ನಿಲ್ಲುತ್ತಿಲ್ಲ ಮಣಿಪುರದಲ್ಲಿ ಪ್ರತಿಭಟನೆ: ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ
ಇಂಫಾಲ ಸೆಪ್ಟೆಂಬರ್ 10: ಮಣಿಪುರದಲ್ಲಿ ಶಾಂತಿ ನೆಲೆಸುವ ಲಕ್ಷಣಗಳು ಕಾಣಿಸುತ್ತಲೇ ಇಲ್ಲ. ಮಣಿಪುರದಲ್ಲಿ ಶಾಂತಿ ಕಾಪಾಡಲು ಆಗ್ರಹಿಸಿ ನಿರಂತರ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದೀಗ ರಾಜ್ಯದ ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಜನರು ತಮ್ಮ ಮನೆಗಳಿಂದ ಹೊರಬಾರದಂತೆ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದ್ದು, ತೌಬಾಲ್ನಲ್ಲಿ ಭಾರತೀಯ ನಾಗರಿಕ ರಕ್ಷಣಾ ಸಂಹಿತೆಯ (BNSS) ಸೆಕ್ಷನ್ 163 (2) ಅಡಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕಾರಣ, ಕರ್ಫ್ಯೂ ಸಡಿಲಿಕೆಗೆ ಸಂಬಂಧಿಸಿದ ಹಿಂದಿನ ಆದೇಶಗಳನ್ನು ಸೆಪ್ಟೆಂಬರ್ 10ರ ಬೆಳಿಗ್ಗೆ 11ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಆದ್ದರಿಂದ ಮುಂದಿನ ಆದೇಶದವರೆಗೆ ತಕ್ಷಣದಿಂದಲೇ ಕರ್ಫ್ಯೂ ಜಾರಿಗೆ ಬರಲಿದೆ. ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಹಿಂದಿನ ಎಲ್ಲಾ ಆದೇಶ ರದ್ದು
ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ ಮತ್ತೊಂದು ಆದೇಶದಲ್ಲಿ, "ಸೆಪ್ಟೆಂಬರ್ 10ರ ಕರ್ಫ್ಯೂನಲ್ಲಿನ ಸಡಿಲಿಕೆಯ ಅವಧಿಯನ್ನು ಇಂದು ಬೆಳಿಗ್ಗೆ 11ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಹಿಂದಿನ ಎಲ್ಲಾ ಆದೇಶಗಳನ್ನು ರದ್ದುಗೊಳಿಸಲಾಗಿದೆ" ಎಂದಿದೆ.
ಈ ಹಿಂದೆ ಸೆಪ್ಟೆಂಬರ್ 10 ರಂದು ಕರ್ಫ್ಯೂ ಸಡಿಲಿಕೆಯು ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ಇತ್ತು. ಆದರೆ ಇತ್ತೀಚಿನ ಆದೇಶ ಅದನ್ನು ಕೊನೆಗೊಳಿಸಿತು. ಮಾಧ್ಯಮ, ನ್ಯಾಯಾಲಯಗಳು ಮತ್ತು ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳನ್ನು ಕರ್ಫ್ಯೂನಿಂದ ಸಡಲಗೊಳಿಸಲಾಗಿದೆ.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಲು ಡಿಜಿಪಿ ಮತ್ತು ಭದ್ರತಾ ಸಲಹೆಗಾರರಿಗೆ ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತೌಬಲ್ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಕೂಟಗಳನ್ನು ಹೊರತುಪಡಿಸಿ ಕರ್ಫ್ಯೂ ವಿಧಿಸಲಾಗಿದೆ.

ಸೋಮವಾರ ಜಿಲ್ಲೆಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಒಬ್ಬರು ಗುಂಡು ಹಾರಿಸಿದ್ದು, ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ಹಾಗೂ ರಾಜ್ಯದ ಪ್ರಾದೇಶಿಕ ಮತ್ತು ಆಡಳಿತದ ಸಮಗ್ರತೆಯನ್ನು ರಕ್ಷಿಸಲು ಒತ್ತಾಯಿಸಿ ಸೋಮವಾರ ಸಾವಿರಾರು ವಿದ್ಯಾರ್ಥಿಗಳು ಮಣಿಪುರ ಸೆಕ್ರೆಟರಿಯೇಟ್ ಮತ್ತು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದರು. ಇತ್ತೀಚಿನ ಹಿಂಸಾತ್ಮಕ ಘಟನೆಗಳಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಾಜ್ಯದ ಬಿಷ್ಣುಪುರ್ ಜಿಲ್ಲೆಯ ಮೊಯಿರಾಂಗ್ನಲ್ಲಿ ಸೆಪ್ಟೆಂಬರ್ 6ರಂದು ಆರ್ಪಿಜಿ ದಾಳಿ ನಡೆದಿದ್ದು, ಮಣಿಪುರದ ಮೊದಲ ಮುಖ್ಯಮಂತ್ರಿ ಮೈರೆಂಬಮ್ ಕೊಯಿರೆಂಗ್ ಸಿಂಗ್ ಅವರ ನಿವಾಸದಲ್ಲಿ ಪೂಜೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.
ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 7 ರಂದು ಕುಕಿ ಹೋರಾಟಗಾರರು ನಡೆಸಿದ ದೀರ್ಘ ಶ್ರೇಣಿಯ ರಾಕೆಟ್ ದಾಳಿಗೆ ಐವರು ಹತ್ಯೆಯಾಗಿದ್ದರು. ಈ ಘಟನೆಯ ನಂತರ ರಾಜ್ಯಾದ್ಯಂತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಈ ಬಂಡಾಯ ಹೋರಾಟಗಾರರು ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ನುಗ್ಗಿ ನಿದ್ದೆಯಲ್ಲೇ ಗುಂಡಿಟ್ಟು ಕೊಂದ ಬಳಿಕ ಪರಿಸ್ಥಿತಿ ಬಿಗಡಾಯಿಸಿದೆ.
24 ಗಂಟೆಗಳ ಗಡುವು
ವಿದ್ಯಾರ್ಥಿ ಮುಖಂಡ ಚೌಧರಿ ವಿಕ್ಟರ್ ಸಿಂಗ್ ಮಂಗಳವಾರ ಬೆಳಗ್ಗೆ ಮಾತನಾಡಿ, "ನಮ್ಮ ಆರು ಬೇಡಿಕೆಗಳಿಗೆ ಸ್ಪಂದಿಸಲು ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ 24 ಗಂಟೆಗಳ ಗಡುವು ನೀಡಿದ್ದೇವೆ. ಗಡುವು ಮುಗಿದ ನಂತರ ನಾವು ನಮ್ಮ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ" ಎಂದು ಹೇಳಿದರು.












Click it and Unblock the Notifications