ಗುರುವಾರದಿಂದ ರಾಷ್ಟ್ರವ್ಯಾಪಿ ಲಾರಿ-ಟ್ರಕ್ ಮುಷ್ಕರಕ್ಕೆ ಕರೆ
ಬೆಂಗಳೂರು, ಜುಲೈ 19: ಇಂಧನ ಬೆಲೆ ಏರಿಕೆ ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟ್ರಕ್ ಹಾಗೂ ಲಾರಿ ಮಾಲೀಕರ ಸಂಘಟನೆಗಳು ಜುಲೈ20ರಿಂದ ಅನಿರ್ಧಿಷ್ಟಾವಧಿ ಕಾಲ ಮುಷ್ಕರ ಹೂಡಲು ಕರೆ ನೀಡಿವೆ.
ಪೆಟ್ರೋಲ್ ಗೆ ರಾಷ್ಟ್ರವ್ಯಾಪಿ ಏಕರೂಪ ದರ ನಿಗದಿ, ತ್ರೈಮಾಸಿಕ ಪರಿಶೀಲನಾ ಪದ್ದತಿ, ಟೋಲ್ ಮುಕ್ತ ಭಾರತಕ್ಕೆ ಆಗ್ರಹಿಸಿ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ವತಿಯಿಂದ ಜುಲೈ 20ರಿಂದ ದೇಶದೆಲ್ಲೆಡೆ ವಾಣಿಜ್ಯ ವಾಹನಗಳನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟ ಅವಧಿ ಮುಷ್ಕರ ಆರಂಭಗೊಳ್ಳಲಿದೆ.

ಹಾಲು, ಔಷಧಿ, ತರಕಾರಿ, ಪೆಟ್ರೋಲ್, ಇಂಧನ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ವಾಹನಗಳನ್ನು ದೇಶಾದ್ಯಂತ ಸ್ಥಗಿತಗೊಳಿಸಿ, ಮುಷ್ಕರ ಮಾಡಲಾಗುತ್ತದೆ ಎಂದು ಕರ್ನಾಟಕ ಭಾಗದ ಪದಾಧಿಕಾರಿ ಸೈಯದ್ ಸೈಫುಲ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಥರ್ಡ್ ಪಾರ್ಟಿ ವಿಮಾ ಪಾಲಿಸಿ ದರ ಕಡಿತ ಗೊಳಿಸುವುದು, ಪಾರದರ್ಶಕತೆ ಕಾಯ್ದುಕೊಳ್ಳು ವುದು, ಟಿಡಿಎಸ್ ರದ್ದುಗೊಳಿಸುವುದು, ಪೂರ್ವಭಾವಿ ಆದಾಯ ಕಾಯ್ದೆ ಪರಿವರ್ತಿಸಲು ಆಗ್ರಹಿಸಲಾಗುತ್ತದೆ.
ಈ-ವೇ ಬಿಲ್ ಕುರಿತು ಎದುರಾಗಿರುವ ಸಮಸ್ಯೆ ಪರಿಹರಿಸಬೇಕಾಗಿದೆ. ಪ್ರವಾಸಿ ವಾಹನ ಹಾಗೂ ಬಸ್ ಗಳಿಗೆ ರಾಷ್ಟ್ರೀಯ ಪರವಾನಗಿ ನೀಡಬೇಕು, ಜವಾಹರ ಲಾಲ್ ನೆಹರು ಪೋರ್ಟ್ ಟ್ರಸ್ಟ್ ನೂತನವಾಗಿ ಪ್ರಕಟಿಸಿರುವ ನೇರ ಫೋರ್ಟ್ ಡೆಲಿವರಿ ಪದ್ದತಿ ಯನ್ನ ರದ್ದುಗೊಳಿಸುವುದು, ಬಂದರುಗಳಲ್ಲಿ ಆಗುತ್ತಿರುವ ದಟ್ಟಣೆ ಸುಗಮಗೊಳಿಸಬೇಕೆಂದು ಒತ್ತಾಯಿಸಲಾಗುತ್ತದೆ.
ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಅಧ್ಯಕ್ಷತೆಯಲ್ಲಿ ಅನಿರ್ಧಿಷ್ಟ ಅವಧಿ ಮುಷ್ಕರದ ಕುರಿತು ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಲಾರಿ, ಟ್ಯಾಕ್ಸಿ, ಟ್ರಕ್, ಮಿನಿಗೂಡ್ಸ್, 3 ಮತ್ತು 4 ಚಕ್ರಗಳ ವಾಹನಗಳ ಮಾಲೀಕರು ಪಾಲ್ಗೊಂಡಿದ್ದರು.
ಕೇರಳದಲ್ಲಿ ಜುಲೈ 20ರಿಂದ ಮುಷ್ಕರ ನಡೆಸಲು All India Motor Transport Congress (AIMTC) ಕರೆ ನೀಡಿದೆ.












Click it and Unblock the Notifications