Get Updates
Get notified of breaking news, exclusive insights, and must-see stories!

ಅತ್ತ ರೈತರು-ಪೊಲೀಸರ ಸಂಘರ್ಷ, ಇತ್ತ ಅಕ್ಕಪಕ್ಕದ ರಾಜ್ಯಗಳ ಸಿಎಂ ನಡುವೆ ವಾಕ್ಸಮರ

ಚಂಡೀಗಡ, ನವೆಂಬರ್ 27: ಕೃಷಿ ಮಸೂದೆಗಳನ್ನು ವಿರೋಧಿಸಿದ ರೈತ ಸಂಘಟನೆಗಳು ಆಯೋಜಿಸಿರುವ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಪಂಜಾಬ್‌ನಿಂದ ದೆಹಲಿಯತ್ತ ಹೊರಟಿದ್ದ ಸಾವಿರಾರು ರೈತರು ಹರಿಯಾಣ ಗಡಿಯಲ್ಲಿ ಪೊಲೀಸರಿಂದ ತಡೆ ಎದುರಿಸಿದ್ದಾರೆ. ರೈತರನ್ನು ಬೆದರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ. ಆದರೆ ಪೊಲೀಸರಿಗೆ ಜಗ್ಗದ ರೈತರು ಬ್ಯಾರಿಕೇಡ್‌ಗಳನ್ನು ಕಿತ್ತು, ಅವರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ.

ದೇಶವು ಸಂವಿಧಾನ ದಿನ ಆಚರಿಸುತ್ತಿರುವ ದಿನವೇ (ನ. 26) ಹರಿಯಾಣವು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸ್ ಶಕ್ತಿಯನ್ನು ಬಳಸಿರುವ ರೀತಿ ಅಣಕದಂತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟೀಕಿಸಿದ್ದರೆ, ಅಮರಿಂದರ್ ಅವರು ಅಮಾಯಕ ರೈತರನ್ನು ಸಂಘರ್ಷಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆರೋಪಿಸಿದ್ದಾರೆ.

'ಇದು ಸಂವಿಧಾನದ ದಿನದ ಖೇದಕರ ಅಣಕವಾಗಿದೆ. ರೈತರ ಸಾಂವಿಧಾನಿಕ ಹಕ್ಕನ್ನು ಅಮಾನವೀಯವಾಗಿ ಹತ್ತಿಕ್ಕಲಾಗುತ್ತಿದೆ. ಅವರನ್ನು ಹೋಗಲು ಬಿಡಿ ಖಟ್ಟರ್ ಅವರೇ. ಅವರನ್ನು ಅಂಚಿಗೆ ದೂಡಬೇಡಿ. ಅವರು ದೆಹಲಿಯಲ್ಲಿ ಶಾಂತಯುತವಾಗಿ ತಮ್ಮ ಧ್ವನಿಯನ್ನು ಎತ್ತು ಅವಕಾಶ ನೀಡಿ' ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ.

ಪಲಾಯನ ಮಾಡುತ್ತಿದ್ದೀರಿ

ಪಲಾಯನ ಮಾಡುತ್ತಿದ್ದೀರಿ

ಇದಕ್ಕೆ ಮನೋಹರ್ ಲಾಲ್ ಖಟ್ಟರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ಕಳೆದ ಮೂರು ದಿನಗಳಿಂದ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಬೇಸರದ ಸಂಗತಿಯೆಂದರೆ ನೀವು ಸಂಪರ್ಕಕ್ಕೆ ಸಿಗಬಾರದು ಎಂದು ನಿರ್ಧರಿಸಿದ್ದೀರಿ. ಇದು ನೀವು ರೈತರ ಸಮಸ್ಯೆ ವಿಚಾರದಲ್ಲಿ ಎಷ್ಟು ಗಂಭೀರರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ. ನೀವು ಬರಿ ಟ್ವೀಟ್ ಮಾಡುತ್ತಿದ್ದೀರಿ, ಆದರೆ ಮಾತುಕತೆಯಿಂದ ಪಲಾಯನ ಮಾಡುತ್ತಿದ್ದೀರಿ, ಏಕೆ?' ಎಂದು ಅವರು ಪ್ರಶ್ನಿಸಿದ್ದಾರೆ.

ಇದು ಸಂವಿಧಾನ ವಿರೋಧಿ

ಇದು ಸಂವಿಧಾನ ವಿರೋಧಿ

ಇದಕ್ಕೂ ಮುನ್ನ ಮತ್ತೊಂದು ಟ್ವೀಟ್ ಮಾಡಿದ್ದ ಅಮರಿಂದರ್, 'ದೆಹಲಿಗೆ ತೆರಳುತ್ತಿರುವ ರೈತರನ್ನು ಎಂಎಲ್ ಖಟ್ಟರ್ ಅವರ ಹರಿಯಾಣ ಸರ್ಕಾರ ಏಕೆ ತಡೆಯುತ್ತಿದೆ? ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಮೃಗೀಯ ಪಡೆಗಳನ್ನು ನಿರಂಕುಶವಾಗಿ ಬಳಸುವುದು ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ' ಎಂದಿದ್ದರು.

ಹರಿಯಾಣ ಪ್ರಚೋದಿಸುತ್ತಿದೆ

ಹರಿಯಾಣ ಪ್ರಚೋದಿಸುತ್ತಿದೆ

'ಸುಮಾರು ಎರಡು ತಿಂಗಳಿನಿಂದ ಪಂಜಾಬ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲದೆ ರೈತರು ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಲ ಪ್ರಯೋಗದಿಂದ ಅವರನ್ನು ತಡೆಯುವ ಮೂಲಕ ಹರಿಯಾಣ ಸರ್ಕಾರ ಏಕೆ ಪ್ರಚೋದನೆ ಮಾಡುತ್ತಿದೆ? ಸಾರ್ವಜನಿಕ ಹೆದ್ದಾರಿಯಲ್ಲಿ ರೈತರಿಗೆ ಶಾಂತಯುತವಾಗಿ ಸಾಗಲು ಹಕ್ಕು ಇಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

ರಾಜಕೀಯವನ್ನೇ ತ್ಯಜಿಸುತ್ತೇನೆ

ರಾಜಕೀಯವನ್ನೇ ತ್ಯಜಿಸುತ್ತೇನೆ

'ಅಮರಿಂದರ್ ಅವರೇ ನಾನು ಇದನ್ನು ಮುಂಚೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಎಂಎಸ್‌ಪಿಯಲ್ಲಿ (ಗರಿಷ್ಠ ಬೆಂಬಲ ಬೆಲೆ) ಯಾವುದೇ ತೊಂದರೆಯಾದರೂ ನಾನು ರಾಜಕಾರಣವನ್ನೇ ತ್ಯಜಿಸುತ್ತೇನೆ. ಹೀಗಾಗಿ ದಯವಿಟ್ಟು ಅಮಾಯಕ ರೈತರನ್ನು ಉದ್ರೇಕಿಸುವುದನ್ನು ನಿಲ್ಲಿಸಿ' ಎಂದು ಖಟ್ಟರ್ ಹೇಳಿದ್ದಾರೆ.

ಜನರ ಜೀವದೊಂದಿಗೆ ಆಟವಾಡಬೇಡಿ

ಜನರ ಜೀವದೊಂದಿಗೆ ಆಟವಾಡಬೇಡಿ

'ನಿಮ್ಮ ಸುಳ್ಳುಗಳಿಗೆ ಕಾಲ ಬಂದಿದೆ. ವಂಚನೆ ಮತ್ತು ಪ್ರಚಾರ ಮುಗಿದಿದೆ. ಜನರಿಗೆ ನಿಮ್ಮ ನೈಜ ಮುಖ ತೋರಿಸಿ. ಕೊರೊನಾ ಪಿಡುಗಿನ ಸಂದರ್ಭದಲ್ಲಿ ಜನರ ಜೀವಗಳನ್ನು ಅಪಾಯಕ್ಕೆ ಸಿಲುಕಿಸುವುದನ್ನು ದಯವಿಟ್ಟು ನಿಲ್ಲಿಸಿ. ಜನರ ಜೀವಗಳ ಜತೆ ಆಟವಾಡಬೇಡಿ ಎಂದು ನಿಮಗೆ ಮನವಿ ಮಾಡುತ್ತೇನೆ. ಕನಿಷ್ಠ ಈ ಪಿಡುಗಿನ ಸಂದರ್ಭದಲ್ಲಾದರೂ ಕೀಳು ರಾಜಕೀಯವನ್ನು ನಿಲ್ಲಿಸಿ' ಎಂದು ಖಟ್ಟರ್ ಹೇಳಿದ್ದಾರೆ.

ನಿಮ್ಮ ರೈತರೂ ಹೋಗುತ್ತಿದ್ದಾರಲ್ಲ?

ನಿಮ್ಮ ರೈತರೂ ಹೋಗುತ್ತಿದ್ದಾರಲ್ಲ?

'ನಿಮ್ಮ ಪ್ರತಿಕ್ರಿಯೆ ಆಘಾತ ಮೂಡಿಸಿದೆ. ಎಂಎಸ್‌ಪಿ ವಿಚಾರವಾಗಿ ನೀವು ಮನವೊಲಿಸಬೇಕಿರುವುದು ರೈತರದ್ದು. ಅವರ ದೆಹಲಿ ಚಲೋ ಪ್ರತಿಭಟನೆಗೂ ಮುನ್ನ ನೀವು ಅವರೊಂದಿಗೆ ಮಾತನಾಡಲು ಪ್ರಯತ್ನಿಸಬೇಕಿತ್ತು. ನಾನು ರೈತರನ್ನು ಪ್ರಚೋದಿಸುತ್ತಿದ್ದರೆ ಹರಿಯಾಣದ ರೈತರೂ ಏಕೆ ದೆಹಲಿಯತ್ತ ಮೆರವಣಿಗೆ ಸಾಗುತ್ತಿದ್ದಾರೆ?' ಎಂದು ಅಮರಿಂದರ್ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರ ಮಾಡಿದ್ದೇನು?

ಕೇಂದ್ರ ಸರ್ಕಾರ ಮಾಡಿದ್ದೇನು?

'ಕೋವಿಡ್ 19 ಸಂದರ್ಭದಲ್ಲಿ ಜನರ ಜೀವಕ್ಕೆ ಅಪಾಯವಾಗುತ್ತಿದೆ ಎನ್ನುವಾಗ ನೀವು, ನಿಮ್ಮ ಬಿಜೆಪಿ ಸರ್ಕಾರವು ನಮ್ಮ ರೈತರಿಗೆ ತಾವು ಮಾಡುತ್ತಿರುವ ಅನ್ಯಾಯದ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಈ ಪಿಡುಗಿನ ನಡುವೆಯೇ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ಮರೆತಿದ್ದೀರಿ. ಆಗ ಏಕೆ ನೀವು ಮಾತನಾಡಿರಲಿಲ್ಲ ಖಟ್ಟರ್ ಅವರೇ?' ಎಂದು ಅಮರಿಂದರ್ ಮತ್ತೊಂದು ಟ್ವೀಟ್‌ನಲ್ಲಿ ಹರಿಹಾಯ್ದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+