ಟೊಮೆಟೋ ದರ ಗಗನಕ್ಕೆ, ಸಲಾಡ್ ತಿನ್ನುವುದು ಸುಲಭವಲ್ಲ!
ನವದೆಹಲಿ, ಜೂನ್ 28; ದೇಶದ ವಿವಿಧ ರಾಜ್ಯಗಳಲ್ಲಿ ಟೊಮೆಟೋ ಸೇರಿದಂತೆ ತರಕಾರಿಗಳ ಬೆಲೆ ಗಗನಕ್ಕೆ ಏರಿದೆ. ಅಡುಗೆ ಮನೆಯಲ್ಲಿ ಸಲಾಡ್ ತಯಾರಿಸಿ ತಿನ್ನುವುದು ಸುಲಭದ ಮಾತಾಗಿ ಉಳಿದಿಲ್ಲ. ಹೋಟೆಲ್, ದರ್ಶನಿಗಳಲ್ಲಿ ಟೊಮೆಟೋ ಬಾತ್ ಕಾಣೆಯಾಗುವ ದಿನ ದೂರವಿಲ್ಲ.
ಒಂದು ಕಡೆ ಮುಂಗಾರು ಮಳೆಯ ಕೊರತೆಯ ಕಾರಣ, ಮತ್ತೊಂದು ಕಡೆ ರಫ್ತು ಹೆಚ್ಚಾಗಿರುವ ಕಾರಣ ವಿವಿಧ ರಾಜ್ಯಗಳಲ್ಲಿ ಟೊಮೆಟೋ ಬೆಲೆ 100ರ ಗಡಿಯನ್ನು ದಾಟಿದೆ. ಇದರಿಂದಾಗಿ ಬಡ, ಮಧ್ಯಮ ವರ್ಗದ ಜನರ ಅಡುಗೆ ಮನೆಯ ಲೆಕ್ಕಾಚಾರಗಳೇ ಬದಲಾಗಿವೆ.

ಟೊಮೆಟೋ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಕೆಲವೇ ರಾಜ್ಯಗಳಲ್ಲಿ ಋತುಮಾನ ಆಧಾರಿತವಾಗಿ ಬೆಳೆ ಕೊರೆತೆಯ ಕಾರಣ ಬೆಲೆ ಏರಿಕೆಯಾಗಿದೆ. ಇದು ತಾತ್ಕಾಲಿಕ, ಬೆಲೆ ಕಡಿಮೆಯಾಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಕರ್ನಾಟಕದಲ್ಲಿ ಬೆಲೆ ಏರಿಕೆ: ಟೊಮೆಟೋ ಬೆಲೆ ಕರ್ನಾಟಕದಲ್ಲಿ ಭಾರೀ ಏರಿಕೆ ಕಂಡಿದೆ. ಮೇ ತಿಂಗಳಿನಲ್ಲಿ ಕೆಜಿ ಟೊಮೆಟೋ ಬೆಲೆ 40 ರೂ. ಇತ್ತು. ಜೂನ್ ತಿಂಗಳ ಕೊನೆಯ ವಾರಕ್ಕೆ ದರ ಕೆಜಿಗೆ 125 ರೂ.ಗೆ ಏರಿಕೆ ಕಂಡಿದೆ. ರಾಜ್ಯದ ಪ್ರಮುಖ ಟೊಮೆಟೋ ಮಾರುಕಟ್ಟೆ ಕೋಲಾರದಲ್ಲಿ ದರ ಹೆಚ್ಚಳದ ಪರಿಣಾಮ ರೈತರು ಸಂತಸಗೊಂಡಿದ್ದಾರೆ.
ದೆಹಲಿಯಲ್ಲಿ ಟೊಮೆಟೋ ಬೆಲೆ ಒಂದೇ ವಾರದಲ್ಲಿ 80 ರೂ.ಗೆ ಏರಿಕೆಯಾಗಿದೆ. ಮಧ್ಯ ಪ್ರದೇಶದಲ್ಲಿ 110 ರೂ. ಕೆಜಿಗೆ ಮಾರಾಟವಾಗುತ್ತಿದೆ. ಗ್ರಾಹಕರ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಟೊಮೆಟೋ ದರ ಜೂನ್ 27ರಂತೆ ಕೆಜಿಗೆ 46 ರೂ. ಇದೆ. 50 ರಿಂದ 122 ರೂ.ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಟೊಮೆಟೋ ಬೆಳೆಗೆ ಹಾನಿ ಮಾಡಿದೆ. ಮಾರುಕಟ್ಟೆಗೆ ಸರಬರಾಜು ಕಡಿಮೆಯಾದ ಕಾರಣ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಮುಂಗಾರು ಮಳೆಯ ಕೊರತೆ, ಅಕ್ಕಪಕ್ಕದ ರಾಜ್ಯಗಳಿಗೆ, ಬಾಂಗ್ಲಾದೇಶಕ್ಕೆ ಟೊಮೆಟೋ ಪೂರೈಕೆ ಹೆಚ್ಚಾದ ಕಾರಣ ಕೊರತೆ ಉಂಟಾಗಿ ಬೆಲೆ ಏರಿಕೆಯಾಗಿದೆ.
ಈ ಬಾರಿ ಬೇಸಿಗೆಯ ಭಾರೀ ಬಿಸಿಲು, ಟೊಮೆಟೋ ಕೃಷಿ ಮಾಡುವವರು ಕಡಿಮೆಯಾಗಿರುವುದು, ಮಳೆಯ ಕೊರತೆ ಮುಂತಾದ ಕಾರಣಗಳಿಂದಲೂ ಬೆಲೆ ಏರಿಕೆಯಾಗಿದೆ. ಆದರೆ ಮುಂಗಾರು ಮಳೆ ಆರಂಭವಾದರೆ ಬೆಲೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಟೊಮೆಟೋ ಬೆಲೆ ಏರಿಕೆಯು ರಾಜಕೀಯ ವಾಕ್ಸಮರಕ್ಕೆ ಸಹ ಕಾರಣವಾಗಿದೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ಪ್ರಧಾನಿಗಳು ಟೊಮೆಟೋ, ಈರುಳ್ಳಿ, ಆಲೂಗೆಡ್ಡೆಯನ್ನು 'TOP' priority ಎಂದು ಬಣ್ಣಿಸಿದ್ದರು. ಆದರೆ ಅವರ ತಪ್ಪು ನೀತಿಯಿಂದಾಗಿ ಮೊದಲು ಟೊಮೆಟೋವನ್ನು ರಸ್ತೆಗೆ ಚೆಲ್ಲಲಾಯಿತು. ಈಗ ಬೆಲೆಗಳು ಕೆಜಿಗೆ 100 ರೂ. ಆಗಿದೆ" ಎಂದು ಟೀಕಿಸಿದ್ದಾರೆ.
15 ದಿನಗಳ ಹಿಂದೆ 60 ರೂ. ಇದ್ದ ಟೊಮೆಟೋ ದರ ಈಗ 100ರ ಗಡಿ ದಾಟಿದೆ. ವ್ಯಾಪಾರಿಗಳ ಪ್ರಕಾರ ಸದ್ಯಕ್ಕೆ ಟೊಮೆಟೋ ದರಗಳು ಕಡಿಮೆ ಆಗುವುದಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಟೊಮೆಟೋ ಬೆಲೆ ಭಾರೀ ಕುಸಿತ ಕಂಡಿತ್ತು. ಆಗ ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡಿದರು. ಅದರ ಪರಿಣಾಮ ಈಗ ಬೆಳೆ ಕೊರತೆ ಆಗಿ, ದರ ಏರಿಕೆಯಾಗಿದೆ.
ಭಾರತದಲ್ಲಿ ಒಟ್ಟು 2 ಹಂತದಲ್ಲಿ ಟೊಮೆಟೋ ಬೆಳೆಯಲಾಗುತ್ತದೆ. ರಬಿ ಬೆಳೆ ಅವಧಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇವು ಮಾರ್ಚ್ನಿಂದ ಆಗಸ್ಟ್ ತನಕ ಮಾರುಕಟ್ಟೆಗೆ ಬರುತ್ತದೆ. ಖಾರಿಫ್ ಅವಧಿಯಲ್ಲಿ ಉತ್ತರ ಪ್ರದೇಶ, ನಾಸಿಕ್, ಮಹಾರಾಷ್ಟ್ರದ ಕೆಲವು ಜಿಲ್ಲೆಗಳಿಂದ ಮಾರುಕಟ್ಟೆಗೆ ಟೊಮೆಟೋ ಬರುತ್ತದೆ.












Click it and Unblock the Notifications