ಉದ್ಯಮಿ ರಾಕೇಶ್ ಜುಂಜುನ್ ವಾಲ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಮುಂಬೈ, ಆಗಸ್ಟ್ 14: ಭಾರತ ಷೇರು ಮಾರುಕಟ್ಟೆಯ ಬಿಗ್ಬುಲ್ ಎಂದೇ ಹೆಸರಾಗಿದ್ದ, ಭಾರತದ ವಾರೆನ್ ಬಫೆಟ್ ಎಂದೇ ಕರೆಸಿಕೊಳ್ಳುತ್ತಿದ್ದ, ಷೇರು ವ್ಯಾಪರಿ ಮತ್ತು ಹೂಡಿಕೆದಾರ ರಾಕೇಶ್ ಜುಂಜುನ್ ವಾಲ ಭಾನುವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಸಾವನ್ನಪ್ಪಿದ್ದರು ಎಂದು ಘೋಷಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಫೋರ್ಬ್ಸ್ ಪ್ರಕಾರ ರಾಕೇಶ್ ಜುಂಜುನ್ ವಾಲ ಅವರ ಒಟ್ಟು ಆಸ್ತಿ ಮೌಲ್ಯ 5.5 ಶತಕೋಟಿ ಡಾಲರ್. 62ನೇ ವಯಸ್ಸಿನ ಉದ್ಯಮಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Breaking News: ಜನಪ್ರಿಯ ಉದ್ಯಮಿ, ಹೂಡಿಕೆದಾರ ರಾಕೇಶ್ ಇನ್ನಿಲ್ಲ
ರಾಕೇಶ್ ಜುಂಜುನ್ ವಾಲ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, "ರಾಕೇಶ್ ಜುಂಜುನ್ವಾಲಾ ಅದಮ್ಯರಾಗಿದ್ದರು. ಪೂರ್ಣ ಜೀವನ, ಹಾಸ್ಯ ಮತ್ತು ಒಳನೋಟವುಳ್ಳ ಅವರು ಆರ್ಥಿಕ ಜಗತ್ತಿಗೆ ಅಳಿಸಲಾಗದ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಭಾರತ ದೇಶದ ಅಭಿವೃದ್ಧಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಅವರ ಅಗಲಿಕೆ ದುಃಖ ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ." ಎಂದು ಟ್ವೀಟ್ ಮಾಡಿದ್ದಾರೆ.
ಸಂತಾಪ ಸೂಚಿಸಿ ಹಲವರು ಟ್ವೀಟ್; ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್, "ದಲಾಲ್ ಸ್ಟ್ರೀಟ್ನ ಬಿಗ್ ಬುಲ್ನ ಯುಗಾಂತ್ಯವಾಗಿದೆ. ರಾಕೇಶ್ ಜುಂಜುನ್ ವಾಲ ನಮ್ಮನ್ನು ಅಗಲಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಓಂ ಶಾಂತಿ." ಎಂದು ಟ್ವೀಟ್ ಮಾಡಿದ್ದಾರೆ.
ಚಲನಚಿತ್ರ ನಿರ್ದೇಶಕ ಕುನಾಲ್ ಕೊಹ್ಲಿ ರಾಕೇಶ್ ಜುಂಜುನ್ ವಾಲ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಇದು ನಿಜಕ್ಕೂ ದುಃಖದ ಸುದ್ದಿ, ನಿಮ್ಮ ಜೊತೆ ಸಾಕಷ್ಟು ಬಾರಿ ಮಾತನಾಡಿದ್ದೇನೆ, ಅದ್ಭುತವಾದ ವ್ಯಕ್ತಿತ್ವ, ತತ್ವಜ್ಞಾನಿ, ನಿಮ್ಮನ್ನು ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಯುವ ಉದ್ಯಮಿ ಅಕ್ಷತ್ ಸರಫ್ ಟ್ವೀಟ್ ಮಾಡಿದ್ದು, "ಭಾರತ ಷೇರು ಮಾರುಕಟ್ಟೆಯ ಬಿಗ್ ಬುಲ್, ರಾಕೇಶ್ ಜುಂಜುನ್ ವಾಲ ನಮ್ಮನ್ನು ಅಗಲಿದ್ದಾರೆ. ಭಾರತದ ಹೂಡಿಕೆದಾರರ ವಲಯಕ್ಕೆ ಇದು ತುಂಬಲಾರದ ನಷ್ಟ, ಓಂ ಶಾಂತಿ" ಎಂದು ಹೇಳಿದ್ದಾರೆ.