ಖಿನ್ನತೆ, ಆತ್ಮಹತ್ಯೆ ಕುರಿತು ಅಪಹಾಸ್ಯ ಮಾಡಿದ ಮೋದಿ: ಇದು ದುರಂತ ಎಂದ ಪ್ರಿಯಾಂಕಾ ಗಾಂಧಿ
ಬೆಂಗಳೂರು, ಏಪ್ರಿಲ್ 27: ಖಿನ್ನತೆ ಹಾಗೂ ಆತ್ಮಹತ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅಪಹಾಸ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಆತ್ಮಹತ್ಯೆ ಘಟನೆ ಕುರಿತು ಮೋದಿ ಅವರು ಮಾತನಾಡಿರುವ ವಿಡಿಯೊ ಕ್ಲಿಪ್ ಒಂದು ಹಂಚಿಕೊಂಡಿರುವ ಪ್ರಿಯಾಂಕಾ, ' ಇದು ದುರಂತ ' ಎಂದು ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಆತ್ಮಹತ್ಯಾ ಟಿಪ್ಪಣಿಯನ್ನು ಒಳಗೊಂಡ ಹಾಸ್ಯಚಟಾಕೆ ಹಾರಿಸಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮತ್ತು ಅವರ ಹಾಸ್ಯಕ್ಕೆ ಮನಃಪೂರ್ವಕವಾಗಿ ನಗುತ್ತಿರುವವರನ್ನು ಅಸೂಕ್ಷ್ಮರೆಂದು ಪ್ರಿಯಾಂಕಾ ಕರೆದಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಪಹಾಸ್ಯ ಮಾಡುವ ಬದಲು ಉತ್ತಮ ಅರಿವನ್ನು ಹೊಂದಿಬೇಕು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಬುಧವಾರ ಮಾಧ್ಯಮ ವಾಹಿನಿಯೊಂದರ ಸಮಾವೇಶದಲ್ಲಿ ಮಾತನಾಡಿದ್ದರು. ತಮ್ಮ ಮಗಳ ಆತ್ಮಹತ್ಯೆ ಟಿಪ್ಪಣಿಯನ್ನು ಓದುವ ಪ್ರಾಧ್ಯಾಪಕರೊಬ್ಬರು ಎಷ್ಟು ವರ್ಷಗಳ ಪ್ರಯತ್ನದ ಹೊರತಾಗಿಯೂ ಕಾಗುಣಿತ ತಪ್ಪಾಗಿದೆ ಎಂದು ಹೇಳಿದರು ಎಂಬ ಹಾಸ್ಯ ಚಟಾಕೆಯನ್ನು ಮೊದಿ ಹಾರಿಸಿದ್ದರು.
ಚಾನೆಲ್ನ ಮುಖ್ಯ ಸಂಪಾದಕರು ಹಿಂದಿಯಲ್ಲಿ ಚೆನ್ನಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ ಎಂದು ಹೇಳುವಾಗ ಪ್ರಧಾನಿ ಈ ಹಾಸ್ಯಚಟಾಕೆಯನ್ನು ಹಾರಿಸಿದ್ದರು.
Depression and suicide, especially among the youth IS NOT a laughing matter.
— Priyanka Gandhi Vadra (@priyankagandhi) April 27, 2023
According to NCRB data, 164033 Indians committed suicide in 2021. Of which a huge percentage were below the age of 30. This is a tragedy not a joke.
The Prime Minister and those laughing heartily at… pic.twitter.com/yoPt5c8Kx7
ಸಮಾವೇಶದಲ್ಲಿ ಮಾತನಾಡಿರುವ ಮೋದಿಯವರ ಹಾಸ್ಯದ ವೀಡಿಯೊವನ್ನು ಟ್ಯಾಗ್ ಮಾಡಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. 'ಖಿನ್ನತೆ ಮತ್ತು ಆತ್ಮಹತ್ಯೆ ನಗುವ ವಿಷಯವಲ್ಲ. ಎನ್ಸಿಆರ್ಬಿ ಅಂಕಿಅಂಶಗಳ ಪ್ರಕಾರ, 2021 ರಲ್ಲಿ 1,64,033 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನ ಶೇಕಡಾವಾರು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದು ದುರಂತ. ತಮಾಷೆಯಲ್ಲ' ಎಂದು ಹೇಳಿದ್ದಾರೆ.

'ಪ್ರಧಾನಿ ಮತ್ತು ಅವರ ಹಾಸ್ಯಕ್ಕೆ ಮನಃಪೂರ್ವಕವಾಗಿ ನಗುವವರು ಯುವಕರಲ್ಲಿ ಉತ್ತಮ ಶಿಕ್ಷಣ ಮತ್ತು ಜಾಗೃತಿ ಮೂಡಿಸಬೇಕು. ಇದು ಸೂಕ್ಷ್ಮ ವಿಷಯವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟ್ವಿಟರ್ನಲ್ಲಿ ಹೇಳಿದ್ದಾರೆ. ಪಿಎಂ ಮೋದಿ ಮತ್ತು 'ದಿ ಲೈವ್ ಲವ್ ಲಾಫ್ ಫೌಂಡೇಶನ್' ಹಾಗೂ ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಪ್ರಿಯಾಂಕಾ ಮೇನಿಯಾ
ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡುವಂತೆ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಬೃಹತ್ ರೋಡ್ ಶೋ ನಡೆಸಿದರು.
ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದ ಮೇಲೆ ಪ್ರಿಯಾಂಕಾ ರೋಡ್ ಶೋ ಮಾಡಿದ್ದಾರೆ. ರಸ್ತೆಗಳ ಬದಿಗಳಲ್ಲಿ ಮತ್ತು ಹತ್ತಿರದ ಕಟ್ಟಡಗಳಲ್ಲಿ ನೆರೆದಿದ್ದ ಜನಸಮೂಹವು ಅವರಿಗೆ ಸ್ವಾಗತ ನೀಡಿತು. 'ಕಾಂಗ್ರೆಸ್ ಪಾರ್ಟಿ ಕೀ ಜೈ', 'ಪ್ರಿಯಾಂಕಾ ಗಾಂಧಿ ಕಿ ಜೈ', 'ರಾಹುಲ್ ಗಾಂಧಿ ಕಿ ಜೈ' ಎಂಬ ಘೋಷಣೆಗಳು ಮೊಳಗಿದವು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರತ್ತ ಪ್ರಿಯಾಂಕಾ ಕೈ ಬೀಸಿದರು.
ಈ ವೇಳೆ ಮಾತನಾಡಿದ ಅವರು, 'ಕಾಂಗ್ರೆಸ್ ಅನ್ನು ಗೆಲ್ಲಿಸಿ, ಕರ್ನಾಟಕವನ್ನು ಗೆಲ್ಲಿಸಿ, ಈ ಚುನಾವಣೆಯಲ್ಲಿ ನಿಮ್ಮ ಭವಿಷ್ಯಕ್ಕಾಗಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ್ತು ನಿಮ್ಮ ರಾಜ್ಯಕ್ಕಾಗಿ ಮತ ಚಲಾಯಿಸಿ' ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಶೃಂಗೇರಿಯ ಶಾರದ ದೇವಸ್ಥಾನಕ್ಕೆ ಭೇಟಿ ನೀಡಿ ಬಾಳೆಹೊನ್ನೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಿಯಾಂಕಾ ಮಾತನಾಡಿದರು. 224 ಸದಸ್ಯ ಬಲದ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications