಭಿಸಿದ ಕೆಲವೇ ಕ್ಷಣದಲ್ಲಿ ಸ್ಥಳೀಯರು ವೇದಿಕೆ ಮೇಲೆಯೇ ರಾಹುಲ್ ಗಾಂಧಿ ಹಾಗೂ ಕೇಂದ್ರ ಸರ್ಕಾರದ ಘೋಷಣೆಗಳನ್ನು ಕೂಗಿ ಅವರಿಗೆ ಮುಜುಗರ ಉಂಟುಮಾಡಿದರು.

ಭಾಷಣ ಆರಂಭಿಸಿದ ರಾಹುಲ್ ಗಾಂಧಿ ದೆಹಲಿಯಲ್ಲಿ 2004ರಿಂದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. ದೇಶದ ಜನರಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡುವುದು ಕಾಂಗ್ರೆಸ್ ಸರ್ಕಾರದ ಮುಖ್ಯ ಗುರಿಯಾಗಿದೆ. ಅದನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರವನ್ನು ಬದಲಾವಣೆ ಮಾಡಲು ಇಲ್ಲಿನ ನಾಯಕರು ಪ್ರಯತ್ನಿಸಬೇಕು. ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯಬೇಕು ಮತ್ತು ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ತಿಳಿಸಿದರು. ಇದರಿಂದ ಕೋಪಗೊಂಡ ಜನರು ರಾಹುಲ್ ವಿರುದ್ಧ ವೇದಿಕೆಯಲ್ಲಿಯೇ ಘೋಷಣೆ ಕೂಗಲಾರಂಭಿಸಿದರು.
ಕೇಂದ್ರ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಸರ್ಕಾರದಿಂದ ತಮಗೆ ಯಾವುದೇ ಸವಲತ್ತುಗಳು ದೊರೆಯುತ್ತಿಲ್ಲ. ಕೇಂದ್ರದಲ್ಲಿ ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಆದರೂ, ಏಕೆ ಸವಲತ್ತು ನೀಡುತ್ತಿಲ್ಲ ಎಂದು ಪ್ರಶ್ನಿಸಿ ಯುವರಾಜನಿಗೆ ಮುಜುಗುರ ತಂದರು.
ಸಮಾವೇಶದಲ್ಲಿ ರೈತರಿಗೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರ ನೀಡಿರುವ ಸವಲತ್ತುಗಳ ಬಗ್ಗೆ ರಾಹುಲ್ ಗಾಂಧಿ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಅವರ ಆಕ್ರೋಶ ಕಡಿಮೆಯಾಗಲಿಲ್ಲ.
ಬಹಿರಂಗವಾಗಿಯೇ ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾದ ಕಾರಣ ಸಮಾವೇಶದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ಪರಿಸ್ಥಿತಿ ನೀಯಂತ್ರಿಸಲು ಹರಸಾಹಸ ಪಟ್ಟು, ರೈತರನ್ನು ಸಮಾಧಾನ ಪಡಿಸಿ ರಾಹುಲ್ ಗಾಂಧಿ ಭಾಷಣ ಮುಂದುವರೆಸಲು ಅವಕಾಶ ಮಾಡಿಕೊಟ್ಟರು.












Click it and Unblock the Notifications